ರತ್ನಾ ಮೂರ್ತಿ ಹೊಸ ಕವಿತೆ – ಗಮ್ಯ…

ರತ್ನಾ ಮೂರ್ತಿ

ನಮ್ಮದಲ್ಲಿ ನೆಲೆ ಬಂದೆವೆನೆ ಇಲ್ಲಿ ಏನಿದೇನು ಮರ್ಮ
ಸುಳ್ಳೆ ಬಾಳು ತೊಡಕಾಗಿಸುತ್ತ ಮರಮರಳಿ ಬರುವ ಕರ್ಮ
ಬಾಳಲಾಗದೇ ಬೆಂಕಿಯಾಗದೊಲು ತಂಗಾಳಿಯಾಗಿ ಜನಕೆ
ಮುಗಿದಂತೆ ಕೆಲಸ ಕರೆ ಬಂದಿತೆನಲು ಕೊರಗಾಗದಂತೆ ಮನಕೆ

ಸಂತನಾಗಲಿಕೆ ಸಾಧ್ಯವಿಲ್ಲದಿರೆ ಕೊಂತವಾಗಲೇಕೆ
ಕುಂತು ನಿಂತು ಮರೆ ಮಾತಿನಲ್ಲಿ ಕಾಪಟ್ಯ ಹುಸಿಯದೇಕೆ
ಧನ ಪದವಿ ಸ್ಥಾನ ಅಧಿಕಾರವೇನು ನೆರವಾಗಲಿಕ್ಕೆ ಬೇಡಾ
ಕರುಣೆ ತುಂಬಿದೆದೆ ಕಕ್ಕುಲಿತೆಯ ಕರ ಚಾಚದೇನು ನೋಡಾ

ಹಸಿವು ನಿದ್ರೆ ಭಯ ಮೈಥುನದ ಬಯಕೆ ಮೃಗದಂತೆ ನಮಗು ಇರದೇ
ಇಷ್ಟೆ ಗೋಲದಲ್ಲಿ ಸುತ್ತುತ್ತಲಿರಲು ಮನುಜರೆನ್ನಬಹುದೇ
ಎಷ್ಟೆಷ್ಟೊ ಜನ್ಮತಳೆದಿರುವೆವಂತೆ ನೆನಪಾರಿಗಿಹುದು ಹೇಳು
ಪುಣ್ಯಗಳ ಫಲಿತ ನರಜನುಮವಿರಲು ಹುಸಿಹೋಗಲೇಕೆ ಬಾಳು

ಹೆತ್ತವರು ಬಳಗ ನೆಲ ದೇಶ ಭಾಷೆ ನಮ್ಮ ಆಯ್ಕೆಗಿತ್ತೇ
ಮೈಮಾಟ ಬಣ್ಣ ಮೇಧಾವಿತನವು ಕೊಳಲು ಬಿಕರಿಗಿತ್ತೇ
ವಿಕಲಾಂಗತನವ ಬುದ್ಧಿಮಾಂದ್ಯತೆಯ ಬಯಸಿ ಪಡೆವರೇನು
ಕುಬ್ಜ ಕಾಯವನು ವಿಕೃತ ರೂಪವನು ಹೊರೆಯೆ ಸುಲಭವೇನು

ಪಡೆದು ಬಂದೆವೆನೆ ಸುಕೃತವೆನಲಷ್ಟೆ ಸಾಧನೆಯ ಪಟ್ಟಿಗಲ್ಲ
ನಡೆ ನುಡಿಯ ಮದವ ತೊಡೆಯುತ್ತ ವಿನಯ ಬೆಳೆಸಿಕೊಳೆ ಕಷ್ಟವಲ್ಲ
ಹಿಂದು ಮುಂದಿನದ ಬಲ್ಲವರು ಇಹರೆ ಇಂದು ನಾಳೆಗಿಹುದೇ
ಬಂದುದಾಯ್ತಿನ್ನು ಕೊರಗಿ ಕಳೆಯದಳಿಸುತ್ತ ಹೋಗಬರದೇ

ಕಿರುಗಾತ್ರವೇನು ಕೊರೆಯಲ್ಲ ಸಿದ್ಧಿಗೆ ಪಾತ್ರ ಬಹಳ ಮುಖ್ಯ
ಬೇಡಿ ಬಲಿ ಮುರಿದ ವಾಮನನ ನೋಡಿ ಮಾಡಬಹುದು ಸಖ್ಯ
ವ್ಯಕ್ತಿಯಾಗಿರದೆ ಶಕ್ತಿಯಾಗೆದ್ದು ಸಂಕವಾದವರ ಹಾದಿ
ಸದ್ವಿನಯ ಛಲವು ಸೌಜನ್ಯ ದೃಢವು‌ ಪಟ್ಟಿಯಲಿ ಮೊದಲ ಯಾದಿ

ಪಡೆದುದೂ ಇಹುದು ಕಳೆದುದೂ ಇಹುದು ನಾನೆಲ್ಲಿ ಹುಡುಕು ಮೊದಲು
ತೊಡಕಾಗದಂತೆ ಅಡಿಗಡಿಗೆ ಸಿಕ್ಕು ತಡೆವುದನು‌ ಮಾಡು ಬದಲು
ಏಳುಬೀಳುಗಳ ಪಯಣದುದ್ದಕೂ ಕೈಮರವ ನೆಡುತಲಿರಲು
ಮುತ್ತು ಬಿತ್ತದಲೆ ಮರೆತ ಕಂಕರಕೆ ಆಗಬಹುದು ಬರಲು

‍ಲೇಖಕರು Admin

July 30, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: