ಕೃಷ್ಣ ಶ್ರೀಕಾಂತ ದೇವಾಂಗಮಠ
ಮೆಟ್ಟು ಹರಿದಿವೆ ಅಲ್ಲಿ ಇಲ್ಲಿಯ
ಕೆಂಪು ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ
ತೀರಲೇ ಇಲ್ಲ ಮನದ ತೃಷೆ
ಕಾವೇರಿದ ಮೈ ಹಣ್ಣಗಾಗಿದೆ
ಆಸೆ ಇನ್ನೂ ತೀರದ ದಾಹ.
ಮೊಗೆದಷ್ಟು ಅಗೆದಷ್ಟು ಎಲ್ಲವನ್ನೂ
ದಕ್ಕಿಸಿಕೊಳ್ಳಬೇಕೆಂಬ ಹುಕಿ
ಸಿಕ್ಕದ್ದರ ಮೇಲೆರಗಿ ದಾಳಿಗೈವ ಪರಿಗೆ
ಸ್ತ್ರೀ ಸಂಕುಲ ಕಣ್ಣೀರಿಟ್ಟ ಕಥೆ ಹಳತು
ಹಪಾಹಪಿ ನಿಲ್ಲಲೇ ಇಲ್ಲ ಪಾಪಿ ಜೀವಕ್ಕೆ.
ಪರಾಂಗನೆಯ ಮತ್ತೆ ಮಂಚಕ್ಕೆಳೆದು
ಬಹಿಷ್ಠೆಯ ಬೆರೆವುದೇನು
ಲಗಾಮಿಲ್ಲದ ಮೃಗದಂತೆ
ಮೈ ಮನಸ್ಸುಗಳ ಜಖಮುಗೊಳಿಸಿ.
ಅಣಿಯಾಗಲೇ ಬೇಕು ಕಾಮಸಜ್ಜಿಕೆಗೆಂದು
ಮತ್ತೋರ್ವ ಕನ್ನಿಕೆ
ಶಾಪಗ್ರಸ್ಥೆಯದಾಕೆ ಯಾರು ಬಲ್ಲರು
ಜಂಟಿ ಜರುಗುವುದಲ್ಲಿ ಸಾಮೂಹಿಕ ದೃಶ್ಯ
ಪ್ರಬುದ್ಧರ ಬೆದೆ ವಿಕೃತ ಸತ್ಯ.
0 ಪ್ರತಿಕ್ರಿಯೆಗಳು