ಗೀರ್ವಾಣಿ
ಇದು ಯಾರ ಶಾಪಕ್ಕೆ ಹುಟ್ಟಿಕೊಂಡ ಕನಸು?
ಆಲದ ಮರದ ಕೆಳಗೆ
ಬೆಳೆದು ಹಣ್ಣು ಹಡೆಯುವ ಕನಸು
ಸಂಭೋಗದಾಚೆ ಚಿಗುತೇರುತ್ತಲೇ ಇಲ್ಲ
ಸಂಭವಗಳು
ಕುಮಾರ ಸಂಭವ
ಕುಮಾರಿ ಸಂಭವ!
ಯಾರಿತ್ತ ಶಾಪವೋ
ಯಾರ ಕೋಪವೋ
ಯಾರಾದರೂ ಕದ್ದು ಬಿಡಿ ನನ್ನ ಕನಸನ್ನು
ಹಚ್ಚಡದ ಬೆಳಕು ಆರಿಸಿ ಬಿಡುತ್ತೇನೆ
ಹೆಬ್ಬಾಗಿಲ ತೆರೆದಿಡುತ್ತೇನೆ
ಸದ್ದಿಗೆ ಕಿವುಡಾಗುತ್ತೇನೆ
ಯಾರಾದರೂ ಕನ್ನ ಹೊಡೆಯಬಾರದೆ?
ಉಚಿತವಾದರೂ ಸೈ
ಎಂಟಾಣೆ ಕೊಟ್ಟರೂ ಸೈ
ಕೊನೆಗೆ ಹೆಡೆ ಮುರಿ ಕಟ್ಟಿದರೂ ಸೈ
ಕದ್ದು ಬಿಡಿ ಈ ಕನಸನ್ನು
ಸ್ಖಲನಗಳಿಗೆ ಕಾದಿದ್ದಷ್ಟೇ ಬಂತು
ಕೆನ್ನೀರ ಪ್ರವಾಹಗಳು ನಿಲ್ಲಲಿಲ್ಲ
ಅಮೂರ್ತಗಳು ಮೂರ್ತವಾಗಲೇ ಇಲ್ಲ
ಕಳ್ಳಗಿಂಡಿ ತೆರೆದರೂ ಹೊರ ಹೋಗುತ್ತಿಲ್ಲ
ಯಾರಾದರೂ ಕದಿಯಬಾರದೆ ಕನಸನ್ನು
ಬಿದಿರು ಮೆಳೆಗಳಿಗೆ ವಾಪಸ್ ಕೊಟ್ಟುಬಿಡಿ ಕೊಳಲನ್ನು
ಕೊಳಲ ನಾದವನ್ನು !
very nice poem