ಮೂಲ: ಧ್ರುವ್ ರಥೀ
ಕನ್ನಡಕ್ಕೆ: ಮಂಜುನಾಥ್ ಚಾಂದ್
ಟ್ವೀಟರ್, ಯೂಟ್ಯೂಬ್ ಚಾನೆಲ್ ಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಧ್ರುವ್ ರಥೀ ಹೀಗೆ ಬರೆಯುತ್ತಾರೆ…
ಬಿಜೆಪಿಯನ್ನು ಸೋಲಿಸುವುದು ಕೇವಲ ರಾಜಕೀಯ ನಿರ್ಧಾರವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಜೀವನಶೈಲಿಯ ಆಯ್ಕೆಯಾಗಬೇಕು.
ನೀವು ಉಣ್ಣುವ ಅನ್ನ, ನೀವು ಉಡುವ ಧಿರಿಸು- ಅವರು ನಿರ್ಧರಿಸುತ್ತಾರೆ. ನೀವು ಯಾವ ಟೀವಿ ನೋಡಬೇಕು, ನೀವು ಯಾರನ್ನು ಮದುವೆಯಾಗಬೇಕು, ಯಾವ ಸಂಪ್ರದಾಯವನ್ನು ನೀವು ಅನುಸರಿಸಬೇಕು ಎಂಬುದನ್ನು ಅವರು ನಿರ್ಧರಿಸುತ್ತಾರೆ. ಅದೆಲ್ಲವೂ ಹೋಗಲಿ ಎಂದರೆ ಯಾರು ಈ ದೇಶದ ಪ್ರಜೆಗಳಾಗಬೇಕು ಎಂಬುದನ್ನು ಕೂಡ ಅವರೇ ನಿರ್ಧರಿಸುತ್ತಾರೆ. ಇದು ಅವರ ಸಿದ್ಧಾಂತ. ನಿಮ್ಮ ಮೇಲೆ ಸವಾರಿ ಮಾಡುವ ಸಿದ್ಧಾಂತ. ಅದು ತಿರೋಗಾಮಿ ಸ್ವರೂಪದ್ದು. ಮುಂದಕ್ಕೆ ಕ್ರಮಿಸುವುದಲ್ಲ, ಹಿಂದಕ್ಕೆ ತಳ್ಳುವುದು.
ಅವರು ಎಲ್ಲವನ್ನೂ ತಮ್ಮ ದಿಕ್ಕತ್ತಿಗೆ ತಕ್ಕಂತೆ ತಿರುಚಲ ಬಯಸುತ್ತಾರೆ. ಇತಿಹಾಸ, ವಿಜ್ಞಾನ–ಕೊನೆಗೆ ಅಂಕಿ-ಅಂಶಗಳನ್ನು ಕೂಡ. ಅದು ಅವರ ಯೋಚನೆಗಳಿಗೆ ಪಕ್ಕಾಗಲೇಬೇಕು. ಈಗ ಕೋವಿಡ್ ನ ವಿಪತ್ಕಾಲೀನ ಪರಿಸ್ಥಿತಿ ಬಂದು ನಮ್ಮ ಮೇಲೆರೆಗಿ ಕುಂತಿದೆಯಲ್ಲ? ಇದೆಲ್ಲವೂ ಅವರ ಹಠಮಾರಿ ಧೋರಣೆಯ ಪ್ರತೀಕ. ಇದು ಇಷ್ಟಕ್ಕೇ ನಿಲ್ಲುತ್ತದೆ ಎಂದು ಭಾವಿಸಬೇಡಿ. ನಿಮ್ಮ ಶಿಕ್ಷಣ, ನಿಮ್ಮ ವೃತ್ತಿ, ನಿಮ್ಮ ಸಂಸ್ಕೃತಿ, ನಿಮ್ಮ ಆರೋಗ್ಯ- ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಅಂತಿಮವಾಗಿ ಪರೋಕ್ಷವೋ, ಅಪರೋಕ್ಷವೋ ಭಾರತದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವುದು ನಿಶ್ಚಿತ.
ಬಿಜೆಪಿ ಆಡಳಿತವಿರುವ ಬಹುತೇಕ ರಾಜ್ಯಗಳಲ್ಲಿ ನಾವಿದರ ಫಲವನ್ನು ಉಣ್ಣುತ್ತಿದ್ದೇವೆ. ಆದರೆ ತಿರೋಗಾಮಿಯ ತೀವ್ರ ಸ್ವರೂಪ, ಅಂದರೆ ಇರೋದನ್ನ ಬಿಟ್ಟು, ತಲೆಕೆಟ್ಟು ಹಿಂದಕ್ಕೆ ಪಲಾಯನ ಮಾಡುವ ಮನೋಭಾವ ಇದೆಯಲ್ಲ, ಅದು ಇಡೀ ಉತ್ತರ ಪ್ರದೇಶದ ನರನಾಡಿಗಳಲ್ಲಿ ತುಂಬಿಕೊಳ್ಳುತ್ತಿರುವುದನ್ನು ಕಾಣಬಹುದು.
ಇಂದಲ್ಲ ನಾಳೆ, ಈ ಅತಿಯಾದ ತಿರೋಗಾಮಿ ಸ್ವರೂಪವೇ ಅವರನ್ನು ಆಪೋಶನ ತೆಗೆದುಕೊಳ್ಳಲಿದೆ. ಅಂತಹ ದುರಾದೃಷ್ಟದ ದಿನ ಬರುತ್ತದೆ ಎಂಬುದು ಅವರಿಗೂ ಗೊತ್ತಿಲ್ಲ ಬಿಡಿ. ಈ ರೀತಿ ತಿರೋಗಾಮಿ ಸಿದ್ದಾಂತಗಳನ್ನು ಹೊಂದಿದವರೆಲ್ಲ ಮಕಾಡೆ ಮಲಗಿದ್ದನ್ನು ಇತಿಹಾಸದ ಪುಟಗಳಲ್ಲಿ ಕಂಡೇ ಕಾಣುತ್ತಾರೆ. ಹಾಗಾಗಿಯೇ ಮತ ನೀಡುವ ನಮ್ಮ ಹಕ್ಕು ಇದೆಯಲ್ಲ, ಅದು ಬಹುಮುಖ್ಯವಾದ ನಿರ್ಧಾರ.
0 ಪ್ರತಿಕ್ರಿಯೆಗಳು