ಬಾ ಹುಲಿಕಲ್ ನೆತ್ತಿಗೆ-8 -ಪ್ರೊ. ಶಿವರಾಮಯ್ಯ ಕುವೆಂಪು ಮಲೆನಾಡಿನ ಜಮೀನ್ದಾರಗೌಡರ ಪರ, ಬ್ರಾಹ್ಮಣ ವಿರೋಧಿ, ದಲಿತರ ಬಗ್ಗೆ, ಮುಸ್ಲಿಮರ ಬಗ್ಗೆ ಅವರಿಗೆ ಪೂರ್ವಗ್ರಹಿಕೆ, ಕರ್ಮಸಿದ್ಧಾಂತ ಹಾಗೂ ಜನ್ಮಾಂತರದ ಬಗ್ಗೆ ಅವರಿಗೆ ನಂಬಿಕೆ ಇತ್ತು. ಹೀಗೆಲ್ಲಾ ಬರೆಯುತ್ತ ಹೋಗುವ ವಿಮರ್ಶನಾ ದಕ್ಷರು ಇನ್ನು ಮುಂದಾದರೂ ಸಹನೆಯಿಂದ ನಾರಾಯಣ ಅಂಥವರ ಮಾತಿನ ಬೆಳಕಿನಲ್ಲಿ ಕುವೆಂಪು ಕೃತಿಗಳನ್ನು ತಾಳ್ಮೆಯಿಂದ ಮರು ಓದು ಮಾಡಬಹುದು. ಯಾಕೆಂದರೆ ಕುವೆಂಪು ಎಂದರೆ, ಅದೊಂದು ಜಾತಿಮತ ಪಂಥ ಸಿದ್ಧಾಂತಗಳ ಕೊಟ್ಟಿಗೆಯಲ್ಲಿ ಕಟ್ಟಲಾರದ ಆನೆ. ನಿಜವಾದ ಮಾನವತಾ ಧರ್ಮವನ್ನು ಕಂಡು ಕಂಡರಿಸಿ ಆ ಪ್ರಕಾರ ಬಾಳಿ ಬದುಕಿ ಹೋದ ಜೀವ, ಅದು ಕನ್ನಡದ ವಿದ್ಯಮಾನ ಮಾನಸ್ತಂಭ!
ಬಿಳುಮನೆ ರಾಮದಾಸ್ ನಮ್ಮ ಇನ್ನೊಬ್ಬ ಸಂದರ್ಶಕರು ಬಿಳುಮನೆ ರಾಮದಾಸ್ ಇವರು ವಾಣಿಜ್ಯ ಇಲಾಖೆಯಲ್ಲಿ ತಮ್ಮ ಸವರ್ಿಸ್ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಕುವೆಂಪು ತೇಜಸ್ವಿ ಇವರ ನಂತರ ಮಲೆನಾಡಿನ ಬದುಕನ್ನು ತಮ್ಮ ಕೈಲಾದಷ್ಟು ಕಥೆ, ಕಾದಂಬರಿ ಪ್ರಬಂಧಗಳ ಮೂಲಕ ಕಟ್ಟಿಕೊಡುವವರಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ತೀರ್ಥಹಳ್ಳಿ ಮೇಗರವಳ್ಳಿ ಕುಪ್ಪಳ್ಳಿ ಪರಿಸರವನ್ನು ಚೆನ್ನಾಗಿ ಬಲ್ಲ ರಾಮದಾಸ್ ಕುವೆಂಪು ಅವರ ನೆಂಟರು ಇಷ್ಟರು ಸಂಬಂಧಿಕರನ್ನು ತಮ್ಮ ಬಾಲ್ಯದಲ್ಲಿ ಹತ್ತಿರದಿಂದ ನೋಡಿಬಲ್ಲವರು. ಇಂಥವರನ್ನು ಕರೆತಂದು ರಂಗಾಯಣದ ಕಲಾವಿದರ ಎದುರು ನಿಲ್ಲಿಸಿದಾಗ ಅವರು ಸಹಜವಾಗಿಯೇ ತಮ್ಮ ಬಾಲ್ಯಕ್ಕೆ ಜಾರಿಕೊಂಡು ಮಾತಾಡಲು ತೊಡಗಿದರು. ಮಾತಿಗಿಂತ ಹೆಚ್ಚಾಗಿ ತಮ್ಮ ಹಾವಭಾವ ವಿಲಾಸ ವಿಭ್ರಮಗಳಿಂದ ಮಲೆನಾಡಿನ ರಸ್ಟಿಕ್ಲೈಫ್ನ್ನು ಪರಿಚಯಿಸುತ್ತ ಹೋದರು. ಶತಮಾನದ ಹಿಂದಿನ ಬದುಕು ಮದುಮಗಳು ಕಾದಂಬರಿಯಲ್ಲಿದೆ. ಆ ಒಟ್ಟು ಚೆಲುವನ್ನು ಹೇಗೆ ಸೆರೆಹಿಡಿಯಬೇಕೆಂಬ ಹಂಬಲದಲ್ಲಿದ್ದ ನಮ್ಮ ಕಲಾವಿದರು ರಾಮದಾಸ್ರವರ ಮಾತು ಕತೆಯನ್ನು ಆಲಿಸುತ್ತಿದ್ದರು. ಮಲೆನಾಡಿನ ಹೆಗ್ಗಡೆಗಳು, ಹೆಗ್ಗಡತಿಯರು, ಅವರ ವೇಷ ಭೂಷಣಗಳು, ಮಾತುಕತೆಗಳು, ಅವರ ಆಳುಕಾಳುಗಳು, ಭೂಮಾಲಿಕವರ್ಗದ ದರ್ಪ ದೌರ್ಜನ್ಯಗಳು, ಆಳುಮಕ್ಕಳ ದೈನತೆ, ಕೀಳರಿಮೆ ಈ ಮುಂತಾದ ವಿಚಾರಗಳಲ್ಲಿ ತಮ್ಮಲ್ಲಿರುವ ಪ್ರತ್ಯಕ್ಷಾನುಭವಗಳನ್ನು ಬಿಚ್ಚಿ ಹೇಳಿದರು. ಮಂತ್ರ ಮುಗ್ಧರಾದವರಂತೆ ಆಲಿಸಿ-ನೋಡುತ್ತಿದ್ದ ಕಲಾವಿದರಲ್ಲಿ ಕೆಲವರು ಅನೇಕ ಪ್ರಶ್ನೆಗಳನ್ನು, ಸಂದೇಹಗಳನ್ನು ಅವರ ಮುಂದಿಡುತ್ತಿದ್ದರು. ಈ ಸಂದರ್ಭದಲ್ಲಿ ರಾಮದಾಸ್ ಹೇಳಿದ ಕುವೆಂಪು ಬಗೆಗಿನ ಕೆಲವು ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. ಹೊಸಮನೆ ಅಕ್ಕಮ್ಮ ಹೆಗ್ಗಡತಿ ಈಕೆ ದೇವಂಗಿ ರಾಮಣ್ಣ ಗೌಡರ ಮೊದಲ ಅಳಿಯ ಮಂಜಪ್ಪಗೌಡರ ಅಕ್ಕ. ಪುಟ್ಟಪ್ಪನವರು ರಾಮಣ್ಣಗೌಡರ ಮೂರನೆ ಅಳಿಯ. ಅದು 1940ರ ದಶಕ. ಕುವೆಂಪು ‘ರಾಮಾಯಣ ದರ್ಶನಂ’ ಬರೆಯುತ್ತಿದ್ದ ಕಾಲ. ಅಕ್ಕಮ್ಮ ಹೆಗ್ಗಡತಿ ಈ ಸುದ್ದಿಯನ್ನು ಕೇಳಿ ‘ಅದೇ ಆ ಕುಪ್ಪಳ್ಳಿ ಎಂಕಟಪ್ಪನ ಮಗ ಪುಟ್ಟಪ್ಪ’ ಅದೇನೊ ರಾಮಾಯ್ಣ ಅಂತ ಬುಕ್ (ಃಠಠಞ) ಬರೀತಾನಂತಲ್ಲ! ಈ ಮಾಂಸ ಮದ್ದು ತಿಂಬ ಜನರೆಲ್ಲ ಬಾಂಬ್ರಂತೆ ‘ಬೂಕ್’ ಬರೀಯೋದೆ, ಏನು ಕಲಿಗಾಲ ಬಂತಪ್ಪ?’ ಎಂದರಂತೆ. ಇದಕ್ಕೂ ಮೊದಲು ‘ಪುಟ್ಟಪ್ಪನವರು ವಿವೇಕಾನಂದರೇ ಮೈಮೇಲೆ ಬಂದವರಂತೆ ವತರ್ಿಸುತ್ತಿದ್ದಾಗ, ಇದೇ ಹೆಗ್ಗಡತಿಯು ‘ಓದಿ ಓದಿ ಆ ಪುಟ್ಟಪ್ಪಗೆ ಹುಚ್ಚು ಹಿಡಿದಿದೆಯಂತೆ ನಿಜವೆ’ ಎಂದು ತನ್ನ ತಮ್ಮನಲ್ಲಿ ಕೇಳಿದ್ದುಂಟು. ಅದಕ್ಕೆ ಮಂಜಪ್ಪ ಗೌಡರು ಹುಚ್ಚು ಜನರಿಗೆ, ಪುಟ್ಟಪ್ಪನಿಗಲ್ಲ ಎಂದು ಪ್ರತಿಕ್ರಿಯಿಸಿದ್ದರಂತೆ. ಇಂಥ ಮಾತುಗಳು ಮಲೆನಾಡು ಪ್ರಾಂತ್ಯದಲ್ಲಿ ಜನರ ನಾಲಗೆ ಮೇಲೆ ತೇಲಾಡುತ್ತಿದ್ದವು ಎಂದು ರಾಮದಾಸ ಹೇಳುತ್ತಿದ್ದರು. ಮುಂದುವರೆಯುವುದು…]]>
chennagide…