ಜಿ.ಪಿ. ಬಸವರಾಜು
ರಾಜನೇ,
ನಕಲಿಶಾಮನೇ,
ಎರಡೂ ಒಂದೇ
ಇಂದಿನ ಈ ರಂಗದಲ್ಲಿ;
ಸಿಂಹಾಸನದ ಮೇಲೆ ಕುಳಿತಾಗ
ನಕಲಿಶಾಮ, ಆಗುತ್ತಾನೆ ರಾಜ
ನಗುತ್ತಾನೆ ಎಡಬಿಡಂಗಿ
ನೋಡುತ್ತ ನೋಡುತ್ತ ಪ್ರಜೆಗಳನು
ಕೋಡಂಗಿ ಹಾಕುತ್ತಾನೆ ಹತ್ತಾರು ಲಾಗ
ಅತ್ತ ಇತ್ತ ಕೊಂಬೆಕೊಂಬೆಗೆ ಹಾರುತ್ತಾನೆ
ಜಿಗಿಯುತ್ತಾನೆ ಬಹದ್ದೂರ, ‘ಭಳಿರೇ’ ಎಂದು
ಗಳಹುತ್ತಾನೆ, ಕಾದು ಕುಳಿತ ಒಡ್ಡೋಲಗದ
ವಂದಿಮಾಗಧರು ‘ಭೋ ಪರಾಕ್ ’ ಹೇಳುತ್ತಾರೆ
ತತ್ವಮಸಿ ಎಂದು ನಗುತ್ತ
ಬಳಿದುಕೊಳ್ಳುತ್ತಾನೆ ಮುಖಕ್ಕೆ ಮಸಿ
ಕರಿಮೀಸೆ ಬಿಳಿಮೀಸೆಯಾದರೂ
ಬೀಳುತ್ತದೆ ಚಪ್ಪಾಳೆ;
ಹಾಸುತ್ತಾನೆ ಪಗಡೆಯಾಟಕ್ಕೆ
ಹೊಸ ಹಾಸು
ನಿನ್ನೆಯ ಆಟ ಬೇರೆ
ಇವತ್ತು ಉರುಳುವ
ದಾಳಗಳು ಬೇರೆ
ಸೋತರೂ ಗೆಲ್ಲತ್ತಾನೆ
ಗೆಲುವಿನ ಗೆರೆಗಳನ್ನು
ಅವನೇ ಎಳೆದಿದ್ದಾನೆ
ತನಗೆ ಬೇಕಾದ ಹಾಗೆ
ವಿರೋಧಿಗಳು ಬೆಚ್ಚುವ ಹಾಗೆ;
ಗೆಲುವಿಗೊಂದು ಕುಣಿತ
ಹೆಜ್ಜೆಗೆ ತಕ್ಕ ಗೆಜ್ಜೆ
ಚಪ್ಪಾಳೆಗೆ ನಿಂತಿದ್ದಾರೆ ಸುತ್ತ
ಅವನೇ ತಂದ ಮಂದಿ;
ಗೆಲುವೆಂದರೆ ಗೆಲುವು
ಸೋಲೆಂದರೂ ಗೆಲುವು
ಯಾವುದಕ್ಕೂ ಉಂಟು
ಇಲ್ಲೊಂದು ಹೆಜ್ಜೆ, ಕುಣಿತ
ನಕಲಿಶಾಮನ ಮೈಮಣಿತ
ಇನ್ನೆಷ್ಟು ಕಾಲ ಇದು
ಕಾಲು ದಣಿದಿವೆ
ನಶೆ ಇಳಿದಿದೆ
ರಾಜ ಬಿದ್ದಿದ್ದಾನೆ
ಸಿಂಹಾಸನದ ಕೆಳಗೆ-
ಅತ್ತ ಇತ್ತ ಕೈಕಾಲು ಎಸೆದು,
ಆದರೂ ಶಂಖ ಊದುತ್ತಾರೆ
ಚಪ್ಪಾಳೆ ತಟ್ಟುತ್ತಾರೆ
ಗೌರವಾನ್ವಿತ ರಾಷ್ಟ್ರಭಕ್ತರು
ಮಾರ್ಮಿಕ ಕವಿತೆ
ವಂದನೆ. ನೀವು ಓದಿದ್ದು ಸಂತೋಷ.