ದಿನೇಶ್ ಮಡಗಾಂವ್ಕರ್
ನಮ್ಮಜ್ಜ ಹೇಳ್ತಿದ್ದ ಇಮ್ಯಾನುಲ್ರ
ಮನೆಯ ಆಲಾಬಿ ದೇವರ ದಯೆಯಿಂದ ನೀನು ಬದುಕಿದ್ದೆ.
ಆಲಾಬಿಗೆ ಹೋದಾಗ ಇಮ್ಯಾನುಲ್ ಹೇಳ್ತಿದ್ದ
ನಮ್ಮೂರ ಚೌಡಿಯೇ ನನ್ನ ಬದುಕಿಸಿದ್ದು!
ನನ್ನ ಮುತ್ತಾತ ನಿನ್ನ ಮುತ್ತಾತ ಚಡ್ಡಿ ದೋಸ್ತರಂತೆ
ನಮ್ಮನೆಯ ಮಾಯ್ನಣ್ಣಿನ ಮರ
ಅವರಿಬ್ಬರೂ ಸೇರಿ ನೆಟ್ಟಿದ್ದಂತೆ!
ಯಾರೋ ಬಿತ್ತಿದ ವಿಷಬೀಜ ಅದರ ಸಿಹಿ ಹಾಳು ಮಾಡುತ್ತದೆಯೇ?
ಯಾ ಅಲ್ಲಾ! ಹೇ ರಾಮ್!
ನಿಮ್ಮನೆಯ ಸೋಗೆ ಮನೆಯ ಕಿಂಡಿಯಲ್ಲಿ
ಚಂದ್ರ ಕಂಡ ರಾತ್ರಿಗಳೆಷ್ಟೋ
ನಮ್ಮಮ್ಮನ ಹರಿದ ಸೀರೆಯ ಸೆರಗು
ನಿನ್ನ ಮೂಗು ಸೀಟಿದ ದಿನಗಳೆಷ್ಟೋ!
ಹೇ ರಾಮ, ನಿಮ್ಮ ಮನೆಯ ಟ್ರಂಕಿನಲ್ಲಿ
ಯಾವುದಾರರೂ ಹಳೆಯ ಪತ್ರವಿದ್ದರೆ ಹುಡುಕಿ ಕೊಡು,
ಪೇಪರಿನಲ್ಲಿ ಬರುವ ಸುದ್ದಿಯಿಂದ ನಿದ್ರೆ ಬರುತ್ತಿಲ್ಲ!
ಹೇ ಅಲ್ಲಾ! ಸಾಯಲಿ ಬಿಡು ಈ ಮಣ್ಣಿನ ಕಣಕಣಕ್ಕೂ
ಊರಲ್ಲಾಡುವ ಪ್ರತಿ ಮಕ್ಕಳಿಗೂ ಮುಪ್ಪುಡರಿದ ಕಣ್ಣುಗಳಿಗೂ
ಗೊತ್ತಿದೆ ನಾವು ನಮ್ಮವರೇ ಇಲ್ಲಿರುವವರೇ
ಅದ್ಯಾರೋ ಹೇಳುತ್ತಾರೆ, ಕೇಳುತ್ತಾರೆ ನೀನ್ಯಾರು?
ನಿನ್ನ ಪರವಾಗಿ ನಾವಿದ್ದೇವೆ, ನಮ್ಮ ಪರವಾಗಿ ನೀವಿದ್ದೀರಿ!
ಒದ್ದೋಡಿಸಬೇಕಾದದ್ದು
ಧರ್ಮದ ಹೆಸರಲ್ಲಿ ರಾಜಕೀಯ ಮಾಡುವ ಅಧರ್ಮಿಗಳನ್ನು
ನಮ್ಮ ನಿಮ್ಮನ್ನಲ್ಲ! ಬರಲಿ ನೋಡೋಣ!
ಉತ್ತರಿಸೋಕೆ ಇಡೀ ದೇಶವೇ ಇದೆ!
ಯಾ ಅಲ್ಲಾ! ಹೇ ರಾಮ್!
0 ಪ್ರತಿಕ್ರಿಯೆಗಳು