ಕೋವಿಡ್ ನಿಂದಾಗಿ ಮೃತಪಟ್ಟ ತನ್ನ ಗೆಳೆಯ, ಸಾಹಿತ್ಯ ಲೋಕದಲ್ಲಿ ಹೆಸರು ಮಾಡುವ ತುಂಬು ಭರವಸೆ ನೀಡಿದ್ದ
ಶಿವುಕುಮಾರ ಅಮ್ಮಾಪೂರ ಬಗ್ಗೆ ಒಂದು ಮನ ಕಲಕುವ ವಿದಾಯ ಬರಹ
ಸಾಹೇಬಗೌಡ ಬಿರಾದಾರ
ಸಗರನಾಡಿಗೊಂದು ದಿನ ಎದೆಮುಟ್ಟಿ, ಹೆಮ್ಮೆ ಪಟ್ಟುಕೊಳ್ಳುವಂತಹ ಸಂದರ್ಭ ಬಂದೆ ಬರುತ್ತದೆ. ವಿಮರ್ಶಾತ್ಮಕ, ಬಹುಮುಖ ಪ್ರತಿಭೆಯ ರತ್ನವೊಂದು ತನ್ನ ಮಡಿಲಲ್ಲಿ ಬೆಳೆಯುತ್ತಿದೆ ಎಂದು ಅ ನೆಲಕ್ಕೆ ಬಿಗಿ ಅಭಿಮಾನವಿತ್ತು. ಆದರೊಂದಿಗೆ ಹೀಗೆ ಬೆಳೆಯಬಲ್ಲನೆ ಎಂದು ಇನ್ನೂ ಆ ಊರಿನ ಜನರು ಕೇಳಬಹುದೇನೋ…
ರಾಜ್ಯವೇ ತನ್ನಾಶೆಗಣ್ಣುಗಳಿಂದ ಇವರ ಅಭಿಪ್ರಾಯ, ಇವರ ಪುಸ್ತಕ, ಮಾತು, ಚರ್ಚೆ ಆಲಿಸುತ್ತಿತ್ತು ಎಂದೆಲ್ಲ ಕನಸ ಕಂಡಿದ್ದೆವು. ‘ಸಿಂಹದ ಹೊಟ್ಟೆಯಲ್ಲಿ ಸಿಂಹ ಜನ್ಮ ತಾಳುತ್ತದೆ, ಅದರ ಘರ್ಜನೆ, ಹೆಜ್ಜೆ, ಅದರ ನಡಾವಳಿಕೆಯಿಂದ ರಾಜ್ಯದ ಮನೆಮಾತಾಗುತ್ತದೆ’ ಎಂದು ಅದೆಷ್ಟೋ ಬಾರಿ ಹಿರಿಹಿರಿ ಹಿಗ್ಗಿದವರು ನಾವುಗಳೆಲ್ಲ…
ಅವರ ತಂದೆಯ ಹೆಸರಿನ ಮುಂದೆ ನಾವು, ಅವನ ಹೆಸರಿನ ಮುಂದೆ ಅವನೇ ತಲೆತಗ್ಗಿಸಿ ನಿಂತದ್ದು ವಿದಿಯ ಆಟವೋ ನಾವು ಅರಿಯದಂತಾದೆವು. ತನಗೆ ತಾನೇ ಅಂಟಿಸಿಕೊಂಡ ಕೆಲವು ಮೈಚಳಿಗೆಲ್ಲ ಅಪ್ಪನ ಸಾಹಿತ್ಯದ ಹಂದರ ಹರಿದು ಬಿತ್ತು, ಇವರ ತಂದೆ ಅನೇಕ ಸಾಹಿತ್ಯ, ಸಾಂಸ್ಕೃತಿಕ ಒಡನಾಡಿಗಳಿಗೆ ಜೀವ ತುಂಬಿದ ಶ್ರೇಷ್ಠ ಚಿಂತಕರು, ವಾಗ್ಮಿಗಳು, ಚುಟುಕು ಕವಿಗಳು, ನಿವೃತ್ತ ಶಿಕ್ಷಕರು ದಿ.ಗುರುಬಸವಯ್ಯ ಅಮ್ಮಾಪೂರ ಅವರು.
ಈಗೆ 20 ವರ್ಷದ ಹಿಂದೆ, ಅಂದು ಪ್ರಕಟಗೊಳ್ಳುವ ಲಂಕೇಶ ಪತ್ರಿಕೆ, ಹಾಯ್ ಬೆಂಗಳೂರು, ಸಂಕ್ರಮಣ ಮುಂತಾದ ಪತ್ರಿಕೆಗಳ ಸಾಹಿತ್ಯ, ಸಾಮಾಜಿಕ ಹಾಗೂ ರಾಜಕೀಯ ವಿಷಯಗಳ ವಿಮರ್ಶೆ ಹಾಗೂ ಚರ್ಚೆಯನ್ನು ಹುಲಿಯಂತಾ ತಂದೆ (ಗುರುಬಸಯ್ಯ ಅಮ್ಮಾಪೂರ) ಎದುರಿಗೆ ಹುಬ್ಬೆರುವಂತೆ ಚರ್ಚಿಸುತ್ತಿದ್ದ ಈಗಿದ್ದ, ಇನ್ನಿಲ್ಲದ 38 ರ ವ್ಯಕ್ತಿ ಶಿವುಕುಮಾರ ಅಮ್ಮಾಪೂರ. ಸಣ್ಣವರು ತಪ್ಪು ಮಾಡಿದರೆ ಹೇಳಬಹುದು ಕುಮ್ಮು, (ಶಿವುಕುಮಾರನಿಗೆ ಪ್ರೀತಿಯಿಂದ ಕುಮ್ಮು, ಶಿವು ಮುತ್ಯ, ಕುಮ್ಮಣ್ಣ ಎಂದೆಲ್ಲ ಕರಿತಿದ್ರು) ನೀನಗೆ ನಾವು ಏನು ಹೇಳಬಲ್ಲೆವು, ನವಿಲಿಗೆ ನರ್ತನ, ಕೋಗಿಲೆಗೆ ಕೂಗು, ಕಾಮನಬಿಲ್ಲಿಗೆ ಅಂದ ಚಂದ ಹೇಳಿದಂಗ ಆಗ್ತದೆ, ಅಪ್ಪ ಹಾಗೂ ಅಮ್ಮನ ನೆನಪ ಮಾಡಿಕೊ, ಅವರು ಎಂಥಾ ಶ್ರೀಮಂತ ಬದುಕು ಕಟ್ಟಿಕೊಂಡಿದ್ದರು. ನನಗಂತು ವರ್ಷಗಟ್ಟಲೆ ಊಟ ಮಾಡಿಸಿದ ಮನೆ, ಮನಸ್ಸು ನಿಮ್ಮದಾಗಿತ್ತು. ಆ ಮನೆಯ ಉಪ್ಪಿನ ಋಣ ನನ್ನ ಮ್ಯಾಲ ಐತಿ.
ನಿಮ್ಮೆಲ್ಲರೊಂದಿಗೆ ಉಂಡು,ಉಟ್ಟು ಗುರುವಿನ ಮಾತು ಕೇಳುತ್ತ ಬೆಳೆದವನು ನಾ, ನಿನ್ನನ್ನು ನೋಡಿ ಅದೆಷ್ಟೋ ಬಾರಿ ‘ಇದು ಸಗರನಾಡಿನ ವಜ್ರ’ ಎಂದೆಲ್ಲ ನಬಿಲಾಲ್ ಮಕಾನದಾರ ಸರ್ ಹಾಗೂ ಕನಕಣ್ಣನ ಜೊತೆ ಖುಷಿ ಹಂಚಿಕೊಂಡಿದ್ದೆ. ನಿಮ್ಮ ಮನೆತನಕ ಬಂದ ವ್ಯಕ್ತಿ ಊಟ ಮಾಡದೆ ವಾಪಸ್ ಹೋದ ಉದಾಹರಣೆನೇ ಇಲ್ಲ. ಅಂತಹ ದಾಸೋಹ ಮೂರ್ತಿಗಳು ಲಿಂ.ವೀರಮ್ಮ ಆಯಿ, ಲಿಂ.ಗುರುಬಸವಯ್ಯ ಅಮ್ಮಾಪೂರ ಸರ್ ಅವರು ಆಗಿದ್ದರು. ಅವರ ಹೆಸರಿಲ್ಲದೆ ನಮಗೆ ಉಸಿರಿಲ್ಲ ಎಂಬಂತೆ, ನೀನು ಸಹ ಅವರ ಹೆಸರಿನ ಮೊದಲಕ್ಷರ ಬಳಸಿ ಜಿವ್ಹಿ ಶಿವಕುಮಾರ ಎಂದೇ ಹೆಸರು ಬರಿತಿದದ್ದು ನಾವೆಲ್ಲ ನೋಡಿವಿ.
ಅವರು ಮಾಡಿದ ಪುಣ್ಯ, ದಾಸೋಹ ಕಾರ್ಯ, ಸಾಮಾಜಿಕ ಸೇವೆ ನಿನಗ ಶ್ರೀರಕ್ಷೆಯಾಗಿತ್ತು, ನಿನಗೇನು ಆಯಿತು ಅಂತನೇ ನಮಗ ತಿಳಿದಂಗಾಯ್ತು, ಅಪ್ಪ ಇರುವಾಗಲೆ ಲಿಂಗಸೂಗರಿನ್ಯಾಗ ಮದುವಿ ಮಾಡಿದ್ರು, ನಿನ್ನ ಬಗ್ಗೆ ಅಪ್ಪ ಆಗಾಗ ಅಂತಿದ್ದ ನಮ್ಮ ಕುಮ್ಮಪ್ಪ ಬಾಹಳ ಚೋಲೊ ಅದಾನ, ಆದರ ಯಟ್ಟಿ, ಅಂತ ಅನ್ನೊದು ಕೇಳಿನಿ. ಆದರ ನೀನು ಯಟ್ಟಿ ಅಂತ ನಮಗ ಕಾಣಲಿಲ್ಲ,ಸಂಗದೊಷವೋ, ಸಹವಾಸ ದೋಷವೋ ನೀನು ಕೆಟ್ಟಿ ಅಂತ ಜನ ಮಾತಾಡಿದ್ದು ನನ್ನ ಮನಸಿಗೆ ಖಾಸಾ ತಮ್ಮನೇ ಕೆಟ್ಟಾಗ ಆಗೋ ಮನಸ್ಸಿನ ನೋವು ಆದಂಗ ಆಯ್ತು ನಿನಗೇನು ಕಡಿಮಿ ಇರಲಿಲ್ಲ, ಕೇಂದ್ರಿಯ ವಿವಿ ಕಲಬುರ್ಗಿ ಯಲ್ಲಿ Phd ಮಾಡ್ಹಕ್ಹತ್ತಿದ್ದಿ, ಮನೆಯಾಗ ದೇವರಂತ ಮಡದಿ, ಕಾವ್ಯವಾಗಿಸುವ ನಗುಮೊಗದ ಮಗಳು ಕವನ, ಮಾತಿಗೆ ಹೆಗಲ ಕೊಡುವ ಮೌನಧಾರಿ ಅಣ್ಣ, ನಿನಗೆ ಬೇಕು ಅಂದ್ರೆ ಜೀವನನೇ ಕೊಡುವಂತ
ಅಕ್ಕಂದಿರರು, ಸಹಾಯ ಮಾಡಬಲ್ಲ ಮಾವಂದಿರರು, ನಿನಗೆ ನಿನ್ನ ಆಪ್ತತೆಗೆ ಸಗರನಾಡಿನ ಹಿರಿಕಿರಿ ಸಾಹಿತ್ಯ ವರ್ಗವೆ ನಿಂತರೂ ನೀ ನೋಡದೆ, ನಿಲ್ಲದೆ ಹೋದದ್ದು ನಮಗಷ್ಟೆ ಅಲ್ಲ ಕುಮ್ಮು ‘ಕೃಷ್ಣೆ – ಭೀಮೆಯರ ಪಾಲಿಗೆ ಖೇಡಾದದ್ದು ಸುಳ್ಳಲ್ಲ’ ಸಾಹಿತ್ಯ, ಸಾಂಸ್ಕೃತಿಕ ವಲಯಕ್ಕೆ ಅಮೃತಕೊಡಬಲ್ಲ ಕಾಯಿಯೊಂದು ಹಣ್ಣಾಗದೆ ಕಳಚಿ ಬಿದ್ದು ಮಣ್ಣಾದದ್ದು ಕಂಡು ಬೋನಾಳ ಕೆರೆ ಕಣ್ಣಿರು ಹಾಕುತ್ತಿದೆ ನೋಡಲ್ಲಿ.
ಗದ್ದೆಯಲ್ಲಿ ಬೆಳ್ಳಕ್ಕಿ ಒದುರುವ ಕರ್ಕಶ ಶಬ್ದ, ಬೆನ್ನ ಹಿಂದೆ ಅಚಲವಾಗಿ ನಿಂತ ಕಲ್ಲುಗುಡ್ಡಗಳು, ಮುಖ ಸಪ್ಪೆ ಹಾಕಿಕೊಂಡ ಕಾವಲಿಯ ಕಪ್ಪೆ, ಮಿನು, ಏಡಿಗಳು, ಹಾರಾಡುತ್ತ ಕಣ್ಣಿರ ಹಾಕುವ ಆ ಬಾನಾಡಿಗಳು ನಿನ್ನ ಇರುವಿಕೆ ಇಲ್ಲದಾಯಿತೆಂದು ಸಾರಿ ಹೇಳುತ್ತಿವೆ. ಅಡ್ಡದಾರಿಯ ಹುಣಸೆಯ ಮರ ಬಿಳುಚಿಕೊಂಡಿದೆ. ಪಕ್ಷಿಧಾಮದ ಸುತ್ತಾ ಸಾಂತ್ವನದ ಸಭೆಗಳು, ಅವಕ್ಕೆಲ್ಲ ನಿನ್ನ ಮಾತುಗಳು ಮುಟ್ಟಬೇಕಿತ್ತು ಕುಮ್ಮು…
ಎಲ್ಲರೂ ಹೊಗುವರೆ, ಹಂಗಂತ ನೀನು ಹೋದದ್ದು ಯಾರಿಗೂ ಇಷ್ಟವಿಲ್ಲ…
ಕ್ಷಮಿಸು ಕುಮ್ಮು…
ದುಃಖತಪ್ತ
0 ಪ್ರತಿಕ್ರಿಯೆಗಳು