ಕೃಷ್ಣ ಪ್ರಸಾದ್ ಗೋವಿಂದಯ್ಯ
ಇವತ್ತಿನ ಭಾನುವಾರದ ಸಂಜೆ ಸಾರ್ಥಕವಾಯಿತು.
ಸಮುದಾಯ, ಬೆಂಗಳೂರು ನಟರಾಜ್ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ಕೆ.ಪಿ.ಪೂರ್ಣಚಂಧ್ರ ತೇಜಸ್ವಿಯವರ ಹೆಸರಾಂತ ಕಾದಂಬರಿ ‘ಜುಗಾರಿ ಕ್ರಾಸ್ ‘ನ್ನು ರಂಗರೂಪಕ್ಕೆ ತಂದು, 78 ಪ್ರದರ್ಶನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಯುವ ಗೆಳೆಯ, ಸಾವಯವ ಕೃಷಿಕ Pranav V Bharadwaj ನಾಟಕದ ಪಾತ್ರದಾರಿ. ಕಿರು ರಂಗಮಂದಿರದಲ್ಲಿ ಇವತ್ತು ಪ್ರದರ್ಶನಗೊಂಡ ‘ಜುಗಾರಿ ಕ್ರಾಸ್’ ನಾಟಕಕ್ಕೆ ಬರಬೇಕೆಂದು ಪ್ರೀತಿಯಿಂದ ಆಹ್ವಾನಿಸಿದರು. ಹಾಗಾಗಿ ನಾಟಕ ನೋಡುವ ಅವಕಾಶ ಸಿಕ್ಕಿತು.
ಹಳ್ಳಿಗಾಡಿನ ರಗಳೆ,ರಾದ್ದಾಂತ, ರಾಜಕೀಯ, ಭೂಗತ ಚಟುವಟಿಕೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ತೇಜಸ್ವಿಯವರದು ಎತ್ತಿದ ಕೈ. ಸಣ್ಣ ಸಣ್ಣ ಘಟನೆಗಳ ಗುಚ್ಚದಂತಿರುವ ‘ಜುಗಾರಿ ಕ್ರಾಸ್’ ನ್ನು ರಂಗರೂಪಕ್ಕೆ ತರುವುದು ಸುಲಭದ ಮಾತಲ್ಲ.
ನಟರಾಜ್ ಹೊನ್ನವಳ್ಳಿ ಎಲ್ಲೂ ಬೇಸರ ತರಿಸದಂತೆ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಖದ್ದೂಸ್ ಎಕ್ಸಪ್ರೆಸ್ ಪ್ರಸಂಗ ನಗು ಉಕ್ಕಿಸುತ್ತದೆ. ಡ್ರೈವರ್ ಖದ್ದೂಸನ ವರ್ಣನೆ ಕಾದಂಬರಿಯಲ್ಲಿ ಸಕತ್ತಾಗಿದೆ. ನಾಟಕದಲ್ಲೂ ಅದು ತಂದಿದ್ದರೆ ಚೆಂದನಾಗಿರುತ್ತಿತ್ತು.
ಶೇಶಪ್ಪ,ಸುರೇಷ್, ಗೌರಿ, ಬಸ್ ಕಂಡಕ್ಟರ್, ಶಾಸ್ತ್ರಿ,ಸಾಬಣ್ಣ, ಮಂಡಿ ಗೌಡ್ರು ಪಾತ್ರಗಳು ಇಷ್ಟವಾದವು. ಸುರೇಷ್ ಪಾತ್ರ ಚೆನ್ನಾಗಿದೆ; ಮಲೆನಾಡಿಗರ ಮಾತಿನ ದಾಟಿ ಬಂದಿದ್ದರೆ ಇನ್ನಷ್ಟು ಕಳೆ ಕಟ್ಟುತ್ತಿತ್ತು. ಒಟ್ಟಿನಲ್ಲಿ ಚೆಂದದ ನಾಟಕ ನೋಡಿದ್ದು ಖುಷಿಯಾಯ್ತು. ಅವಕಾಶ ಸಿಕ್ಕರೆ ನೀವೂ ‘ ಜುಗಾರಿ ಕ್ರಾಸ್ ‘ ನ್ನೊಮ್ಮೆ ನೋಡಿ ಬನ್ನಿ.
0 ಪ್ರತಿಕ್ರಿಯೆಗಳು