ದಾಕ್ಷಾಯಣಿ ನಾಗರಾಜ
ಕುರುಗೋಡು । ಬಳ್ಳಾರಿ
ಜೋಪಡಿಯಲ್ಲಿ
ಜೋತಾಡುವ
ಬದುಕ ಧಾವಂತಗಳ
ಪದಗಳಲಿ ಹಿಡಿಯಲಾಗುತ್ತಿಲ್ಲ
ಯಾವುದೋ ಕಾಯ್ದೆಗೆ
ಸಿಲುಕಿ
ಬೀದಿಗೆ ಬಿದ್ದ ಬೀದಿ ವ್ಯಾಪಾರಿಯ ನೋವು
ಕಾವ್ಯವಾಗುತ್ತಿಲ್ಲ
ಆಫೀಸಿನಿಂದ ಆಫೀಸಿಗೆ
ಅಲೆವ ಸಾಕಮ್ಮನ
ಸವೆದ ಚಪ್ಪಲಿಗಳ
ಆತ್ಮ ಕಥೆ ಹೆಣೆಯಲಾಗುತ್ತಿಲ್ಲ
ಯಾಕೋ ಈಗೀಗ ಕವಿತೆ ಅರಳುತ್ತಿಲ್ಲ
ಪದದ ದ್ವಂದ್ವದ ಚಿಂತೆ
ನಿಘಂಟ ತಡಕಾಡಿ ಬಳಸಿದರೆ ಮತ್ತೇನೊ ಕಾಡುವ ಆತಂಕ
ಮತ್ತೆ ಮತ್ತೆ ಹೆಕ್ಕುವೆ
ಪದಸಂತೆಯೊಳಗೆ ಅಳಿಸುವೆ
ಬದಲಾಯಿಸುವೆ, ಸೋಲುವೆ,
ಮತ್ತೆ ಹೆಕ್ಕುವೆ
ಓಲೈಕೆಯ ಧಿಕ್ಕರಿಸಿ
ನೋವಿಗೆ ದನಿಯಾಗದ
ಅಸಹಾಯಕ ಕವಿತೆ ಮರುಗುತ್ತದೆ,,,,
ನನ್ನಂತೆ
ಯಾಕೋ ಈಗೀಗ ಕವಿತೆಗಳು
ಹುಟ್ಟುತ್ತಿಲ್ಲ,,,,
ಚೆನ್ನಾಗಿದೆ!!! 🙂
ಧನ್ಯವಾದಗಳು