ಕೃಷ್ಣ ಪ್ರಸಾದ್ ಗೋವಿಂದಯ್ಯ
2013ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತದ ಬಾವುಟ ತಯಾರಿಕೆಗೆ ಅಮೇರಿಕಾದ ಹತ್ತಿ ಬಳಸುತ್ತಾರೆ ಎಂಬ ಸುಳಿವು ಸಿಕ್ಕಿತು. ಹುಬ್ಬಳ್ಳಿ – ಧಾರವಾಡದ ಬೆಂಗೇರಿ ಮತ್ತು ಗರಗದ ಖಾದಿ ಗ್ರಾಮೋದ್ಯೋಗ ಸಂಘಗಳು ಜಯಧರ್ ಹತ್ತಿಯಿಂದ ಭಾರತದ ಬಾವುಟವನ್ನು ಕೈ ಮಗ್ಗಗಳಲ್ಲಿ ತಯಾರಿಸಿ ಇಡೀ ದೇಶಕ್ಕೆ ಹಂಚುತ್ತಿದ್ದವು.
ಕೆಂಪು ಕೋಟೆ ಮತ್ತು ಸಂಸತ್ ಭವನದ ಮೇಲೆ ಹಾರುವ ಬಾವುಟ ತಯಾರಾಗುವುದು ಇಲ್ಲೇ. ದೇಸಿ ಹತ್ತಿ ಜಯಧರ್ ಲಭ್ಯತೆ ಕಡಿಮೆಯಾದಂತೆ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಚಿತ್ರದುರ್ಗದ ಹಂಜಿ ಕೇಂದ್ರದಲ್ಲಿ ಜಯಧರ್ ಜೊತೆ ಬಿಟಿ ಹತ್ತಿ ಯನ್ನು ಮಿಶ್ರಮಾಡಿ ಬೆಂಗೇರಿ ಮತ್ತು ಗರಗದ ಖಾದಿ ಗ್ರಾಮೋದ್ಯೋಗ ಕೇಂದ್ರ ಗಳಿಗೆ ಸರಬರಾಜಾಗುತ್ತಿತ್ತು.
ಈ ಸ್ಪೋಟಕ ಸುದ್ದಿ ‘ಭಾರತದ ಬಾವುಟಕ್ಕೆ ಅಮೇರಿಕಾದ ಹತ್ತಿ’ ಎಂಬ ತಲೆಬರಹದೊಂದಿಗೆ ದಿ ಹಿಂದೂ ಮತ್ತು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಯಿತು. ಈ ಹಿನ್ನೆಲೆಯಲ್ಲಿ ನಾವು ಹಿರಿಯ ಗಾಂಧೀವಾದಿ ಹೆಚ್.ಎಸ್. ದೊರೆಸ್ವಾಮಿ ಯವರನ್ನು ಸಂಪರ್ಕಿಸಿ, ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ನಿರ್ದೇಶಕರಿಗೆ ತಿಳುವಳಿಕೆ ಕೊಡಲು ಕೋರಬೇಕಿತ್ತು.
ನನಗೆ ದೊರೆಸ್ವಾಮಿಯವರ ಪರಿಚಯ ಇರಲಿಲ್ಲ. ಗೆಳೆಯ Soil Vasu ದೊರೆಸ್ವಾಮಿಯವರಿಗೆ ವಿಷಯ ಮುಟ್ಟಿಸಿ ನನಗೆ ಮಾತಾಡಲು ಹೇಳಿದರು. ನಾನು ದೊರೆಸ್ವಾಮಿಯವರಿಗೆ ಪೋನ್ ಮಾಡಿದಾಗ ಬಹುವಾಗಿ ನೊಂದುಕೊಂಡು ಸಂಬಂಧಪಟ್ಟವರಿಗೆಲ್ಲಾ ಬೈಯ್ದು ಬುದ್ದಿ ಹೇಳಿದರು. ಜಯಧರ್ ಹತ್ತಿಯನ್ನು ಮಾತ್ರ ಬಳಸುವುದಾಗಿ ಬೆಂಗೇರಿ ಮತ್ತು ಗರಗದ ಕೇಂದ್ರಗಳು ಪತ್ರಿಕಾ ಹೇಳಿಕೆ ಕೊಟ್ಟವು.
ಮೇಲುಕೋಟೆಯ ಜನಪದ ಸೇವಾ ಟ್ರಸ್ಟನ ಸುರೇಂದ್ರ ಕೌಲಗಿಯವರು ಕೂಡ ನಮ್ಮ ಬೆಂಬಲಕ್ಕೆ ನಿಂತರು. Kavitha Kuruganti ಯವರ ಕಾಳಜಿಯಿಂದ ಇದು ರಾಷ್ಟ್ರೀಯ ಸುದ್ದಿಯಾಯಿತು. ‘ಭಾರತದ ಬಾವುಟಕ್ಕೆ ದೇಸಿ ಹತ್ತಿ ಬಳಸಿ’ ಎಂದು ಪ್ರಧಾನ ಮಂತ್ರಿಗಳನ್ನು ಒತ್ತಾಯಿಸುವ ಆಂದೋಲನ ಆರಂಭವಾಯಿತು.
ದೊರೆಸ್ವಾಮಿಯವರ ಕಂಡಾಗಲೆಲ್ಲಾ ಈ ಘಟನೆಗಳು ನೆನಪಿಗೆ ಬರುತ್ತಿದ್ದವು. ಈ ನಾಡಿನ ಸಾಕ್ಷಿ ಪ್ರಜ್ಞೆಯಂತಿದ್ದ ಹಿರಿಯಜ್ಜ ಇನ್ನು ನೆನಪು ಮಾತ್ರ.
0 ಪ್ರತಿಕ್ರಿಯೆಗಳು