ಕೆರೆಮನೆ ಶಿವಾನಂದ ಹೆಗಡೆ
ಮುಂಬೈನಲ್ಲಿ ಬಹುಕಾಲ ನೆಲೆಸಿದ್ದ ಯಕ್ಷಗಾನದ ಕುರಿತು ಅಪಾರ ಕೆಲಸ ಮಾಡಿದ, ನಮ್ಮ ಮಂಡಳಿಯ ಆಪ್ತರಾದ ಇತ್ತೀಚಿಗೆ ನಿಧನರಾದ ಮಾನ್ಯ ಶ್ರೀ ಎಚ್ ಬಿ ಎಲ್ ರಾವ್ ಅವರ ಕೆಲವು ಯಕ್ಷಗಾನ ಸಂಗ್ರಹದ ಪುಸ್ತಕಗಳನ್ನ ಅವರ ಶ್ರೀಮತಿಯವರು ನಮ್ಮ ಯಕ್ಷಗಾನ ಕೇಂದ್ರದ ಗ್ರಂಥಾಲಯಕ್ಕೆ ಪ್ರೀತಿಯಿಂದ ಕೊಡುತ್ತೇನೆಂದು ಹೇಳಿದ್ದರು. ಆದರೆ ಈ ಕೋವಿಡ್ ಸಮಯದಲ್ಲಿ ಅದನ್ನ ಮುಂಬೈನಿಂದ ನಮ್ಮಲ್ಲಿಗೆ ತಲುಪಿಸುವುದು ಹೇಗೆ ಎಂಬ ಸಮಸ್ಯೆ ಕಾಡುತ್ತಿತ್ತು.
ಯಕ್ಷಗಾನದ ಉಭಯ ತಿಟ್ಟನ್ನು ಬಲ್ಲ ಕಲಾವಿದರು, ಸಂಶೋಧಕರು ಆತ್ಮೀಯ ಮಿತ್ರರಾದ ಶ್ರೀ ಮಧುಸೂಧನ ರಾವ್ ಮುಂಬೈನಿಂದ ತಮ್ಮ ಊರು ಮಂಗಳೂರಿಗೆ ಹೋಗುವ ಮಾರ್ಗದಲ್ಲಿ ತಾನು ತಂದು ಕೊಡುತ್ತೇನೆ ಎಂದಾಗ ನನಗೆ ಆಕಾಶಕ್ಕೆ ಮೂರೇ ಗೇಣು!! ಅವರು ತಮ್ಮ ಕುಟುಂಬ ಸಮೇತ ಬಂದು ಒಟ್ಟೂ ಸುಮಾರು 650 ಪ್ರಸಂಗ ಮತ್ತು ಪುಸ್ತಕಗಳನ್ನು ನಮ್ಮ ಯಕ್ಷಗಾನ ಕೇಂದ್ರಕ್ಕೇ ಸೀದಾ ತಂದು ಮುಟ್ಟಿಸಿದರು!! ಮತ್ತೆ ಯಕ್ಷಾಂಗಣದಲ್ಲಿ ತಿರುಗಾಡಿ ಸಂತಸಗೊಂಡರು. ಪುಸ್ತಕಗಳು ಸೇರಿಸಬೇಕಾದ ಜಾಗಕ್ಕೇ ತಲುಪಿಸಿದೆ ಎಂದು ಸಂಭ್ರಮ ಪಟ್ಟರು.
ಈ ಕಷ್ಟವನ್ನ ಪ್ರೀತಿಯಿಂದ ಸಹಿಸಿಕೊಂಡ ಅವರ ಉದಾರತೆಗೆ ಶರಣು ಶರಣು. ಅವರಿಗೆ ಅತ್ಯಂತ ಆಭಾರಿಯಾಗಿದ್ದೇನೆ. ಮಾನ್ಯ ಮಧುಸೂಧನರಾವ್ ಅವರ ಭರತನಾಟ್ಯ ಗುರು ಶ್ರೀಮತಿ ಶೈಲಜಾ ಹಾಗೂ ಅವರ ಸಹೋದರಿ, ಮಕ್ಕಳಾದ ಕು. ರಕ್ಷಾ, ಪವನ್ ರಾವ್ (ಇಬ್ಬರೂ ಭಾರತನಾಟ್ಯ ಪ್ರವೀಣರು) ಕಲಾ ಕುಟುಂಬದ ಭೇಟಿ ಬಹಳ ಸಂತಸ ತಂದಿತು. ಶ್ರೀಮತಿ ಶೈಲಜಾ ಅವರ ತಂದೆ ಮಂಗಳೂರಿನ ದಿ. ಯು ಎಸ್ ಕೃಷ್ಣ ರಾವ್ ಇವರು ನನಗೆ ಕೊಂಚಕಾಲ ಭರತನಾಟ್ಯ ತರಬೇತಿ ನೀಡಿದ್ದು ಮತ್ತು ಅವರ ಶಿಕ್ಷಣದ ಶಿಸ್ತು ಆತ್ಮೀಯತೆ ಇದೆಲ್ಲಾ ನೆನಪು ಹೆಮ್ಮೆಯಿಂದ ಹಾದು ಹೋಯಿತು.
ಇವರೆಲ್ಲರ ಪ್ರೀತಿಗೆ ಮತ್ತು ಮಾನ್ಯ ಎಚ್ ಬಿ ಎಲ್ ರಾವ್ ಅವರ ಶ್ರೀಮತಿಯವರಾದ ಸುಧಕ್ಕ ಇವರಿಗೆ ನಮ್ಮ ಮಂಡಳಿ ಅತ್ಯಂತ ಕ್ರತಜ್ಞವಾಗಿದೆ. ಅವರ ಉದಾರತೆಗೆ ನಮಿಸುವೆ. ಹಾಗೆಯೇ ಡಾ. ವ್ಯಾಸ ರಾವ್ ನಿಂಜೂರ ಮತ್ತು ಅಕ್ಕ ಭಾರತಿ ಮೂಡಭಟ್ಕಳ್ ಈ ಸಂದರ್ಭದಲ್ಲಿ ನೀಡಿದ ಸಹಕಾರವನ್ನ ನಾನು ಮರೆಯುವಂತಿಲ್ಲ.. ಒಟ್ಟಾರೆ ಇಷ್ಟೆಲ್ಲಾ ಯಕ್ಷಗಾನ ಪ್ರಸಂಗಗಳು ಒಮ್ಮೆಗೇ ನಮ್ಮ ಗ್ರಂಥಾಲಯ ಸೇರಿದ್ದು ಸಂತೋಷ ತಂದಿದೆ.
ಎಲ್ಲರೂ ನಮ್ಮ ಮುಂಬೈ ಹೆಮ್ಮೆ!