ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರುಟಪ್ಪಾಲಿಗೇ ನನಗೆ ಮಾರೋಲೆ ರವಾನೆಯಾಗಿತ್ತು..

maheshwari u2

ಯು ಮಹೇಶ್ವರಿ 

ಶಿವರಾಮ ಕಾರಂತರು ಹಲವು ವಿಷಯಗಳಲ್ಲಿ ಒಂದು ತಲೆಮಾರಿನ ಕಣ್ಣನ್ನು ತೆರೆಸಿದವರು.. ಒಂದು ಯುಗದ ಸಾಕ್ಷಿಪ್ರಜ್ಞೆಯಾಗಿ ಬಾಳಿದವರು.

shivarama-karanth2ತಮಗೆ ಬಂದ ಪತ್ರಕ್ಕೆ ತಪ್ಪದೆ ಮಾರೋಲೆ ಬರೆಯುವುದು ಅವರ ವಿಶೇಷಗುಣಗಳಲ್ಲೊಂದು .ಆ ಪತ್ರ ಯಾರದೇ ಆಗಿರಲಿ-ಹಿರಿಯರು, ಕಿರಿಯರು, ಸುಪ್ರಸಿದ್ಧರು, ಅಜ್ಞಾತರು- ಯಾರದೇ ಆಗಿರಲಿ ಅದರಲ್ಲಿ ತಾರತಮ್ಯವಿಲ್ಲ.

ನಾನು ಆಗ ಕಾಸರಗೋಡಿನಲ್ಲಿ ಎಂ.ಎ ಓದುತ್ತಿದ್ದೆ. ಕಾರಂತರ ಪಾಲಿಗೆ ತೀರ ಅಜ್ಞಾತಳೇ. ಪುಸ್ತಕಗಳ ‘ರಾವು’ ಹತ್ತಿಸಿಕೊಂಡ ನನ್ನ ತಲೆಯಲ್ಲಿ ನೂರೆಂಟು ಪ್ರಶ್ನೆಗಳು. ಒಂದೆರಡು ಪ್ರಶ್ನೆಗಳನ್ನು ಇರಿಸಿಕೊಂಡು ಕಾರಂತರಿಗೆ ಪತ್ರ ಬರೆಯುವ ಧೈರ್ಯಮಾಡಿದೆ.

ಅಚ್ಚರಿಯೆಂದರೆ ಮರುಟಪ್ಪಾಲಿಗೇ ನನಗೆ ಮಾರೋಲೆ ರವಾನೆಯಾಗಿತ್ತು. ‘ನಾನು ಬರೆದ ಪತ್ರ ಕಸದಬುಟ್ಟಿ ಸೇರುತ್ತದೆ;ಅವರು ಖಂಡಿತವಾಗಿ ಉತ್ತರ ಬರೆಯಲಾರರು’ ಎಂದು ನನ್ನನ್ನು ತಮಾಷೆಮಾಡುತ್ತಿದ್ದ ಮನೆಯವರಿಗೆಲ್ಲ ಕನಸೋ ನನಸೋ ಎಂಬಂತಾಗಿತ್ತು.

ಹಾಗೆ ಬಂದ ಪತ್ರವನ್ನು ಓದಿಹೇಳಲು ನಾನು ದೊಡ್ಡಣ್ಣನನ್ನು ಆಶ್ರಯಿಸಬೇಕಾಯಿತು. ಯಾಕೆಂದರೆ ಕಾರಂತರದು ಅಷ್ಟೊಂದು ‘ಮೋಡಿಬರಹ’. ಕ್ರಮೇಣ ನಾನು ಆ ಮೋಡಿಬರಹವನ್ನು ಓದುವುದನ್ನು ಕಲಿತುಕೊಂಡೆ. ಆ ಬಳಿಕ ನಾನು ಪ್ರತಿಬಾರಿ ಪತ್ರ ಬರೆದಾಗಲೂ ಅವರ ಮಾರುತ್ತರ ಇದ್ದೇ ಇರುತ್ತಿತ್ತು. ಇಂದು ಆ ಪತ್ರಗಳ ಮೇಲೆ ಕಣ್ಣಾಡಿಸಿದರೆ ಒಂದಿಷ್ಟೂ ಸಮಯವನ್ನು ಪೋಲುಮಾಡದೆ ಆ ಮುಪ್ಪಿನಲ್ಲೂ ಅನ್ಯಾನ್ಯ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಆ ಕ್ರಿಯಾಶೀಲ ಜೀವದ ಕುರಿತು ಮನಸ್ಸು ಬಾಗುತ್ತದೆ.

ಒಂದು ಶತಮಾನದ ಹರಹಿನ ಬದುಕನ್ನು ಪ್ರಭಾವಿಸಿದ , ನಮ್ಮ ಚಿಂತನೆಯನ್ನು ತಿದ್ದಿದ, ನಮಗೆ ಹೊಸ ದೃಷ್ಟಿಕೋನವನ್ನು ನೀಡಿದ ಕಾರಂತರು ಯಾವ ನಿರ್ಧಿಷ್ಟ ಪಂಥ ಪಂಗಡಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರಲಿಲ್ಲ. ಆದರೆ ಚೋಮನಂತಹ ದಲಿತರ, ಸುನಾಲಿನಿ ಭಾಗೀರಥಿಯಂತಹ ಹೆಣ್ಣುಮಕ್ಕಳ ಸಂವೇದನೆಗಳಿಗೆ ಧ್ವನಿಯಾಗಿದ್ದರು. ಮಾನವತೆಗೆ ಬದ್ಧತೆ, ಬದುಕಿಗೆ ಬದ್ಧತೆ- ಎನ್ನುವುದು ಅವರ ಹಿರಿಯ ಆದರ್ಶವಾಗಿತ್ತು .

ಜ್ಞಾನಪರಂಪರೆಯ ಹರಿಗಡಿಯದ ಸಂಬಂಧದ ಬಗ್ಗೆ ಅವರಿಗೆ ಗಾಢ ಅರಿವಿತ್ತು. ತಮ್ಮ ಜ್ಞಾನದಾಹವನ್ನು ಹಿಂಗಿಸಿದ ಪೂರ್ವಸೂರಿಗಳ ಋಣವನ್ನು ಆ ಪರಂಪರೆಗೆ ತಮ್ಮ ಅಗಾಧ ಕೊಡುಗೆಯನ್ನು ಅರ್ಥಪೂರ್ಣವಾಗಿ ಸಲ್ಲಿಸುವ ಮೂಲಕ ತೀರಿಸಿ ಕೃತಕೃತ್ಯರಾದರು. ಜ್ಞಾನದ ಕ್ಷೇತ್ರದಲ್ಲಿ ಕನ್ನಡವು ಬಡವಾಗಿರುವ ಎಡೆಗಳನ್ನು ಗುರುತಿಸಿ ಅದನ್ನು ತುಂಬುವ ನವೋನ್ಮೇಷ ಅವರಲ್ಲಿ ಕೊನೆಯವರೆಗೂ ಇತ್ತು ಎನ್ನುವುದೊಂದು ಸೋಜಿಗ.

ಸಾಹಿತ್ಯವೂ ಬೇಕು, ಕಲೆಯೂ ಬೇಕು,ವಿಜ್ಞಾನವೂ ಬೇಕು ಎನ್ನುತ್ತ ಹತ್ತುಮುಖಗಳಿಂದ ಎಲ್ಲವನ್ನೂ ಮೊಗೆಮೊಗೆಯುತ್ತ ಕನ್ನಡದ ಮಡಿಲಿಗೆ ತುಂಬಿದ ಅವರ ಶ್ರದ್ಧೆಯ ಋಣಭಾರ ಕನ್ನಡಿಗರ ಪಾಲಿಗೆ ದೊಡ್ಡದು.

ಅಕ್ಟೋಬರ್ 10 ಶಿವರಾಮಕಾರಂತರ ಜನ್ಮದಿನ. ಆ ನೆನಪಿಗೆ ಈ ಸಾಲುಗಳು. ಜೊತೆಗೆ ಅವರ ಪತ್ರದ ಒಂದು ಮಾದರಿ

shivarama-karanth1

‍ಲೇಖಕರು Admin

7 October, 2016

1 Comment

  1. Vinathe Sharma

    My deepest respects to him. He was indeed THE encyclopaedia of everything for a human being.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading