ಪ್ರೀತಿ
ದಿವ್ಯ ಅಂಜನಪ್ಪ
ಬದುಕಿನ ಅಡುಗೆ ಮನೆಯಲೊಮ್ಮೆ
ಆಕಸ್ಮಿಕವೆಂಬಂತೆ ಒಲವಾಯಿತು
ಬೆಂಕಿಗೂ, ಬೆಣ್ಣೆಗೂ ಹೇಗೋ..
ಉರಿವ ಬೆಂಕಿಗೆ ಬೆಣ್ಣೆಯ ಬಳಿಸಾರುವ ಬಯಕೆ
ಬೆಣ್ಣೆಗೋ ಬೆಂಕಿಯೊಳು ನಲಿದಾಡುವ ತವಕ,
ಇಬ್ಬರಿಗೂ ಅರಿವಿದೆ ಹತ್ತಿರವಾದರದೇ ಅಂತ್ಯ.
ತಮ್ಮನ್ನು ತಾವೇ ಬಹುವಾಗಿ ಬೇಡಿಕೊಂಡು
ವಿರಹದಿ ಬೆಂದ ಭಾವ ಜೀವಿಗಳೆರಡೂ ನಿರ್ಧರಿಸಿಬಿಟ್ಟವು,
ಕಣ್ಣೋಟಗಳೊಂದೇ ಸೇತುವೆ, ಮೌನವೇ ಮಾತು,
ಉರಿವ ಬೆಂಕಿ ಉಳಿದರೂ, ಬಿಸಿ ತಾಗಿ ಬೆಣ್ಣೆಯು
ಇಲ್ಲವಾಗುವುದು; ಆದರೇನಂತೆ?
ನಮ್ಮಿಬ್ಬರ ಮಿಲನದಾಹುತಿ
ಆಗಬಹುದು ದೇವನ ತುಪ್ಪದಾರತಿ.
ಸಾವಿರ ಕಾಲ ಉಳಿದು ಕೊಳೆವುದಕ್ಕಿಂತ
ನಿನ್ನೊಲವೊಳು ಅರೆಕ್ಷಣ ಮುಳುಗಿ ಕರಗಿದರೂ
ನನ್ನ ಬಾಳದು ಲೇಸೆನುತ, ಬೆಣ್ಣೆ ಜಾರಿದಳು ಬೆಂಕಿಗೆ!!!







Well written. Really a good devotional touch.
ಸೊಗಸಾದ ಕವಿತೆ.ಬೆಣ್ಣೆ-ಬೆಂಕಿಯ ಸಮಾಗಮದ ನೋವಿನ ಅಂತ್ಯದಲ್ಲೂ ನವಿರಾಗುವ ಭಾವ.ಅಭಿನಂದನೆಗಳು ದಿವ್ಯ ಅವರಿಗೆ.
nice..
ಧನ್ಯವಾದಗಳು mmshaik ಸರ್, ಡಾ.ಪ್ರಕಾಶ ಗ.ಖಾಡೆ ಸರ್, Prabhakar M. Nimbargi ಸರ್ 🙂