ಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಾಚಾರ್ ಅವರು ೧೯೪೭ರಲ್ಲಿ ಬರೆದ ಒಂದು ಮಹತ್ವದ ಕವನ – ‘ನೆರಳು’. ಗಾಂಧೀಜಿಯನ್ನು ಗರುಡನ ರೂಪಕದ ಮೂಲಕ ವಿವರಿಸುತ್ತಾ ಅವರ ಪ್ರಭಾವದ ‘ನೆರಳು’ ಭೂಮಿಯಲ್ಲಿ ಚಲಿಸುವ ವರ್ಣನೆ ಆ ಕವನದಲ್ಲಿ ಇದೆ. ಇವತ್ತು ಗಾಂಧಿ ಅವರ ಆದರ್ಶ ,ಮೌಲ್ಯಗಳು ಬಹುತೇಕ ಕಣ್ಮರೆ ಆಗಿವೆ. ಈಗ ಗರುಡ ಇಲ್ಲ ಅಷ್ಟೇ ಅಲ್ಲ, ಗರುಡನ ನೆರಳೂ ಕಣ್ಮರೆಯಾಗಿದೆ. ’ಅದಕೋ ಅದರಿಚ್ಚೆ ಹಾದಿ, ಇದಕು ಹರಿದತ್ತ ಬೀದಿ’ ಎನ್ನುವ ಪುತಿನ ಕವನದ ಸಾಲುಗಳು ಈ ಸಂದರ್ಭದಲ್ಲಿ ವ್ಯಂಗ್ಯದ ಭಿನ್ನ ಅರ್ಥವನ್ನು ಕೊಡಬಹುದು. ಧರ್ಮ,ಜಾತಿ,ಪಂಗಡ,ಪ್ರದೇಶ, ಪಕ್ಷಗಳ ನೂರಾರು ಬೀದಿಗಳಲ್ಲಿ ನೆರಳುಗಳು ಕೂಡಾ ಇಲ್ಲದೆ ಜನರು ಎತ್ತೆತ್ತಲೋ ಹರಿಯುತ್ತಿರುವಾಗ ಕವಿ ಮಾತು ಇನ್ನಷ್ಟು ನೆನಪಾಗುತ್ತದೆ : ‘ ಇದ ನೋಡಿ ನಾನು ನೆನೆವೆನಿಂದು – ಇಂಥ ನೆಳಲೇನು ಗಾಂಧಿಯೆಂದು!’
ಮತ್ತೆ ಮತ್ತೆ ಓದಿದಷ್ಟೂ ಈ ಕವನ ಪ್ರಸ್ತುತ ಸಂದರ್ಭದಲ್ಲಿ ಸಮಕಾಲೀನ ಅರ್ಥಗಳನ್ನು ಕೊಡುವ ಧ್ವನಿ ಶಕ್ತಿಯನ್ನು ಹೊಂದಿದೆ.
ಸ್ವಾತಂತ್ರ್ಯ ದಿನದ ನೆನಪಿನಲ್ಲಿ ಪುತಿನ ಅವರ ‘ನೆರಳು’ ಕವನವನ್ನು ಇಲ್ಲಿ ಕೊಡಲಾಗಿದೆ:
ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು
ಅದಕೊ ಅದರಿಚ್ಚೆ ಹಾದಿ
ಇದಕು ಹರಿದತ್ತ ಬೀದಿ.
ನೆಲನೆಲದಿ ಮನೆಯ ಮನೆಯ ಮೇಲೆ
ಕೊಳ ಬಾವಿ ಕಂಡು ಕಾಣದೋಲೆ
ಗಿಡ ಗುಲ್ಮ ತೆವರು ತಿಟ್ಟು
ಎನ್ನದಿದಕೊಂದೆ ನಿಟ್ಟು.
ಗಾಳಿ ಬೆರಗಿದರ ನೆಲದೊಳೋಟ !
ವೇಗಕಡ್ಡ ಬಹುದಾದ ಹೂಟ?
ಸಿಕ್ಕು ದಣಿವಿಲ್ಲದಂತೆ
ನಡೆಯಿದಕೆ ನಿಲ್ಲದಂತೆ.
ಇದ ನೋಡಿ ನಾನು ನೆನೆವೆನಿಂದು
ಇಂಥ ನೆಳಲೇನು ಗಾಂಧಿಯೆಂದು !
ಹರಿದತ್ತ ಹರಿಯ ಚಿತ್ತ
ಈ ಧೀರ ನಡೆವನತ್ತ.
ಸುಮಾರು ೧೦ ವರ್ಷಗಳ ಹಿಂದೆ ಈ ಕವನ ಓದಿದ್ದೆ. ಮತ್ತೆ ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಸರ್.
ಎಷ್ಟೊಂದು ಬಾರಿ ಈ ಕವನ ಓದಿದ್ದೇನೆ. ಪ್ರತಿ ಬಾರಿಯೂ ಹೊಸದಾಗಿ ಓದಿದಅಂತೆ ಅನಿಸುತ್ತದೆ.
ಮರು ಓದಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
Gandhiji pu.ti.na.tale marige neralagiddare ee tale marige BhutanDante. Tappiskollabekada duswapnavagiddarre.