“ಕೃಪಯಾ ಬ್ಯಾಂಗಲೋರ್ ಕೋ
ಜಾನೇವಾಲೇ ಪ್ಯಾಸೆಂಜರ್ಸ್..”
–
ಹೈತಾಪೂರವೆಂಬ
ಕುಗ್ರಾಸ ಹಳ್ಳಿಗೂ
ದೆಹಲಿಯ
ನಿಜಾಮುದ್ದೀನ ಸ್ಟೇಶನ್ನಿಗೂ
ಭಾರತೀಯ ರೈಲ್ವೇದು
ಒಂದೇ ರೀತಿಯ ಸೇವೆ:
ಒಂದೇ ಧ್ವನಿ
ಒಂದೇ ಏರಿಳಿತ.
ಮಿಕ್ಕಂತೆ
ಎಲ್ಲಾ differs.
ಎಲ್ಲಾ matters.
–
ಬರೀ ಕುಡುಗೋಲು
ಮತ್ತು ಸಿಟ್ಟಿಗೆ
ರೂಪಕವಾಗಿದ್ದ ‘ಕೆಂಪು’ ಬಣ್ಣ
ಕಿಂಗ್ ಫಿಷರ್
ವಿಮಾನದಲ್ಲಿ ಮಾತ್ರ
ತಾನೇ ತಾನಾಗಿ
ಅಮಲೇರಿಸಿಕೊಂಡು
ಕರಗಿದ್ದಂತೂ ಸತ್ಯ.
ಎಲ್ಲೂ ಸಿಟ್ಟಿಲ್ಲ
ಸಿಡುಕಿಲ್ಲ.
–
ರೈಲಿನಲ್ಲಿ ಕುಳಿತ ಮದುಮಗಳಿಗೆ
ಅಂಗೈಯಲ್ಲಿನ ಮೆಹಂದಿ
ಯಾಕೆ ಕೆಂಪೇರಿಲ್ಲ
ಅನ್ನುವ ಚಿಂತೆ.
ವಿಮಾನದಲ್ಲಿ ಹುರಿದ ಮೀನು
ತಿನ್ನುತ್ತಿರುವ ಮದುಮಗನಿಗೆ
ಎಂದೋ ನೋಡಿದ್ದ
ಯಾರದೋ
ಮೀನಖಂಡದ ಚಿಂತೆ.
ತೊಟ್ಟ ಬಾಣವ
ಮತ್ತೇ ತೊಡಬಾರದಂತೆ!
–
ಮೇಲಿರುವವನು ಜಾಣ ಕಣ್ರೀ,
ತುಂಟ ಗಾಳಿ
ಸೃಷ್ಟಿಸುವವನೂ ಅವನೇ
ತೊಟ್ಟ ಫ್ರಾಕು
ಹಾರಿಸುವವನೂ ಅವನೇ
ಮತ್ತು
ಇದನ್ನೆಲ್ಲ ನೋಡಬಯಸಿದ
ನೂರಾರು ಕಣ್ಣುಗಳಲ್ಲಿ
ಧೂಳು ಚಿಮುಕಿಸುವವನೂ ಅವನೇ.
ಯಾರಿಗೆ
ಯಾರು ಬೇಲಿ?
ಯಾರಿಗೆ ಯಾರೋ
ಪುರಂದರ ವಿಠಲ!







very nice
Thanks avadhi. 🙂
-Joshi