ಮಹಾಂತೇಶ ಮಾಗನೂರ
ಮಾಯವಾಗಿದೆ ರಸ್ತೆಯಲ್ಲಿನ
ಕಿರಿ ಕಿರಿ ಕರ್ಕಶ ಧ್ವನಿ;
ಕೆಲವೊಮ್ಮೆ ನಮ್ಮದೇ ಮಾತು
ನಮಗೆ ಪ್ರತಿಧ್ವನಿ!
ಬೆಳಿಗ್ಗೆ ಎಬ್ಬಿಸುತ್ತಿದ್ದ ಅಲಾರಾಂ
ಪಡೆದಿದೆ ವಿಶ್ರಾಂತಿ;
ಒಂದೆರಡು ಗಂಟೆ ಹೆಚ್ಚಿನ ನಿದ್ದೆಗೆ
ಎಲ್ಲವೂ ಶಾಂತಿ ಶಾಂತಿ!
ಹೊಗೆಯುಗುಳುವ ವಾಹನಗಳಿಲ್ಲದೆ
ಸ್ವಚ್ಛವಾಗಿದೆ ಗಾಳಿ;
ಗಿಡಮರಗಳು ಗಾಳಿಗೆ ತಲೆದೂಗಿ
ಸೂಸುತಿವೆ ತಂಗಾಳಿ!
ಮಾಲಿನ್ಯದಿ ಮಸುಕು ಮಸುಕಾಗಿ
ಕಾಣುತ್ತಿತ್ತು ನೀಲಿ ಬಾನು;
ಪಾರದರ್ಶಕವೀಗ, ಕಾಣುತ್ತಿಲ್ಲ
ಭೂಮಿ ಬಾನಿನ ಮಧ್ಯ ಬೇರೇನು!
ತಲೆಯಲ್ಲಿ ಬಿತ್ತಿ ಬಿಟ್ಟಿದ್ದೇವೆ
ಸ್ವಚ್ಛತೆಯ ಮಹತ್ವ;
ಕಷ್ಟವಿದ್ದರೂ ಬೆಳೆಸುತ್ತಿದ್ದೇವೆ
ಒಳ್ಳೆಯ ವ್ಯಕ್ತಿತ್ವ!
ಮಕ್ಕಳ ಜೊತೆ ಊಟ ಆಟ
ಮನೆಯವರೊಂದಿಗೆ ಕೂಟ;
ಕಲಿಯುತ್ತಿದ್ದೇವೆ ಇತಿಮಿತಿಯಲ್ಲಿ
ನಿಭಾಯಿಸುವ ಜೀವನದ ಪಾಠ!
ಬೇಕೋ ಬೇಡವೋ ಜಗತ್ತಿನ
ಆಗುಹೋಗುಗಳಿಗೆ ನೀಡುತ್ತಿದ್ದೇವೆ ಕಿವಿ;
ಓದುವ ಬರೆಯುವ ಹವ್ಯಾಸ ಹೆಚ್ಚಾಗಿ
ಇನ್ನಷ್ಟು ಉತ್ಸಾಹಭರಿತ ಕವಿ!
0 ಪ್ರತಿಕ್ರಿಯೆಗಳು