ಬೇಕಾಗಿರುವುದು ರಾಮ ಭಾರತವಲ್ಲ.. ಭೀಮ ಭಾರತ!

 

‘ದಲಿತ ಭಾರತ’:  ಬಹುತ್ವ ಭಾರತದ ಮರುಹುಟ್ಟು

ಭಾರತದೊಳಗೆ ಅನೇಕ ಭಾರತಗಳಿವೆ. ಬ್ರಿಟೀಷರ ಇಂಡಿಯಾ, ಶ್ರೇಣಿಕೃತ ಜಾತಿ ವ್ಯವಸ್ಥೆಯ ವೈದಿಕ ಭಾರತ, ಜಾಗತೀಕರಣದ ಮೂಸೆಯಲ್ಲಿ ಕಟ್ಟಲ್ಪಡುತ್ತಿರುವ ನವಭಾರತ, ಉನ್ಮತ್ತ ಧರ್ಮರಾಜಕೀಯದ ರಾಮಭಾರತ ಅಥವಾ ನವ ಹಿಂದುತ್ವದ ಹುಸಿ ದೇಶಪ್ರೇಮದ ಭಾರತ.

ಇಲ್ಲಿ ಇನ್ನಷ್ಟು ಭಾರತಗಳಿವೆ. ಅವುಗಳೆಂದರೆ ಸದಾ ತನ್ನ ನೆಲದಲ್ಲಿ‌ ತಾನೇ ಪರಕೀಯನಂತೆ ತೆರವುಗೊಳ್ಳುತ್ತಾ ಬದುಕುತ್ತಿರುವ ಆದಿವಾಸಿ ಭಾರತ, ಅವಮಾನ, ಹಸಿವು, ದುಃಖತಪ್ತ ದಲಿತ ಭಾರತ, ಚರಿತ್ರೆ ಯಿಂದ ಹೊರಗಿಡಲ್ಪಟ್ಟ ನೆಲಮೂಲದ ಮಕ್ಕಳ ಅನಾಥ ಭಾರತ. ಈ ಎಲ್ಲವನ್ನೂ ಒಳಗೊಂಡ ಬಹುತ್ವ ಭಾರತ.

ಇದೀಗ ನಾವು ಕಳೆದು ಹೋಗಿರುವ ಬಹುತ್ವ ಭಾರತವನ್ನು ಉತ್ಖನನ ಮಾಡಿ ಪಡೆದುಕೊಳ್ಳುವ ಅಥವಾ ಈ ಮೊದಲಿನ ವೈದಿಕ ಭಾರತ, ನವಹಿಂದೂತ್ವದ ಭಾರತ, ರಾಮಭಾರತದಿಂದ ಒಡೆದು ಚೂರು ಚೂರು ಮಾಡಲ್ಪಟ್ಟ ಅಥವಾ ಮಣ್ಣು ಎಳೆದು ಕಾಲ ಕೆಳಗೆ ತುಳಿಯಲ್ಪಟ್ಟ ಬಹುತ್ವ ಭಾರತವನ್ನು ಮರುಕಟ್ಟುವ ಸವಾಲು ನಮ್ಮ ಮುಂದೆ ಇದೆ.

ಹಿಂದುತ್ವದ ಭಾರತ ಅಥವಾ ರಾಮ ಭಾರತವನ್ನು ಕಟ್ಟಲು ಹಿಂಸೆ-ರಕ್ತ ಯಾತ್ರೆ, ಜಾತ್ರೆಗಳ ರಣೋತ್ಸಾಹದಲ್ಲಿ ಭಕ್ತಗಣ ಹೊರಟಿರುವ ಈ ಹೊತ್ತಿನಲ್ಲಿ ಹಸಿವು, ಅವಮಾನ, ತರತಮ, ಸಾಮಾಜಿಕ- ಸಾಂಸ್ಕೃತಿಕ-ಆರ್ಥಿಕ ಅನ್ಯಾಯ ಪೀಡಿತ ನಿಜಭಾರತದ ಕುರಿತು ಅರ್ಥಾತ್ ದಲಿತ ಭಾರತದ ಕುರಿತು ಸಂವಾದಿಸುವುದು, ಮಾತನಾಡುವುದು ಅಪಾಯವನ್ನೆ ಎದುರು ಹಾಕಿಕೊಂಡಂತೆ ಭಾಸವಾಗುತ್ತಿದೆ.  ಹಾಗಂತ ಸುಮ್ಮನಿದ್ದರೆ ಈ ದೇಶದ ಸಾಮಾನ್ಯ ನಾಗರೀಕನಾಗಿ, ಸಂವಿಧಾನವನ್ನು ಉಳಿಸುವ ಹೊಣೆಗಾರಿಕೆಯಿಂದ ಪಲಾಯನ ಮಾಡಿದಂತಾಗುತ್ತದೆ. ಈಗ ಮಾತನಾಡುವ ಹೊತ್ತು. ಇದಲ್ಲದೆ ಇನ್ಯಾವ ಹೊತ್ತು ಮಾತಿಗೆ ಸರಿಯಾದ ಸಮಯ? ಈಗ ಮಾತನಾಡುವ ಮಾತುಗಳನ್ನು ಮಾತನಾಡದೆ ಹೋದರೆ ಮಾತನಾಡಲು ಇನ್ನೆಂದೂ ಇರಲಾರೆವೆನೋ? ನನ್ನ ಭಾರತಕ್ಕಾಗಿ  ಈ ಮಾತನಾಡುವುದು ತುರ್ತು ಮತ್ತು ಅದಕ್ಕಾಗಿ ಹೋರಾಡುವುದು ಅಗತ್ಯವೂ ಆಗಿದೆ.

ಬ್ರಿಟೀಷ್ ಇಂಡಿಯಾ ಬಗ್ಗೆ,  ಜಾತಿ ಆಧಾರಿತ ಶ್ರೇಣೀಕೃತ ಸಿದ್ದಾಂತದ ಹಿಂದೂಸ್ತಾನದ ಬಗ್ಗೆ. ಹುಸಿ ಭಕ್ತಿಯ ರಾಮರಾಜ್ಯದ ಬಗ್ಗೆ, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ವಾಗಾಡಂಬರ ಪ್ರೇರಿತ ಭಾರತದ ಬಗ್ಗೆ ಸಲೀಸಾಗಿ ಮಾತನಾಡಬಹುದು. ಹಾಗೆ ಎಲ್ಲರ ಬಾಯಿಗಳಿಗೆ ಮಾತುಗಳನ್ನು ತುರುಕಿ ಮಾತಾಡಿಸಲಾಗುತ್ತಿದೆ. ಆದರೆ ಇವುಗಳೊಳಗೆ ಬೇರೂರಿರುವ, ಬಸವಳಿದು, ಬೆಂಡಾಗಿ ನರಳುತ್ತಿರುವ, ನಿತ್ಯ ಕಾದಾಡಿ ಬದುಕುತ್ತಿರುವ ಸಂಘರ್ಷಮಯ, ದುಃಖಿತ ದಲಿತ ಭಾರತದ ಬಗ್ಗೆ ಮಾತನಾಡುವುದು ಎಂದರೆ ಎದೆಯಲ್ಲಿ ಹೆಪ್ಪುಗಟ್ಟಿದ ನೋವು ಒಮ್ಮಲೆ ಸಿಡಿದು ನೀರಾಗಿ ನುಗ್ಗುತ್ತದೆ.

ಭರತಖಂಡದ ಮೆಲುಗಣ್ಣಿನ ಚರಿತ್ರೆಯನ್ನು ಬಗೆದು ನಿಜ ಚರಿತ್ರೆಯ ಕುರಿತು ಮಾತಾನಾಡಿದಾಗಲೆಲ್ಲಾ ಕೇಡಿನಿಂದ ಕೂಡಿದ ಪ್ರತಿರೋಧಗಳು ಭುಗಿಲೇಳುತ್ತವೆ.  ದೇಶದ್ರೋಹದ ಹಣೆಪಟ್ಟಿ ಕಟ್ಟಿ ಜೈಲುಗಳಿಗೆ ಗುದುಮಲಾಗುತ್ತದೆ. ಬೆತ್ತಲೆಗೊಳಿಸಿ ನಡುರಸ್ತೆಯಲ್ಲಿ  ಬಡಿಯಲಾಗುತ್ತದೆ. ಇಚ್ಛೆ ಪೂರ್ತಿ ಅತ್ಯಾಚಾರ ನಡೆಸಿ ಮರಗಳಿಗೋ, ಮನೆ ಜಂತಿಗೋ, ಲೈಟುಕಂಬಕ್ಕೂ ಬಿಗಿದು ತೂಗು ಹಾಕಲಾಗುತ್ತದೆ. ಇದು ಅಮಾನುಷ, ವಿಕೃತಿ, ಅನ್ಯಾಯ ಎಂದು ಈ ದೇಶದ ಒಂದು ಮನುಷ್ಯ ವರ್ಗಕ್ಕೆ, ರಾಜಕೀಯ ವಲಯವೊಂದಕ್ಕೆ  ಅನಿಸುವುದೇ ಇಲ್ಲ. ಇಷ್ಟು ಸಲೀಸಾಗಿ ತನ್ನದೇ ನೆಲದಲ್ಲಿ ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ಸಂಸ್ಕೃತಿಯ ಹೆಸರಲ್ಲಿ ಒಂದು ಜಾತಿ, ಸಮುದಾಯವನ್ನು ತಿಂದು ಹಾಕುವ, ಕೊಂದು ಹಾಕುವುದು ಬಹುಶಃ ಅದು  ಭಾರತದಲ್ಲಿ ಮಾತ್ರ ಸಾಧ್ಯ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ಗೋಮತಿ ಎಂಬ ಮೇಲ್ಜಾತಿಯ ಹುಡುಗಿಯನ್ನು ದಲಿತ ಮುರುಗನ್ ಮದುವೆಯಾಗಿದ್ದಕ್ಕೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿ ಸುಡುವುದು. ಮಂಡ್ಯದಲ್ಲಿ ನಡೆಯುವ ಮರ್ಯಾದೆಗೇಡು ಹತ್ಯೆಗಳು, ಹರಿಯಾಣದಲ್ಲಿ ದಲಿತ ಸಮುದಾಯದ ಅಕ್ಕ-ತಂಗಿಯರನ್ನು ಅತ್ಯಾಚಾರ ಮಾಡಿ ನೇಣು ಬಿಗಿಯುವುದು, ಉತ್ತರ-ದಕ್ಷಿಣದ ಗಡಿ ಇಲ್ಲದೆ ಕುದುರೆ ಸವಾರಿ ಕಲಿತ ಎಂಬ ಕಾರಣಕ್ಕೆ ಕೊಲ್ಲುವುದು, ಸತ್ತ ದನದ ಚರ್ಮ ಸುಲಿದ ಎಂಬ ಕಾರಣಕ್ಕೆ ಐಷಾರಾಮಿ ಕಾರಿಗೆ ಕಟ್ಟಿ ಎಳೆದಾಡಿಕೊಂಡು ಬಡಿಯುವುದು ಎಲ್ಲವೂ ಏಕರೂಪದ ಪೈಶಾಚಿಕತನವೇ. ಉದ್ದೇಶವೂ ಏಕರೂಪದ್ದೇ. ಇದಕ್ಕಿಂತ ಇನ್ನೊಂದು ಪೈಶಾಚಿಕತನವೆಂದರೆ ಇಷ್ಟೆಲ್ಲಾ ನಡೆಯುತ್ತಿರುವುದನ್ನು ಹತ್ತಿಕ್ಕಿ ನೆಲದ ನ್ಯಾಯವನ್ನು ಕಾಯಬೇಕಾದ  ಚೌಕಿದಾರರು ನನಗೆ ಬೇಕಾದರೆ ಗುಂಡಿಡಿ ದಲಿತರನ್ನು ಕೊಲ್ಲಬೇಡಿ ಅನ್ನೋದು. ಅಧಿಕಾರ ದಂಡ ಕೈಯಲ್ಲಿದ್ದು ಸಂವಿಧಾನವನ್ನು ಕಾಯಬೇಕಾದವರ ಯೋಗ್ಯತೆ ಈ ಮಟ್ಟಿನದ್ದಾದರೆ ದೂರು ಕೊಡುವುದಾದರೂ ಯಾರಿಗೆ? ಅವರಿಂದ ಬಯಸಬಹುದಾದ ಹಿತವಾದರೂ ಏನು?.

ದಲಿತ ಪದ ಬಳಕೆಯನ್ನು ನಿಷೇಧಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾದದ್ದು ನನಗೆ ಆಶ್ಚರ್ಯ ತರಲಿಲ್ಲ. ಬದಲಾಗಿ ಇದನ್ನು ಬದಲಾಯಿಸ ಹೊರಟವರ ಎದೆಯೊಳಗೆ ಪರಂಪರಾಗತವಾಗಿ ಆಡುತ್ತಿರುವ ನಂಜು ಕಾಣುತ್ತಿತ್ತು.

ದಲಿತ ರಾಜಕಾರಣವಷ್ಟೇ ಹಿಂದುತ್ವದ ಬಲೆಯೊಳಗೆ ಚಾಕರಿ ಮಾಡುತ್ತಿಲ್ಲ. ದಲಿತ ಸಂಸ್ಕೃತಿ ಅಂದರೆ ಬಹುಜನ ಸಂಸ್ಕೃತಿ, ದಲಿತರ, ಶೂದ್ರ ಸಮುದಾಯಗಳ ಆದರ್ಶ ವ್ಯಕ್ತಿಗಳನ್ನು ಅದೇ ಸಮುದಾಯಗಳಿಗೆ ಅರಿವಿಗೆ ಬರದಂತೆ ಹಿಂದುತ್ವದ ಬಲೆಯೊಳಗೆ ರೂಪಾಂತರಗೊಳಿಸಿ ವಶಮಾಡಿಕೊಳ್ಳಲಾಗಿದೆ. ೨೦ ವರ್ಷಗಳ ಹಿಂದೆ ದಲಿತರು -ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳೇ ಇದ್ದ ಸ್ಲಂ ಒಂದರಲ್ಲಿ ನಾನೇ ಉದ್ಘಾಟಿಸಿದ್ದ ಸ್ವಾಮಿ ವಿವೇಕಾನಂದ ಯುವಕರ ಸಂಘ ಇತ್ತೀಚೆಗೆ ‘ಸ್ವಾಮಿ ವಿವೇಕಾನಂದ ಹಿಂದೂ ಯುವಕರ ಸಂಘ’ವಾಗಿ ವೇಷ ಬದಲಾಯಿಸಿಕೊಂಡಿದೆ. ನಕಲಿ ದೇಶಭಕ್ತರು ಬಿತ್ತಿದ ವಿಷ ಬೀಜ ಮರವಾಗಿ ಬೆಳೆದಿದೆ. ವಿವೇಕಾನಂದರಂತಹ ಜಗದ ಸಂತನೊಬ್ಬ ಈಗ ಒಂದು ಧರ್ಮದ ವಿರಾಟ ನಾಯಕನಂತೆಯೂ ಇನ್ನೊಂದು ಧರ್ಮದ ಖಳನಾಯಕನಂತೆಯೂ ಚಿತ್ರಿತವಾಗಿ ಬಿಟ್ಟಿದ್ದಾರೆ. ಇದು ಇಲ್ಲಿಗೆ ನಿಂತಿಲ್ಲ. ಹಳ್ಳಿಯೊಂದರಲ್ಲಿದ್ದ ಗ್ರಾಮದೇವರು ಆಂಜನೇಯ ಸ್ವಾಮಿ ಈಗ ಹಿಂದೂ ವಿರಾಟ ‘ಭಜರಂಗಿ’ಯಾಗಿದ್ದಾನೆ. ತಾಂಡಾಗಳು, ಹಟ್ಟಿಗಳಲ್ಲಿದ್ದ  ಬಾಬಾ ಸಾಹೇಬ್ ಅಂಬೇಡ್ಕರ್ ಯುವಕರ ಸಂಘಗಳು ಈಗ ಅಂಬೇಡ್ಕರ್ ಹಿಂದೂ ಯುವಕರ ಸಂಘಗಳಾಗಿ ರೂಪಾಂತರಗೊಂಡಿವೆ. ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಸೇವಾಲಾಲ್, ಸಿದ್ದರಾಮೇಶ್ವರ, ಕನಕದಾಸ.. ಹೀಗೆ ಎಲ್ಲರನ್ನೂ ಹಿಂದೂತ್ವದ ಬಲೆಯೊಳಗೆ ಹೆಣೆದು ಮೆರವಣಿಗೆ ಹೊರಡಿಸಲಾಗಿದೆ.  ಬಹುತ್ವವನ್ನು ಸೀಳಿ ಸಿಡಿಗೆ ಏರಿಸುವ ಕೆಲಸ ನಡೆಯುತ್ತಲೆ ಇದೆ.

ದಲಿತ ಎಂಬುದು ಒಂದು ನಿರ್ಧಿಷ್ಟ ಜಾತಿ, ಜನಸಮುದಾಯದ ಬದುಕಷ್ಟೆ ಆಗದು, ಅದೊಂದು ಬೇರ ಆಳದ ಅಳಲಿನ ಸಂವೇದನೆ. ಸ್ಥಾವರ ಪ್ರಜ್ಞೆಗೆ ಪ್ರತಿರೋಧವಾಗಿ ನುಗ್ಗಬಲ್ಲ ಜಂಗಮ ಪ್ರಜ್ಞೆ. ದಲಿತ ಎಂಬ ಪದವೇ ಒಂದು ವರ್ಗಕ್ಕೆ ಈಗ ಸಿಂಹಸ್ವಪ್ನದಂತೆ ಕಾಡುವ ಭಯ ಹೆಚ್ಚಾಗುತ್ತಿದೆ. ಹಿಂದುತ್ವ ಒಂದು ಪ್ರತಿಗಾಮಿ ಶಕ್ತಿಯಾಗಿ ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಅದಕ್ಕೆ ಪ್ರತಿರೋಧವಾಗಿ ದಲಿತತ್ವ ಎಂಬ ಪ್ರಗತಿಗಾಮಿ ಬದುಕು ಮತ್ತು ಸಿದ್ದಾಂತವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಬುದ್ಧ, ಬಸವರಾದಿಯಾಗಿ ಪುಲೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಸಾಹು ಮಹಾರಾಜರು, ಕುದ್ಮಲ್ ರಂಗರಾಯರು ಸೇರಿದಂತೆ ಅನೇಕರು ಧರಿಸಿದ ದಲಿತತ್ವವನ್ನು ಇಂದು ಧರಿಸಬೇಕಿದೆ.

ದಲಿತ ಎಂಬ ಪದವನ್ನು ಕೇವಲ ಅಸ್ಪೃಶ್ಯರು ಎಂಬ ಅರ್ಥದ ಆಚೆಯೂ ಇಂದು ಗ್ರಹಿಸುವ, ವಿಸ್ತರಿಸುವ ಅಗತ್ಯತೆ ನಮ್ಮ ಮುಂದೆ ಇದೆ. ದಲಿತ ಕಥಾನಕಗಳು, ದಲಿತ ಸಂಸ್ಕೃತಿ, ದಲಿತ ಸಾಹಿತ್ಯ, ದಲಿತ ಚಳವಳಿ ಇವು ಒಟ್ಟಾರೆ ಬಹುಜನ ಸಂಸ್ಕೃತಿ ದಲಿತ ಭಾರತದ ಗುಣಲಕ್ಷಣಗಳು. ಇದರೊಳಗೆ ಪುರೋಹಿತಶಾಹಿ, ಫ್ಯಾಸಿಸ್ಟ್ ಶಕ್ತಿಗಳ ವಿರುದ್ದ ಹೋರಾಡುವ ಪ್ರತಿಯೊಬ್ಬರು ದಲಿತ ಭಾರತದ ಭಾಗವಾಗಿರುತ್ತಾರೆ. ಮತ್ತು ಭಾಗವಾಗಬೇಕಿದೆ.

ಈ ದೇಶದ ದಲಿತ ಆತ್ಮಕಥೆಗಳು ಯಾಕೆ ಧಾರುಣವಾಗಿಯೇ ಅಥವಾ ಅಗಾಧ ನೋವಿನಿಂದ, ದುಃಖದಿಂದ ಕೂಡಿರುತ್ತವೆ? ಒಂದು ಪ್ರೇಮ ಕವಿತೆಯೂ ದುರಂತದಲ್ಲಿ ಕೊನೆಯಾಗುವ, ಹಾಗೇಯೇ ನಿರೂಪಿಸುವುದು ಯಾಕೆ ಎಂದು ನೋಡಿದರೆ ಅದರ ಅನುಭವ ಲೋಕವೇ ಆ ಮಟ್ಟಿನದ್ದಾಗಿರುತ್ತದೆ. ನೋವು, ಅವಮಾನ, ದುಃಖ, ಹಸಿವುಗಳನ್ನು ಅಭಿವ್ಯಕ್ತಿಸಲು ಕಂಡು ಕೊಂಡ ಮಾರ್ಗ ಅದು ಅಷ್ಟೇ.

 

ಇಲ್ಲಿ ಜಾತಿ ವಿನಾಶ ಸಾಧ್ಯವಿಲ್ಲ ಎಂದು ನನಗನಿಸುತ್ತದೆ. ಆದರೆ ಜಾತಿ-ಜಾತಿಗಳ ನಡುವೆ ಸಮನ್ವಯ, ಸಮತೋಲವನ್ನು ಕಾಯ್ದುಕೊಳ್ಳುವ ಎಲ್ಲಾ ನಿಖರ ವೈಜ್ಞಾನಿಕ- ವೈಚಾರಿಕ ಸೂತ್ರವನ್ನು ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ರೂಪಿಸಿ ಕೊಟ್ಟಿದ್ದಾರೆ. ಆದರೆ ಪರಂಪರಾಗತವಾಗಿ ಈ ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ಬಲವನ್ನು ಕಾಯ್ದುಕೊಂಡು ಬಂದಿರುವ ಜಾತಿಗಳು ಇದನ್ನು ಒಪ್ಪಲಾರದೆ ಕ್ಷೋಭೆ ಸೃಷ್ಟಿಸಲು ಯತ್ನಿಸುತ್ತಿವೆ. ಜಾತಿ ಶ್ರೇಷ್ಠತೆಯ ಕ್ರೌರ್ಯಕ್ಕೆ ಒಂದೇ  ಉದ್ದೇಶಿವಿರುತ್ತದೆ. ಅದು ಹಿಂಸೆಯ ಮೂಲಕ ತನ್ನ ಅಸ್ತಿತ್ವವನ್ನು ಕಾಯ್ದುಕೊಳ್ಳುವುದು. ಭಾರತದ ಜಾತಿಪದ್ಧತಿಯ ಬಲಾತ್ಕಾರವೇ ಹಾಗೆ. ಅದು ತನ್ನ ವಿರೋಧಿ ನೆಲೆಗಳನ್ನು ಹತ್ಯೆ ಮಾಡುತ್ತಲೇ ಬದುಕಿದೆ.

ಜಾತಿಪದ್ಧತಿಯ ವಿರುದ್ಧ, ಪುರೋಹಿತಶಾಹಿ ಶಕ್ತಿಗಳ ವಿರುದ್ಧ ಹೋರಾಡಲು ಇರುವ ಏಕೈಕ ಸಾಮೂಹಿಕ ಸಂಬಂಧ ಶಕ್ತಿ ಎಂದರೆ, ಅದು ದಲಿತ ಶಕ್ತಿ. ಇದು ಜಾತಿ ವ್ಯವಸ್ಥೆಯ ಬೇರುಗಳನ್ನು ಸುಡಲುತೊಡಗಿದೆ. ಈ ಕ್ರಿಯೆಗೆ ಮೀಸಲಾತಿ ಮಹಾನ್ ಬೆಂಬಲವಾಗಿದೆ.    ಇದರಿಂದ ಘಾಸಿಗೊಂಡಿರುವ ಜಾತಿ ಪದ್ಧತಿಯ ವಾರಸುದಾರರು ತನ್ನ ಕೂಸಾಗಿರುವ ಪ್ರತಿಗಾಮಿ ರಾಜಕಾರಣದಿಂದ ಮೀಸಲಾತಿಗಿರುವ ಜಾತಿಭಗ್ನ ನೆಲೆಯನ್ನು ವಿರೂಪಗೊಳಿಸಲು ಈಗ ಸಂಚು ನಡೆಸುತ್ತಲೆ ಇದ್ದಾರೆ. ಇಂತಹ ಸಂದರ್ಭದಲ್ಲಿ  ಸಮಕಾಲೀನ ಶೂದ್ರ  ಸಮಾಜ ತನ್ನ ರಕ್ಷಣೆಗಾಗಿ ಅಪಾಯಕಾರಿ ಮೌನವೊಂದನ್ನು ಸೃಷ್ಟಿಸಿಕೊಂಡಿರುವುದು  ದೌರ್ಭಾಗ್ಯದ ಸಂಗತಿ.

ನಮ್ಮ ಕೂಗು ನಮಗೆ ಕೇಳುವ, ನಮ್ಮ ಏಟು ನಮಗೆ ಬೀಳುವ ತಂತ್ರವನ್ನು ಕೋಮುಶಕ್ತಿಗಳು ರೂಪಿಸಿವೆ. ನಮ್ಮ ನಡುವೆ ಇರುವ ಸಿದ್ಧ ಚಳವಳಿಗಳ ಭಾಷೆ ಮತ್ತು ಮಾದರಿಗಳಿಗೆ ಇಂಥ ಸಾಮಾಜಿಕ ಕ್ರೌರ್ಯವನ್ನು ಭೇದಿಸುವ ಕಲೆಗಾರಿಕೆ ಇಲ್ಲ. ನಾವು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತೇವೋ ಕ್ರಮೇಣ ಅದೇ ವ್ಯವಸ್ಥೆಯ ಯಜಮಾನರಾಗಿ ಬಿಡುವ ಮಾಯೆಯಿಂದ ದೂರಾಗಬಲ್ಲ ಹಾಗೂ ಸಾರ್ವತ್ರಿಕ ಪ್ರೀತಿಯನ್ನು ತನ್ನ ಬೆಂಬಲವನ್ನಾಗಿಸಿಕೊಳ್ಳಬಲ್ಲ ಆತ್ಮವೂ ಸಿದ್ಧ ಚಳವಳಿಗಳಿಗಿಲ್ಲ. ಬರೀ ದಲಿತರು ಮಾತ್ರವೇ ಈ ಸಮಾಜ ಬದಲಾವಣೆಯ ಹಾಗೂ ಸರ್ಕಾರ-ಸಮಾಜದ ವಿರುದ್ಧದ ಗುತ್ತಿಗೆದಾರರಾಗಿರಲು ಇನ್ನೆಷ್ಟು ದಿನ ಸಾಧ್ಯ. ಅಂಥ ಸಾಧ್ಯತೆಯ ಪರಿಸರ ನಮ್ಮೆದುರಿಗಿದೆಯೇ? ಎನ್ನಿಸಿದಾಗ ದುಃಖವಾಗುತ್ತದೆ.

ಸಮಾಜ ಬದಲಾವಣೆಯ ಪ್ರಭಾವ ಮತ್ತು ಪ್ರಾಣವನ್ನು ಹೊಂದಿದ್ದ ಪ್ರಗತಿಪರ ಚಳವಳಿಗಳು ವಸ್ತುಕೇಂದ್ರಿತವಾಗಿ ಹೋಗಿವೆ. ಜಾತಿ ಯಜಮಾನಿಕೆಯ ಪ್ರತಿಗಾಮಿ ರಾಜಕಾರಣ ಅಂಥ ಚಳುವಳಿಗಳನ್ನು ವ್ಯಕ್ತಿ ಕೇಂದ್ರಿತಗೊಳಿಸಿದೆ. ತನ್ನ ಬಲಾತ್ಕಾರದ ಮೂಲಕ ಚಳವಳಿಗಳ ಧ್ವನಿಯನ್ನು ಭ್ರಷ್ಟಗೊಳಿಸಿ ನಿಷ್ಕ್ರಿಯಗೊಳಿಸುತ್ತಾ ಮೆರೆದಿದೆ. ಇಂತಹ ಕಾಲಘಟ್ಟದಲ್ಲಿ ಹೊಸ ರೂಪದ ಚಳವಳಿಯೊಂದನ್ನು ಕಟ್ಟಲು ದಾರಿಗಳನ್ನು ಕಂಡುಕೊಳ್ಳಬೇಕಿದೆ.

ದಲಿತ ಭಾರತವೆಂದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಎಲ್ಲಾ ಜಾತಿ, ಧರ್ಮಗಳ ದಮನಿತರ  ದೇಶ. ಇದನ್ನು ಕಟ್ಟುವ ಬಗೆ ಹೇಗೆ ಎನ್ನುವುದು ನಮ್ಮ ಮುಂದಿರುವ ಸವಾಲು. ಸುಲಭವಾಗಿ ಸಂವಿಧಾನದಡಿಯಲ್ಲಿ ಭಾರತವನ್ನು ಕಟ್ಟಬಹುದು ಎಂದು ಹೇಳಬಹುದು, ಆದರೆ ಅಂತಹ ಸಂವಿಧಾನವನ್ನೆ ಇಲ್ಲವಾಗಿಸುವ ಧರ್ಮ, ದೇವರು, ಏಕ ಸಂಸ್ಕೃತಿಯಂತಹ ಕೊಳೆತು ನಾರುತ್ತಿರುವ ಜಡತ್ವದ  ಹಿಮ್ಮುಖ ಚಲನೆಯ ಸಂವಿಧಾನ ರೂಪಿಸಹೊರಟಿರುವವರನ್ನು ನಾವೀಗ ಮುಖಾಮುಖಿಯಾಗಿ ಎದುರಿಸಬೇಕಾಗಿದೆ. ಸಾಮಾಜಿಕ ತರತಮ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಗುಲಾಮಗಿರಿಯನ್ನು ಮರುಸ್ಥಾಪಿಸುವ ಶಕ್ತಿಗಳನ್ನು ದಿಟ್ಟವಾಗಿ ಎದುರಿಸುವ ಕಾಲವೊಂದು ಬಂದಿದೆ.

ಯಾರೆಲ್ಲಾ ಸಾಮಾಜಿಕ ಅವಮಾನ, ತರಮತ, ಶೋಷಣೆ, ಹಸಿವಿನಿಂದ ನರಳುತ್ತಿದ್ದಾರೋ ಅವರೆನ್ನೆಲ್ಲಾ ಒಗ್ಗೂಡಿಸಿ ಸಿದ್ದಮಾದರಿಯ ಆಚೆಯ ಹೊಸ ಚಳವಳಿಯೊಂದನ್ನು ಕಟ್ಟಬೇಕಾಗಿದೆ.  ಹಿಡಿ, ಹೊಡಿ, ಕೊಲ್ಲು, ಹೊರಗಿಡು, ಸುಡು ಎಂಬ ರಾಮಭಾರತಕ್ಕಿಂತ  ಸಮತೆ, ಮಮತೆ, ಸಹೋದರತೆ, ಎಲ್ಲರನ್ನೂ ಒಳಗೊಳ್ಳುವ  ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ನಿರೂಪಿತ ಭೀಮ ಭಾರತ ನಿರ‍್ಮಿಸಬೇಕಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಒಳಗೊಳ್ಳುವಿಕೆಯಿಂದ  ಮಾತ್ರ  ದಲಿತ ಭಾರತದ ಮರುಹುಟ್ಟು ಸಾಧ್ಯ.

‍ಲೇಖಕರು Avadhi

December 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: