ರವಿಕುಮಾರ್ ಟೆಲೆಕ್ಸ್
ನಮ್ಮ ಪ್ರೀತಿಯ ಪ್ರಜಾಪ್ರತಿನಿಧಿಗಳೆ….
ನಮ್ಮ ನೆತ್ತರಿನಲ್ಲಿ
ಅದ್ದಿದ ರೊಟ್ಟಿಗಳನ್ನು
ಇಲ್ಲಿ ಬಿಟ್ಟು ಹೋಗುತ್ತಿದ್ದೇವೆ.
ತಿಂದು ನಿಮ್ಮ ತಲೆಮಾರಿನ
ಅಧಿಕಾರದ ಹಸಿವ ತೀರಿಸಿಕೊಳ್ಳಿ
ನಮ್ಮ ಹಸಿವ ಹಸಿವೆಂದು
ನಮ್ಮ ಕಣ್ಣೀರ ಕಣ್ಣೀರೆಂದೆ
ಅರಿಯದ ನಿಮ್ಮ ಕಣ್ಣು- ಕರುಳುಗಳು
ಎಂದೋ ಸತ್ತು ಹೋಗಿದ್ದವು.
ಅದು ಅಧಿಕಾರವೆಂಬ ರಣಸೋಂಕಿನಿಂದ
ರೈಲು ಹಳಿಯ ಮೇಲೆ ಚೆಲ್ಲಾಡಿದ
ನಮ್ಮ ದೇಹದ ಮಾಂಸ – ಮೂಳೆ
ತುಂಡುಗಳ ತಿಂದು ಧನ್ಯರಾಗಿ
ನಾವು ಸತ್ತ ಸುದ್ದಿಯನ್ನು ಚರಿತ್ರೆಯಲ್ಲಿ
ಸೇರಿಸಬೇಡಿ
ಕೊಂದವರ ಕುರಿತು ಪ್ರಶ್ನೆಗಳು
ಎದ್ದುಬಿಟ್ಟಾವು
ಈಗಲೆ ರಕ್ತಸಿಕ್ತ ರೈಲು ಹಳಿಗಳನ್ನು
ಸ್ಯಾನಿಟೈಷರ್ , ಪ್ಲೋರ್ ಲಿಕ್ವೀಡ್ ಹಾಕಿ
ತೊಳೆದು ಬಿಡಿ
ಬದುಕಿದ್ದೆವು ಎಂಬುದಕ್ಕೆ ಯಾವ
ಕುರುಹು ಸಿಗದಿರಲಿ
ನಿಮ್ಮಂಥ ನಿರ್ಮಾನುಷರ
ನಡುವೆ ನರಳುತ್ತಾ ಬದುಕುವುದಕ್ಕಿಂತ
ಸತ್ತಿದ್ದೆ ಸುಖ
ಕೊಂದ ರೈಲಿಗೊಂದು ಧನ್ಯವಾದ.
ಇಂತಿ ನಿಮ್ಮ
– ಸೌಭಾಗ್ಯದೃಷ್ಟ
ವಲಸೆ ಕಾರ್ಮಿಕರು
ಕರುಳಿರಿಯುವ ಕವಿತೆ
ಮನುಷ್ಯರಿಗೆ ಮಾತ್ರ ಕಂಬನಿ ಉಕ್ಕಿಸುವ ಘಟನೆ.. ಕವಿತೆ ಹಿಡಿಸಿತು..