
ವನಮಾಲಾ ಸಂಪನ್ನಕುಮಾರ
ಆತಂಕ
~~~~~~
ನಾನು ಪಡೆದದ್ದನ್ನೆಲ್ಲ
ನಿನಗೆ ಕೊಡಬೇಕೆಂದಿದ್ದೇನೆ
ನೀನು ಹೇಗೆ ಸ್ವೀಕರಿಸುವೆಯೋ ತಿಳಿಯೆ
ಅದರಲ್ಲಿ ತುಂಬ ದು:ಖವಿದೆ.

ಹಾಗೆಯೇ ಮರೆಯಾದವರು
~~~~~~~~~~~~~~~~~~~
ಅರಳುವುದನ್ನು ನೋಡಬೇಕಿತ್ತು
ರಾತ್ರಿ ಮರೆತೆ
ಬೆಳಗ್ಗೆದ್ದರೆ ಕೊಕ್ಕರೆಯ ಹೆಣದಂತೆ
ಗಿಡದಲ್ಲಿ ಬಾಡಿದ ಬ್ರಹ್ಮಕಮಲಗಳು
ಲೈಕ್ಸ್ ಬಯಸದೆ ಕಮೆಂಟ್ಸ್ ಕೇಳದೆ
ಯಾರ ಬರವಿಗೂ ಕಾಯದೆ
ಕೆಲಸ ಮುಗಿಸಿ ಕತ್ತಲಲ್ಲೇ ಮುದುಡಿ
ಮರೆಯಾದ ಹೂವುಗಳು
ನನ್ನಮ್ಮ ಅಜ್ಜಿಯರ ನೆನಪಿಸಿದವು.

‘ಕವಿತೆ ‘ಕವಿಯ ವ್ಯಥೆಯಲ್ಲ
~~~~~~~~~~~~~~~~~
ಆ ರಾತ್ರಿ ಪದ್ಯ ನಿದ್ರಿಸಲಿಲ್ಲ
ಏನೋ ತೊಳಲಾಟ
ಪಕ್ಕಕ್ಕೆ ಹೊರಳಿದರೆ
ಎಬ್ಬಿಸುವ ಶ್ರಮವೇನಿಲ್ಲ
ಕವಿಗೂ ನಿದ್ದೆಯಿಲ್ಲ
ಕವಿತೆ ಎಂದರೆ ಕವಿಯ ವ್ಯಥೆಯೇ
ನನಗಿಂತ ಹೆಚ್ಚು ನಿನ್ನನ್ನು ವಿಚಾರಿಸಿದರಲ್ಲ…
ಕನಲಿ ಕೇಳಿತು ಕವಿತೆ
ಕಾವ್ಯಪ್ರಿಯರಲ್ಲಿ ಎರಡು ಬಗೆ
ಒಂದಷ್ಟು ಜನ ಕವಿತೆಯೊಳಗಿಣುಕಿದರೆ
ಇನ್ನಷ್ಟು ಮಂದಿ ಕವಿಯ ಎದೆಯೊಳಗೆ !
ಮಾತಿಲ್ಲದೆ ಕವಿ ಹಾಗೇ ಮಗ್ಗುಲಾದರೆ…
ನಿಟ್ಟುಸಿರಿಗೆ ದಿಂಬು ನಲುಗಿತು





Kavanagalu tumba chennagive