ಗಜಲ್
ರಾಮಕೃಷ್ಣ ಸುಗತ
ಯಾಕೊ ಸುಗತ ಇಷ್ಟು ದಣಿದಿರುವೆ ಯಾಕೋ
ಸಮಾಧಿ ಸದ್ದಿಗಾಗಿ ಸಾವ ದಣಿಸುವೆ ಯಾಕೋ
ನಿಶ್ಯಬ್ದ ಗೋರಿಯ ದೇಹ ಅತೃಪ್ತವಿರುವಾಗ
ಆತ್ಮವ ಹರಿದು ಅಲಂಕರಿಸುವೆಯೇಕೋ
ಅಳುವ ಮೋಡಕೆ ಮಳೆಬಿಲ್ಲು ಬಣ್ಣ ಪೂರೈಸುವಾಗ
ಕಣ್ಣೀರಿಗೆ ಬಣ್ಣ ದಾಸ್ತಾನಿಲ್ಲವೆಂದು ಕೊರಗುವೆಯೇಕೋ
ನೋವು ಉದ್ದೀಪನಕ್ಕೆ ಕತ್ತಲು ಸುಪಾರಿ ಪಡೆದಿರುವಾಗ
ಅಸಹಾಯಕ ಹಗಲನ್ನು ಅಷ್ಟು ದಂಡಿಸುವೆಯೇಕೋ
ನಿಷ್ಕರುಣಿ ದಂಡೆಯ ಕಾವಲಿಗೆ ಅಲೆ ಬತ್ತಿರುವಾಗ
ಖಾಲಿ ಹೃದಯದಿ ಕಲ್ಲು ಹರಡಿಕೊಂಡಿರುವೆಯೇಕೋ
ಲೆಕ್ಕ ಸುಲಭವೆಂದು ಚಂದ್ರನನ್ನೆಣಿಸುತ್ತಾ ಕುಳಿತೆ
ಚುಕ್ಕಿಗಳೆದೆಯ ಬೆಂಕಿ ನಿನ್ನ ಸುಡಲಿಲ್ಲವೇಕೋ
ನೋವಿಗೂ ದುಖಕ್ಕೂ ಮುಕ್ತ ವ್ಯಾಪಾರ ಒಪ್ಪಂದವಿರುವಾಗ
ಸುಗತನೇ ಕಣ್ಣೀರು ಖರ್ಚಾದುದಕ್ಕೆ ತೆರಿಗೆ ಕಟ್ಟುವೆಯೇಕೋ






0 Comments