ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆಯ ಸಿಟ್ಟು..

ವೆಂಕಟೇಶ ಚಾಗಿ

ವರುಷದಲ್ಲಿ 

ಆಗಾಗ ಬರುತ್ತಿದ್ದ ಮಳೆ

ತನ್ನ ಕಂದಮ್ಮಗಳಿಗೆ

ಇಡೀ ವರುಷಕ್ಕೆ ಬೇಕಾಗುವಷ್ಟು ಹಾಲನ್ನು

ಅಲ್ಲಿ ಇಲ್ಲಿ ಭೂತಾಯಿ ಒಡಲಲ್ಲಿ

ಶೇಖರಿಸಿ ಬಚ್ಚಿಟ್ಟು ಹೋಗುತ್ತಿದ್ದಳು;

ಮಳೆ ಬಂದಾಗಲೂ ಕಂದಮ್ಮಗಳಿಗೆ ಖುಷಿ

ಮಳೆಯ ನಂತರವೂ ಕಂದಮ್ಮಗಳಿಗೆ ಖುಷಿ

ವರುಷ ಪೂರ್ತಿ ಉಂಡು ಬೆಳೆದ ಕಂದಮ್ಮಗಳು 

ನೂರಾರು ಸಾವಿರಾರು 

ಬೆಟ್ಟಗಳೇ ಬಟ್ಟೆ ತೊಟ್ಟು ಸಂಭ್ರಮಿಸುವಷ್ಟು

ಮಿಕ್ಕ ಸಿಕ್ಕ ಹಾಲೆಲ್ಲಾ ಹರಿದು ಹರಿದು

ಜಗವ ತಣಿಸಿ ಸೇರಾಯ್ತು ಸಾಗರವನ್ನು;

ಆಗಾಗ ಮುನಿಸಿಕೊಳ್ಳುತ್ತಿದ್ದ ಮಳೆ

ಮರಳುವುದು ಆಗಲೋ ಈಗಲೋ

ಅದರೂ ಅವಳಡಗಿಸಿಟ್ಟ  ಅಮೃತವು

ಬೆಟ್ಟದ ಜೀವಗಳಿಗೆ ಜೀವಾಮೃತ;

ಕಂದಮ್ಮಗಳಿದ್ದಲ್ಲಿ 

ಅವಳ ಕರುಣೆ ಅಘಾದ ಅಪರಿಮಿತ

ಅವಳ ಬದುಕಿನ ಆಸೆ ಕಂದಮ್ಮಗಳ ಬದುಕೇ

ಅಲ್ಲವೇ.

ಯಾವುದೋ ಬಯಲೊಳಗಿದ್ದ ಅವನು

ಬಿಲಕೊರೆದು ಅಗೆದು ಬಗೆದು ಬಂದಿದ್ದಾನೆ

ತನ್ನ ಆಸೆಗಳನ್ನು ಬಿತ್ತಲು

ಬೆಟ್ಟಗಳುಟ್ಟ ಬಟ್ಟೆಯ ಕದಿಯಲು

ಮತ್ತೆ ಬಚ್ಚಿಡಲಾದ ಅಮೃತ ;

ಈಗ ಎಲ್ಲವನ್ನೂ ಕದಿಯಲಾಗುತ್ತಿದೆ

ಎಲ್ಲರಿಗೂ ಗೊತ್ತಾಗುವಂತೆ

ಎಲ್ಲರೂ ಹಟಬಿದ್ದವರಂತೆ

ಎಲ್ಲರಿಗೂ ಅನಿವಾರ್ಯವೆನ್ನುವಂತೆ;

ಕಂದಮ್ಮಗಳ ಆಕ್ರಂದನ 

ಮುಗಿಲು ಮುಟ್ಟಿದೆ

ಮಳೆ ಸಿಟ್ಟಾಗಿ ಹುಚ್ಚಿಯಂತಾಗಿದೆ

ಕದಿಯಲು ಬಂದವನ ಆಸೆಯನು ಪೂರೈಸಲು

ಕದಿಯುವವನ ಮನೆ ನುಗ್ಗಿ ಹೋಗಲಾಗಿದೆ

ಮಡಿದ ಕಂದಮ್ಮಗಳ ಆಕ್ರಂದನಕೆ 

ಬೆಟ್ಟಗಳೇ ಬಯಲಾಗುತಿವೆ

ಸಿಟ್ಟು  , ಸಿಟ್ಟುಗಳ ಉಂಡು ಬೆಟ್ಟವಾಗಿದೆ

ಈಗ ಎಲ್ಲವನ್ನೂ ಬಿಟ್ಟು ಬಿಡಲಾಗಿದೆ

ಯಾರಿಗೂ ಕ್ಷಮೆಯಿಲ್ಲ

ಆದರೆ ಮಳೆಯ ಪಾಠ

ಮತ್ತದೇ ಮಳೆಯ ಹಾಡು 

ಅಧಿಕೃತವಾಗಿ ಮಳೆಯ ಪಾಠ..!

‍ಲೇಖಕರು Avadhi

8 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading