ಸತೀಶ್ ಶೆಟ್ಟಿ ವಕ್ವಾಡಿ
ನೆನಪಾಗುತ್ತಿಲ್ಲ ಆ ದಿನಗಳು,
ನೆನಪು ಮಾಡಿಕೊಳ್ಳುವ ಜರೂರತ್ತಿನಲ್ಲಿ.
ಪ್ರಾಂಶುಪಾಲರ ಮಗಳು ಆಗಷ್ಟೇ ಬಿಡಿಸಿಟ್ಟ ರಂಗೋಲಿ ಮೇಲೆ,
ತನ್ನ ಸೈಕಲ್ ಟೈರಿನ ಪಡಿಯಚ್ಚು ಮುಡಿಸಿದ ಪೇಪರ್ ಹುಡುಗನ ಅಮಾಯಕತೆ.
ಬಸ್ ಸ್ಟ್ಯಾಂಡಿನ ಪಕ್ಕದ ಅಂಗಡಿಯಲ್ಲಿ ತೂಗುಹಾಕಿದ್ದ ಗೊಂಬೆಯನ್ನು,
ತಿನ್ನುವಂತೆ ನೋಡುತ್ತಿರುವ ಭಿಕ್ಷುಕಿಯ ಮಗಳ ಬೆಟ್ಟದಷ್ಟು ಆಸೆ ಹೊತ್ತ ಕಂಗಳು.
ತಾನು ನೋಡದ್ದನು ಆತ ನೋಡಲಿ ಅಂತ ಜಾತ್ರೆಯಲ್ಲಿ ಮಗನನ್ನು ಭುಜದ ಮೇಲೆ,
ಹೊತ್ತುಕೊಂಡು ನಡೆಯುತ್ತಿರುವ ತಂದೆಯ ಭಾರ ಹೊತ್ತ ಸವೆದ ಚಪ್ಪಲಿಗಳು.
ಜಾಗ್ರತೆ ಮಗನೆ ಅಂತ ಅಮ್ಮ ಕೊಟ್ಟ ಎರಡು ರುಪಾಯಿಯ ನೋಟು
ಎಲ್ಲಿ ಕಳೆದು ಕೊಂಡೆನೋ ಅಂತ ಕಿಸಿಯಿಂದ ಕೈ ತಗೆಯದೇ ಅಂಗಡಿ ತಲುಪಿ,
ಪೆಪ್ಪೆರ್ಮೆಂಟು ಕೊಂಡು ಒಂದೇ ನೆಗೆತಕ್ಕೆ ಮನೆ ತಲುಪುವ ಧಾವಂತದ ಹುಡುಗನ ಖುಷಿ.
ಒಂಟಿಗಾಲಿನಲ್ಲಿ ನಿಂತು ಕಿಟಿಕಿಯ ಅಂಚಿನಲ್ಲಿ ಯಾರದ್ದೋ ಮನೆಯ ಟಿವಿಯಲ್ಲಿ,
ಸಿನೆಮಾ ನೋಡಿ ಖಳನಾಯಕನಿಗೆ ಬೈಯುತ್ತಾ ಮನೆಯತ್ತ ಹೆಜ್ಜೆ ಹಾಕುವ ಅಜ್ಜಿಯ ಆಕ್ರೋಶ.
ಸಂಜೆ ಶಾಲೆ ಬಿಟ್ಟ ಮೇಲೆ ಹೂವಿನ ಮಾಲೆಯ ಜೊತೆಗೆ ದೇವಸ್ಥಾನದ ರಥಬೀದಿಯ
ಪಕ್ಕದ ಹಲಸಿನ ಮರದ ಕೆಳೆಗೆ ಕುಳಿತು ಹೋಂ ವರ್ಕ್ ಮಾಡುತ್ತಾ,
ಯಾರಾದರೂ ಭಕ್ತರು ಬಂದಾಗ ಹೂ ಹೂ ಅಂತ ಹೂ ಮಾರುವ ಆ ಹುಡುಗಿಯ ಕನಸು.
ಅಪ್ಪನ ಸಾಲ, ತಮ್ಮನ ಓದು, ಅಕ್ಕನ ಮದುವೆ, ಅಮ್ಮನ ಹೊಸ ಮನೆ ಕನಸುಗಳ ಮೂಟೆ ಹೊತ್ತು, ನಗರದ ಬಸ್ಸು ಹತ್ತಲು ನಿಂತವನ ಮುಂದೆ ಶೃಂಗಾರಗೊಂಡ ಮೆನೆಯೊಳಗೆ ಪ್ರೀತಿಸಿದ ಹುಡುಗಿಯ ಮದುವೆಯ ಸಂಭ್ರಮ.
ಒಂದಷ್ಟು ವರುಷ ಹಲ್ಲುಕಚ್ಚಿ ದುಡಿದ ದುಡ್ಡಲ್ಲಿ ತಂಗಿಯ ಮದುವೆ ಮುಗಿಸಿ, ಮತ್ತೆ ಕರ್ಮಭೂಮಿಗೆ ಬದುಕು ಕಟ್ಟಲು ಹೊರಟವನ ಕಿಸೆಯೊಳಗೆ ಉಳಿದಿದ್ದ ಆ ನೂರರ ನಾಲ್ಕು ನೋಟುಗಳ ಚಡಪಡಿಕೆ.
ನೆನಪುಗಳನ್ನೆಲ್ಲ ಮೂಟೆಕಟ್ಟಿ ಅಟ್ಟಕ್ಕೇರಿಸಿದ ಜಗತ್ತು ನಿದ್ದೆಯಲ್ಲಿದೆ.
ಮೂಟೆಯೊಳಗಿನ ಗಂಟನ್ನು ಬಿಡಿಸಲಾರದ ಚಂದ್ರ ಈಗ ನಕ್ಷತ್ರಗಳಿಗೂ ಅಪಥ್ಯ.
ಅಜ್ಜ ನೆಟ್ಟ ಹಲಸಿನ ಮರದಲ್ಲಿ ಬಿಟ್ಟ ಹಣ್ಣುಗಳನ್ನು ನೋಡಲು ಅಜ್ಜ ಉಳಿದಿಲ್ಲ,
ನಾಳೆ ರಸ್ತೆ ಮಾಡಲು ಬರುವ ಜೆಸಿಬಿ, ಹಲಸಿನ ಮರವನ್ನು ಹಣ್ಣುಗಳ ಜೊತೆಗೆ ನುಂಗಲಿದೆ.
ಅಜ್ಜನ ಆತ್ಮ ಮೂಟೆಯೊಳಗೆ ಅಳುತ್ತಿದೆ.
0 ಪ್ರತಿಕ್ರಿಯೆಗಳು