೨೦೨೨ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಭಾಗ್ಯಜ್ಯೋತಿ ಹಿರೇಮಠ ಅವರ ‘ಬಿದಿರ ಬಿನ್ನಹ’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿ, ವಿಮರ್ಶಕರಾದ ಸ. ಉಷಾ ಮತ್ತು ಕೇಶವ ಮಳಗಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ‘ಸಮಕಾಲೀನ ವಿಚಾರಗಳ ಕಲಾತ್ಮಕ ಅಭಿವ್ಯಕ್ತಿ, ಬುದ್ದ ಗಾಂಧಿ ಬಸವ ಅಕ್ಕ ಇವರನ್ನಾರನ್ನೂ ನೇರವಾಗಿ ಹೆಸರಿಸದೇ ಅವರ ತಾತ್ವಿಕತೆಯನ್ನು ಮಾತ್ರ ಕಾವ್ಯವಾಗಿ ಕಟ್ಟುವ ಕಲೆಯನ್ನು ಮೈಗೂಡಿಸಿಕೊಂಡ ಬಗೆಗಾಗಿ ‘ಬಿದಿರ ಬಿನ್ನಹ’ ನಮ್ಮ ಆಯ್ಕೆ’ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಪುರಸ್ಕಾರವು ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ.
ಕವಿ ಪರಿಚಯ:
ಧಾರವಾಡ ಜಿಲ್ಲೆಯ ಗುಡಗೇರಿಯವರಾದ ಭಾಗ್ಯಜ್ಯೋತಿ ಹಿರೇಮಠರು ಎಂ,ಎ, ಎಂ.ಇಡಿ ಪದವೀಧರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ “ಕನ್ನಡ ಸಿನಿಮಾ ಹಾಡುಗಳ ಗೀತ ಮೀಮಾಂಸೆ” ಎಂಬ ವಿಷಯದ ಕುರಿತು ಸಂಶೋಧನೆಯಲ್ಲಿ ನಿರತರು, ‘ಕನ್ನಡ ಚಲನಚಿತ್ರ ರಂಗಕ್ಕೆ ನರಸಿಂಹರಾಜು ಅವರ ಕೊಡುಗೆ’ ಎಂಬ ವಿಷಯದ ಮೇಲೆ ನಡೆದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಲ್ಲದೇ ಹುಬ್ಬಳ್ಳಿಯ ಕೆ.ಎಲ್.ಇ ಧ್ವನಿ ಎಫ್.ಎಂ. ಕೇಂದ್ರದಲ್ಲಿ ನಿರಂತರವಾಗಿ ಅನೇಕ ವಿಶಿಷ್ಟವಾದ ಕಾರ್ಯಕ್ರಮಗಳಿಗೆ ಧ್ವನಿಯಾಗಿದ್ದಾರೆ. ಇವರ ಮೊದಲ ಕವನ ಸಂಕಲನ ‘ಪಾದಗಂಧ’. ಸಂಕ್ರಮಣ ಕಾವ್ಯ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ, ಹಾಸನದ ಕಾವ್ಯ ಮಾಣಿಕ್ಯ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ಪ್ರಶಸ್ತಿ ಮುಂದಾದವುಗಳು ಇವರ ಕವಿತೆಗಳಿಗೆ ಲಭಿಸಿವೆ. ಕೃಷಿ, ಸಂಗೀತ, ಸಿನಿಮಾ, ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಸದ್ಯ ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದಾರೆ.
0 ಪ್ರತಿಕ್ರಿಯೆಗಳು