ಆನಂದ್ ಋಗ್ವೇದಿ
‘ನಾನೊಬ್ಬ ಗೃಹಿಣಿ ಮತ್ತು ಕೃಷಿಕ ಮಹಿಳೆ’ ಎಂದೇ ಹೆಮ್ಮೆ ಮತ್ತು ಆತ್ಮವಿಶ್ವಾಸ ದಿಂದ ತಮ್ಮನ್ನು ಪರಿಚಯಿಸಿಕೊಳ್ಳುವ ಕವಯತ್ರಿ ಸ್ಮಿತಾ ಅಮೃತರಾಜ್ ಅವರು ಹೆಣ್ಣುಮಕ್ಕಳ ತುಟಿಯಂಚಿನಲಿ ಉಳಿದ ಮಾತುಗಳನ್ನು ಅದ್ಭುತವಾಗಿ ಕಾವ್ಯವಾಗಿಸಿದಂತೆಯೇ ಸಶಕ್ತ ಪ್ರಬಂಧಕಾರ್ತಿಯೂ ಹೌದು.
‘ಎಂತ ಗೊತ್ತುಂಟ?’ ಎಂಬಂತಹ ಸಹಜ ಆಪ್ತತೆಯ ಮಾತಿನ ಹರಟೆಯಂತೇ ಆರಂಭವಾಗುವ ಅವರ ಪ್ರಬಂಧಗಳಲ್ಲಿ ಬಾಲ್ಯದ ಬೆರಗು, ಕೌಮಾರ್ಯದ ಕನಸು ಮತ್ತು ಬದುಕಿನ ವಾಸ್ತವಗಳನ್ನು ಆಪ್ತವಾಗಿ ಅರುಹಿ, ಹೊರ ಬಂದೂ ದಣಪೆ ದಾಟಲಾಗದ ಹೆಂಗಸರ ಅಂಗಳದಂಚಿಗೇ ಉಳಿದ ಕನವರಿಕೆಗಳನ್ನೂ ಈಗಾಗಲೇ ತಮ್ಮ ಪ್ರಬಂಧಗಳಲ್ಲಿ ಪರಿಚಯಿಸಿದ್ದಾರೆ.
ವಿವಿಧ ನಿಯತಕಾಲಿಕಗಳಲ್ಲಿ ಅಂಕಣ ಬರಹಗಳಾಗಿ ಪ್ರಕಟವಾಗಿ ಇಲ್ಲಿ ಸಂಕಲನಗೊಂಡಿರುವ ಈ ನಲವತ್ತಕ್ಕೂ ಹೆಚ್ಚಿನ ಬರಹಗಳಲ್ಲಿಯೂ ಅದೇ ತುಟಿಯಂಚಿನಲ್ಲಿ ಉಳಿದ ಮಾತುಗಳ ವ್ಯಾಕುಲತೆ, ಅಂಗಳದಂಚಿಗೇ ಉಳಿದ ಕನವರಿಕೆಯ ಕಳವಳಗಳು ಮತ್ತಷ್ಟು ಮಾರ್ದವವಾಗಿ ದಾಖಲಾಗಿವೆ. ಈ ಬರಹಗಳಲ್ಲಿಯೂ ಮಾತಿನ ಆಪ್ತತೆ ಇದೆ, ಹಾಗೇ ವಿಷಯಗಳ ಬಾಹುಳ್ಯವೂ.
ಬಾಲ್ಯದ ಅಡುಗೆಯ ಆಟವನ್ನು ಹೆಣ್ಣುಮಕ್ಕಳ ವರ್ತಮಾನದ ಅಡುಗೆ ಮನೆಯ ಪರದಾಟದೊಂದಿಗೆ, ಉಪ್ಪಿನಕಾಯಿ ಹಾಕುವಾಗಿನ ಶ್ರದ್ಧೆ ಏಕಾಗ್ರತೆಯ ಧ್ಯಾನವನ್ನು ಬರೆಯುವ ಕವಿತೆಗಳೊಂದಿಗೆ ತಾಳೆ ಹಾಕುವ ಈ ಮಾಗಿದ ಮನಸು ಹಿರಿಯ ಮತ್ತು ಕಿರಿಯ ಪೀಳಿಗೆಗಳೆರಡರ ಮಧ್ಯದ ತಂತುವಾಗಿ ಬದುಕನ್ನು ಗ್ರಹಿಸಿದ ಪರಿ ಇಲ್ಲಿ ಸಾವಯವಗೊಂಡಿದೆ.
ಇರುವುದನ್ನು ಒಪ್ಪುವ, ಬಂದಿದ್ದನ್ನು ಸ್ವೀಕರಿಸುವ ಈ ಆರ್ದ್ರ ಮನಸ್ಸು ಪ್ರವಾಹಕ್ಕೆ ಬಲಿಯಾದ ಬದುಕುಗಳ ಬಗ್ಗೆ ಕಳವಳಿಸಿ, ಈ ಪ್ರಾಕೃತಿಕ ಅವಘಡಕ್ಕೆ ಕಾರಣಗಳನ್ನೂ ಚಿಂತಿಸುತ್ತದೆ. ಬರೆಯುವ ಧ್ಯಾನ ಮತ್ತು ಸುಖದ ಬಗ್ಗೆ ಹೇಳುತ್ತಲೇ ಬರಹಗಳಿಂದಲೇ ಬರುವ ಬಹಿರ್ಮುಖತೆಯನ್ನು ಅದರ ಮುಜುಗರವನ್ನೂ ವಿವರಿಸಿ ಅಗತ್ಯವಾದ ಅಂತರ್ಮುಖತೆಯ ಬಗ್ಗೆ ಬೆರಳು ತೋರುತ್ತದೆ.
ಕೌಟುಂಬಿಕತೆಯ ರೂಪವೇ ಆದ ಆದರಾತಿಥ್ಯ ಮತ್ತು ಕಾಲಿಕ ಪಲ್ಲಟಗಳ ನಡುವೆಯೂ ನಿಜ ‘ಗೃಹ’ದ ಗೃಹೀತವನ್ನು ಮನಗಾಣಿಸುವ ಇಂತಹ ಬರಹಗಳಲ್ಲೇ ಇರುವ ನಿಜವಾದ ಸ್ತ್ರೀ ಮತ್ತು ಅವಳ ವೈಚಾರಿಕತೆ ವರ್ತಮಾನಕ್ಕೆ ಅತ್ಯಗತ್ಯ.
ಅಭಿನಂದನೆಗಳು ಸ್ಮಿತಾ. ನೆಲದಾಯಿಗೆ ಎಲ್ಲ ಯಶಸ್ಸು ಸಿಗಲಿ.