ಪರಮೇಶ್ವರ ಗುರುಸ್ವಾಮಿ
ಚಿತ್ರ 2ರಲ್ಲಿರುವವರು: ಕ್ಯಾಮೆರಾ ಹಿಂದೆ ಎ.ವಿ.ಮಾಧವಮೂರ್ತಿ, ಸಹನಿರ್ದೇಶಕ ಉಮಾಶಂಕರಸ್ವಾಮಿ, ಸಹಾಯಕ ನಿರ್ದೇಶಕ ಕತ್ಲು ಸತ್ಯ ಮತ್ತು ನಾನು. ನಿಂತವರಲ್ಲಿ ಎಡದಿಂದ ಪ್ರಸಾಧನ ಕಲಾವಿದ ನೊಣವಿನಕೆರೆ ಕುಮಾರ್, ಕನ್ನಡಕ ಹಾಕಿರುವವರು ಜಿಲ್ಲಾಧಿಕಾರಿ ಜೆ.ಡಿ.ಶೀಲಂ ಮತ್ತುಳಿದವರು ಸ್ಥಳೀಯರು.
ಮಂಡ್ಯ ಜಿಲ್ಲೆಯ ಸಂ.ಸಾ.ಆಂದೋಲನದ ಹಿಂದಿನ ಸಾಲಿನಲ್ಲಿ ಬಿಜಾಪುರ ಜಿಲ್ಲೆಯ ಸಂ.ಸಾ.ಆಂ.ಕ್ಕೆ ನಾನು ಆಗ ಕೆಲಸ ಮಾಡುತ್ತಿದ್ದ MESCA ಎಂಬ ಸ್ವಯಂ ಸೇವಾ ಸಂಸ್ಥೆಯ ಕಡೆಯಿಂದ “ನನಗೂ ಕಲಿಸವ್ವ” ಎಂಬ ಪ್ರೇರಣಾ ಚಿತ್ರವನ್ನು ನಿರ್ದೇಶಿಸಿದ್ದೆ. C LIZN ಮೂಲಕ “ಹಚ್ಚೇವು ಅಕ್ಷರ ದೀಪ” ಎಂಬ ಸಾಕ್ಷರತೆಯ ಪ್ರಾಮುಖ್ಯತೆ ಮತ್ತು ಅಗತ್ಯ ಕುರಿತ ದ್ವನಿ ಸುರುಳಿಯನ್ನು ನಿರ್ಮಿಸಿದ್ದೆ. ಆ ದ್ವನಿ ಸುರುಳಿಯ ನಿರ್ಮಾಣವೇ ಒಂದು ಕಥೆ. ಅದನ್ನು ಮುಂದೆ ಹೇಳುತ್ತೇನೆ. ಆದರೆ ಅದರಲ್ಲಿದ್ದ ‘ಹಚ್ಚಬ್ಯಾಡ ಹಚ್ಚಬ್ಯಾಡವ್ವ’ ಅನ್ನುವ ಕೋಟಿಗಾನಹಳ್ಳಿ ರಾಮಯ್ಯ ರಚಿಸಿದ ಪಿಚ್ಚಳ್ಳಿ ಶ್ರೀನಿವಾಸ್ ರಾಗ ಸಂಯೋಜಿಸಿದ್ದ ಬಿ.ಆರ್.ಛಾಯಾ ಹಾಡಿದ್ದ ಹಾಡು, ತುಂಬಾ ಪರಿಣಾಮಕಾರಿಯಾಗಿತ್ತು. ಬೀದಿ ನಾಟಕ ಪ್ರಚಾರ ಕಾರ್ಯಕ್ರಮದಲ್ಲಿ ಈ ಹಾಡನ್ನು ಅಳವಡಿಸಿಕೊಂಡಿದ್ದರು. ಜನ್ನಿ ಮತ್ತು ಬಸವಲಿಂಗಯ್ಯ ಇಬ್ಬರೂ ಅಥವ ಇವರಿಬ್ಬರಲ್ಲಿ ಒಬ್ಬರು ಬೀದಿ ನಾಟಕಗಳನ್ನು ನಿರ್ದೇಶಿಸಿದ್ದರು ಅನಿಸುತ್ತದೆ. ಸಾಕ್ಷ್ಯಚಿತ್ರಕ್ಕಾಗಿ ಬೀದಿ ನಾಟಕ ಪ್ರದರ್ಶನಗಳನ್ನು ಚಿತ್ರೀಕರಿಸುವಾಗ ಕಂಡಿದ್ದೇನೆ. ಈ ಹಾಡಿನ ಕೆಲವು ಸನ್ನಿವೇಶಗಳಲ್ಲಿ ಹೆಂಗಸರು ಗಂಡಸರು ಮಕ್ಕಳು ವಯಸ್ಸಾದವರೆಲ್ಲ ಅಳುತ್ತಿದ್ದರು.
ಕಳೆದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಜೆ.ಡಿ.ಶೀಲಂ ರವರು ಅಂದು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಮಾತಿನಲ್ಲಿ ಜೋರು. ಮನಸ್ಸು ಅಷ್ಟೇ ಮೃದು. ಅಂದೋಲನವನ್ನು ತಮ್ಮ ಮನೆಯ ಕೆಲಸ ಎಂಬಂತೆ ತಲೆಯ ಮೇಲೆ ಹೊತ್ತುಕೊಂಡು ನಿರ್ವಹಿಸಿದರು. ಸಮಿತಿಗೆ ಎಚ್.ಎಲ್.ಕೇಶವಮೂರ್ತಿಯವರು ಕಾರ್ಯದರ್ಶಿಯಾಗಿದ್ದರು. ಹಣಿ(ದಿ)ಯಂಬಾಡಿ ರಾಜು ಅನ್ನುವವರು ಆಂದೋಲನಕ್ಕೆ ಮೊದಲೇ ನಮಗೆ ಅಗತ್ಯವಿದ್ದ ಕಥೆಯನ್ನಿಟ್ಟುಕೊಂಡು “ಹೆಬ್ಬೆಟ್ಟು” ಎಂಬ ನಾಟಕ ಪ್ರದರ್ಶಿಸುತ್ತಿದ್ದರು. ಪ್ರೇರಣಾಚಿತ್ರ ಮಾಡಬೇಕು ಎಂದಾದಾಗ ಅದನ್ನೇ ಆಧರಿಸಿ ಕೋಟಿಗಾನಹಳ್ಳಿ ರಾಮಯ್ಯ ಮತ್ತು ನಾನು ಚಿತ್ರಕಥೆ ರಚಿಸಿದೆವು.
ಗಾದೆ ನಿಂಗಣ್ಣ ಎಂಬ ಅನಕ್ಷರಸ್ಥ ಸಾಕ್ಷರನಾಗುವ ಪಾತ್ರವಹಿಸಲು ಲೋಕೇಶ್ ಅವರನ್ನು ಕೇಳಿದಾಗ ಅವರು ಸಿನಿಮಾದಿಂದ ಕಿರುತೆರೆಗೆ ಬರಲು ಒಪ್ಪಲಿಲ್ಲ. ನನ್ನನ್ನು ಅವರ ಬಳಿಗೆ ಕರೆದುಕೊಂಡು ಹೋಗಿದ್ದ ಸಿ.ಜಿ.ಕೆ., ಚಿತ್ರದ ಉದ್ದೇಶವನ್ನು ವಿವರಿಸಿ ಒಪ್ಪಿಸಿದರು. ಒಂದು ವಾರ ಚಿತ್ರೀಕರಣ ಮಾಡಿದೆವು. ಇನ್ನೊಂದು ವಿಷಯ. MESCA ಬಿಟ್ಟು ಏನು ಮಾಡುವುದು ಅಂದುಕೊಳ್ಳುತ್ತಿದ್ದಾಗ ಟೆಂಡರ್ ಮೊಬಲಗಿಗೆ ಡಿ.ಡಿ. ತೆಗೆಸಿ ನನ್ನನ್ನು ಮಂಡ್ಯಕ್ಕೆ ಓಡಿಸಿದವರು ಇಂದೂಧರ ಹೊನ್ನಾಪುರ.
0 ಪ್ರತಿಕ್ರಿಯೆಗಳು