ಮಹಾಂತೇಶ ನವಲಕಲ್
೧
ಮುಂಜಾನೆ ಕೊಬ್ಬಿನ ಹಾಲುಂಡು ಕೂಗುವ
ಕೋಗಿಲೆಯ ಕೊರಳಿಗೆ ನಿಷ್ಕಾಮ ಜೇನು ಸುರಿಯಲಿ
ಅಂಥಹ ಕೋಗಿಲೆಗೆ ಆಶ್ರಯ ಕೊಟ್ಟ ಜಮ್ಮೆಯ ಮರವು
ಏಳೇಳು ವಿಭವಾಂತರದಲಿ ಮತ್ತೆ ಹುಟ್ಟಲಿ
೨
ನನ್ನ ಮಾತು ಅನವರತ ಆಲಿಸಿದ
ಆಚಮನ ದರ್ಭೆ ಚಾಪೆಗಳ ಕಣ್ಣೀರ ಕಳೆಬರವ ಕಳೆಯಲಿ
ಮತ್ತೆ ಗಂಧದ ಪರಿಮಳ ಪೂಸಿಕೊಂಡು ಹೊಸಬಟ್ಟೆಗಳಾಗಿ
ನನ್ನ ಮುಂದೆ ಬರಲಿ
೩
ಬಿದಗಿಯ ಚಂದಿರನ ಅದಮ್ಯ ವಿರಹಾಮೃತವು
ತಣ್ಣನೆಯ ಹಿಮದ ಒಡಲು ಸೇರಿ ನಿಷ್ಕ್ರಿಯವಾಗಲಿ
ನವಿಲುಗಳು ಮೃಗಗಳು ಸೊಣಗ ಸಹಿತ ಪ್ರಾಣಿಗಳ
ನಿಶ್ಯೇಷ ಕಾಮಕೇಳಿಗಳೆಲ್ಲ ಯನ್ನ ಕಣ್ಣಿಗೆ ಬೀಳದಿರಲಿ

೪
ಏಳು ಸಮುದ್ರದ ಸುಖ ಹರುಡುವ ಇಂದಿರನ
ಸಾಸಿರ ನಿಮುರುಚೋಹಗಳೆಲ್ಲ ವ್ಯವಕಲಿಸಿ ಒಂದೇ ಆಗಲಿ
ಇಂದಿರನ ಆಸೆಬುರುಕ ಮನಸು ನೀರಿನ ಚಿಲುಮೆಯಾಗಿ
ಜಿಗಿಯುವ ನನ್ನ ಅಂಡಜೀರಿಗೆಗಳನು ಕುಡಿಯದಿರಲಿ
೫
ಸ್ಪಟಿಕದ ನದಿ ಯನ್ನ ಮನಹೊಕ್ಕು
ಸಹಸ್ರಪಾದಗಳ ಅಣುರಿಣಗಳ ಶಬ್ಧ ಮಾಡದಿರಲಿ
ಭೋರ್ಗರೆವ ಆಶ್ರಮದ ದಂಡೆಯ ನದಿಗೆ ಗುರುತರ
ಸಂಯಮದ ಆಣೆಕಟ್ಟು ಕಟ್ಟಲಿ
೬
ಭಗವತಿ ಪಾತ್ರೆಯ ತುಂಬ ಆಸೆಗಳ ವೇಗವರ್ಧಕ
ಲಾವಾರಸಗಳು ಉದಯಿಸದಿರಲಿ
ಗಂಡುಗಳ ಕೊಲ್ಲುವ ಮಿಲನವೇ ಸಾವಾಗುವ
ಶಿವನ ಕುದುರೆಗಳ ಭಾಷೆ ಯನ್ನ ಜ್ಞಾನಕ್ಕೆ ದಕ್ಕಲಿ






0 Comments