ಗ್ರೀಕರು ವ್ಯಕ್ತಿಯ ಸಾಧನೆಗಳನ್ನು ಸಂಭ್ರಮಿಸುತ್ತಾರೆ. ಬೈಬಲ್ ಆರಾಧಕರು ವಿಧೇಯತೆ ಅಥವ
ಸಮರ್ಪಣಾಭಾವವನ್ನು ಸಂಭ್ರಮಿಸುತ್ತಾರೆ. ಭಾರತದ ಬಹುತೇಕ ಪುರಾಣ ಪಾತ್ರಗಳು ಶೋಷಣೆಯನ್ನೇ ಸಂಭ್ರಮಿಸುತ್ತವೆ.
ಇದು ನಮ್ಮ ಪುರಾಣಗಳ ನೇತ್ಯಾತ್ಮಕ ಪಾತ್ರಗಳ ವಿಷಯದಲ್ಲಿ ಮಾತ್ರವಲ್ಲದೆ ಆದರ್ಶವಾದ ಪಾತ್ರಗಳಿಗೂ ಅನ್ವಯಿಸುತ್ತದೆ ಎಂಬುದು ಕಟುಸತ್ಯ.ರಾವಣ, ದುರ್ಯೋಧನರಂತಹ ಪಾತ್ರಗಳಾದರೋ ‘ವಿಲನ್’ ಎಂಬಂತೆಯೇ ಬಿಂಬಿಸಲು ಸೃಷ್ಟಿಸಲಾದವು.
ಆದರೆ ‘ಭಾರತೀಯ ಟಿಪಿಕಲ್ ವುಮನ್’ ಎಂಬ ಆದರ್ಶವನ್ನೇ ಮೈತಳೆದಂತೆ ಸೃಷ್ಟಿಸಲಾಗಿರುವ ಸೀತೆಯ ವಿಚಾರದಲ್ಲೂ ಇಂಥ ಶೋಷಣೆಯೇ ಪ್ರಧಾನವಾಗಿರುವುದನ್ನು ಪ್ರಾಯಶಃ ನಮ್ಮ ‘ಸ್ತ್ರೀವಾದಿ’ ಗಳೂ ಪ್ರಶ್ನಿಸುವ ಗೋಜಿಗೆ ಹೋಗಿಲ್ಲ.
ಸೀತೆಯನ್ನು ಸದಾ ಶ್ರೀರಾಮನ ಆಜ್ಙಾಧಾರಕಳಾಗಿ , ಸಾಕುತಂದೆಯ ಆಜ್ಙಾಧಾರಕಳಾಗಿ ಚಿತ್ರಿಸಿ ಅದನ್ನೇ ದೊಡ್ಡ ಆದರ್ಶವನ್ನಾಗಿ ಸಾರುತ್ತಿರುವ ನಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗೆ ಸೀತೆಯನ್ನು ಓರ್ವ ಹೆಂಗರುಳಿನ ಮಹಿಳೆಯಂತೆ ನೋಡಲು ಸಾಧ್ಯವಾಗಿಲ್ಲ. ಆದರೆ ಸಾಮಾನ್ಯರು ಸೀತೆಯನ್ನು ಆದರ್ಶವಾಗಿರಿಸಿಕೊಳ್ಳಬೇಕೆಂಬ ಅಲಿಖಿತ ನಿಯಮ ಮಾಡಿಟ್ಟಿದ್ದಾರೆ.
ಈ ಶತಮಾನದ ”ಮಹಿಳಾ ಸಬಲೀಕರಣ” ಪರಿಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದಾಗಲಂತೂ ಸೀತೆಯ ಜೀವನವೇ ”ನಃ ಸ್ರ್ತೀ.. ಸ್ವಾತಂತ್ರ್ಯಮರ್ಹತಿ” ಎಂಬ ತತ್ವವನ್ನು ಸಾರುವಂತಿದೆ. ಸೀತೆಯ ಹುಟ್ಟು , ಸ್ವಯಂವರ, ವನವಾಸ , ಅಪಹರಣ , ಪರಿತ್ಯಾಗ ಇವೆಲ್ಲವನ್ನು ವಿಮರ್ಶಿಸಿದಾಗ ಸೀತೆ ಎಂತಹ ದುರಂತ ಹೆಣ್ಣುಮಗಳು ಎಂಬುದು ಮನವರಿಕೆಯಾಗುತ್ತದೆ.
ಆದರೆ ಅದಕ್ಕೆ ಸೀತೆಯ ಮನಸ್ಸಿನಿಂದ ರಾಮಾಯಣ ಪ್ರವೇಶಿಸುವ ಎದೆಗಾರಿಕೆ ಬೇಕು. ಪ್ರಸ್ತುತ ಈ ನಾಟಕದಲ್ಲಿ ಅಂತಹ ದಿಟ್ಟತನವಿದೆ.ಶತಮಾನಗಳ ಕಾಲ ಒಪ್ಪಿಕೊಂಡದ್ದನ್ನು ಪ್ರಶ್ನಿಸುವ, ತರ್ಕಕ್ಕೆ ಹಚ್ಚುವ ಮತ್ತು ಪುರಾಣದ ವಿರೋಚಿತ ಘಟನೆಗಳ ಹಿಂದಿನ ವಿರೂಪಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ಬಹು ಮುಖ್ಯವಾಗಿ ಈಕೆ ಆಧುನಿಕ ಸೀತೆ. ಏನೊಂದನ್ನು ಪ್ರಶ್ನಿಸದೆ ಕಷ್ಟಗಳನ್ನೆಲ್ಲಾ ಸಹಿಸಿಕೊಂಡಿದ್ದೇ ಸೀತೆಯ ಶ್ರೇಷ್ಟತೆ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಒಪ್ಪುವುದು ಇಂದಿನ ಅನಿವಾರ್ಯತೆಯಲ್ಲ. ಹಾಗೆ ಮಾಡಿದಲ್ಲಿ ಎಲ್ಲವನ್ನೂ ಸಹಿಸಿಕೊಂಡು ತೆಪ್ಪಗಿರುವುದೇ ಹೆಣ್ಣಿಗೆ ಆದರ್ಶವೆಂದು ಸಾರಿದಂತಾಗಿಬಿಡುತ್ತದೆ.
ಹಾಗಾಗಿ ಈ ಮೈಥಿಲಿ ಆಧುನಿಕ ಸೀತೆಯಾಗಿ ಕೇಳುವ ಪ್ರಶ್ನೆಗಳಿಗೂ, ನೀಡುವ ನೈಜ ಕಾರಣಗಳಿಗೆ ಜಾಣ ಕುರುಡರಾಗದೇ ಮೈಥಿಲಿಯ ಮನದ ಮಾತುಗಳಿಗೆ ಕಿವಿಯೂ, ದನಿಯೂ ಆಗಬೇಕಾದ್ದು ಸದ್ಯದ ಜರೂರತ್ತು ಎಂಬುದನ್ನು ಈ ನಾಟಕ ತಿಳಿಸಿಕೊಡುತ್ತದೆ.
-ಶಿವಕುಮಾರ್ ಮಾವಲಿ.
0 ಪ್ರತಿಕ್ರಿಯೆಗಳು