ಸಬಿತಾ ಬನ್ನಾಡಿ, ಮಧುರಾಣಿ ಎಚ್.ಎಸ್, ಎಸ್.ಗಂಗಾಧರಯ್ಯ, ಆಶಾ ರಘು ಸೇರಿದಂತೆ ಆರು ಸಾಹಿತಿಗಳಿಗೆ ರಾಜ್ಯದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ಈ ರಾಜ್ಯಮಟ್ಟದ ಪ್ರಶಸ್ತಿ ತಲಾ ೫ ಸಾವಿರ ರೂ. ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ಒಳಗೊಂಡಿರುತ್ತದೆ.
ಮಧುರಾಣಿ ಎಚ್.ಎಸ್. ಅವರ ‘ನೀಲಿ ಚುಕ್ಕಿಯ ನೆರಳು’ (ಕವನ ಸಂಕಲನ), ಎಸ್.ಗಂಗಾಧರಯ್ಯ ತುಮಕೂರು ಅವರ ‘ಮಣ್ಣಿನ ಮುಚ್ಚಳ’ (ಕಥಾ ಸಂಕಲನ), ಆಶಾ ರಘು ಅವರ ‘ಮಾಯೆ' (ಕಾದಂಬರಿ), ಸಬಿತಾ ಬನ್ನಾಡಿ ಅವರ 'ಇದಿರು ನೋಟ' (ಅಂಕಣ ಬರಹ ಸಂಕಲನ), ಡಾ.ಅಪ್ಪಗೆರೆ ಸೋಮಶೇಖರ ಅವರ 'ಬೆವರ ಬವಣೆ' ಮತ್ತು ಡಾ.ಎಂ.ಬಿ.ಕಟ್ಟಿ ಅವರ 'ಆರೂಢ ಪಂಥ' (ಸಂಕೀರ್ಣ) ಕೃತಿಗಳನ್ನು ೨೨ ನೇ ವರ್ಷದ
ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ‘ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಪ್ರಶಸ್ತಿಯು ಸಂಕೀರ್ಣ ವಿಭಾಗದಲ್ಲಿ ಇಬ್ಬರು ಲೇಖಕರು ಪ್ರಶಸ್ತಿಯನ್ನು ಹಂಚಿಕೊoಡಿದ್ದಾರೆ.
ಇದೇ ನವೆಂಬರ್ ೨೬ ರಂದು ಸಂಜೆ ೫.೩೦ಕ್ಕೆ ಸೇಡಮ್ನ ಶ್ರೀ ಪಂಚಲಿoಗೇಶ್ವರ ದೇವಾಲಯದ ಶಾಂಭವಿ ರಂಗಮoಟಪದಲ್ಲಿ ಜರುಗುವ ಸಮಾರಂಭದಲ್ಲಿ ‘ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಮ್ಮ ಪ್ರಶಸ್ತಿಗೆ ೨೨ ರ ವರ್ಷದ ಸಂಭ್ರಮ :
ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿನಲ್ಲಿ ಸ್ಥಾಪಿಸಿದ ‘ಅಮ್ಮ ಪ್ರಶಸ್ತಿ’ಗೆ ಈಗ ೨೨ ನೇ ವರ್ಷದ ಸಂಭ್ರಮ. ಕನ್ನಡದ ಪ್ರತಿಭಾವಂತ ಬರಹಗಾರರು ‘ಅಮ್ಮ ಪ್ರಶಸ್ತಿ’ಗಾಗಿ ತಮ್ಮ ಕೃತಿಗಳನ್ನು ಕಳುಹಿಸುವ ಮೂಲಕ ಪ್ರಶಸ್ತಿಯನ್ನು ಗುರುತಿಸಿದ್ದಾರೆ ಹಾಗೂ ಗೌರವಿಸಿದ್ದಾರೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ‘ಅಮ್ಮ ಪ್ರಶಸ್ತಿ’ ರಾಜ್ಯದ ಗಣನೀಯ ಪ್ರಶಸ್ತಿಗಳಲ್ಲಿ ಒಂದಾಗಬೇಕು ಎಂಬ ಪ್ರತಿಷ್ಠಾನದ ಆಶಯಕ್ಕೆ ಅನುಗುಣವಾಗಿ ನಾಡಿನ ಖ್ಯಾತ ಲೇಖಕರು, ಕವಿಗಳು, ಪ್ರಕಾಶಕರು ಮತ್ತು ಲೇಖಕರ ಅಭಿಮಾನಿ ಓದುಗರು ಸ್ಪಂದಿಸಿದ್ದೇ ಇದೊಂದು ಗೌರವಾನ್ವಿತ ಪ್ರಶಸ್ತಿಯಾಗಿ ರೂಪುಗೊಂಡಿದೆ ಎಂಬುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.
0 ಪ್ರತಿಕ್ರಿಯೆಗಳು