ಆರ್ ಎಚ್ ನಟರಾಜ್
ಕಂಡದ್ದನ್ನು ಕಂಡಹಾಗೆ ಹೇಳು, ಅನುಭವಿಸಿದ್ದನ್ನು ವ್ಯಕ್ತ ಪಡಿಸು.. ಪುರಾಣ, ಇತಿಹಾಸ, ಜಾನಪದಗಳ ಐತಿಹ್ಯಗಳನ್ನು ಉಪಮೆಗಳಾಗಿ ಬಳಸಿಕೊಂಡು ಮತ್ತೆ ಮತ್ತೆ ಹೇಳುವ ಬದಲಿಗೆ ವಾಸ್ತವ ಜಗತ್ತಿನ ಬಗ್ಗೆ ಅನ್ನಿಸಿದ್ದು, ಅನುಭವಿಸಿದ್ದನ್ನು ಬರಹಗಾರ ಬರೆಯಬೇಕು…ಅನ್ನುವ ಈ ಮಾತನ್ನು ಗೆಳೆಯ ದಿಲಾವರ್ ತೀಕ್ಷ್ಣವಾಗಿ ತಮ್ಮ ಮುಂದಿದ್ದ ಬರಹಗಾರರು ನಾಟಕಕಾರರಿಗೆ ತಿಳಿ ಹೇಳಿದರೆ, ನಾಟಕ ಅನ್ನುವುದು ವಾಸ್ತವವನ್ನು ಹೇಳಬೇಕು ಆ ಮೂಲಕ ನಾಟಕಕಾರ ವಾಸ್ತವ ಮುಖಿಯಾಗಬೇಕು ಎಂಬ ಕಳಕಳಿ ವ್ಯಕ್ತ ಪಡಿಸಿದವರು ಖ್ಯಾತ ಲೇಖಕ ಬಹುಮುಖ ಪ್ರತಿಭೆಯ ಡಿ.ಎಸ್. ಚೌಗಲೆ..
ಈ ಮಾತುಗಳಿಗೆ ವೇದಿಕೆ ಒದಗಿಸಿದ್ದು ‘ಬೀ ಕಲ್ಚರ್’ ನ ನಾಟಕಕಾರ ಬೇಲೂರು ರಘುನಂದನ್ ಅವರ ‘ರೂಬಿಕ್ಸ್ ಕ್ಯೂಬ್’ ಮತ್ತಿತರ ನಾಟಕಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ನಾನು ಸಾಕ್ಷಿಯಾದ ಅಪರೂಪದ ಕಾರ್ಯಕ್ರಮ ಇದಾಗಿತ್ತು. ಇಲ್ಲಿ ವೇದಿಕೆಯಿತ್ತು, ಅತಿಥಿಗಳಿದ್ದರು, ಆಹ್ವಾನಿತರಿದ್ದರು, ಗಣ್ಯರೂ ಇದ್ದರು ಇಲ್ಲದೇ ಇದ್ದುದು ಸಾಂಪ್ರದಾಯಿಕ ಸ್ವಾಗತ, ಪ್ರಾರ್ಥನೆ ಪಾರಂಪರಿಕವಾದ ಪುಸ್ತಕ ಬಿಡುಗಡೆ.
ಆದ್ರೂ ಪುಸ್ತಕ ಬಿಡುಗಡೆಯಾಯಿತು ಹೇಗಂತಿರಾ ಗೊತ್ತಾ ಹೂವು ಮಾರುವ ಮಹಿಳೆ ಹೂವಿನೊಂದಿಗೆ ಪುಸ್ತಕವನ್ನು ಬುಟ್ಟಿಯಲ್ಲಿ ಹೊತ್ತು ತಂದರೆ, ವೇದಿಕೆಯಲ್ಲಿರುವರು ಅದನ್ನು ಪಡೆದು ಅದೇ ಬೀದಿಯಲ್ಲಿ ಸ್ವಚ್ಚತಾ ಕೆಲಸ ಮಾಡುವ ಸಾಮಾನ್ಯನಿಗೆ ನೀಡುವ ಮೂಲಕ.. ಆನಂತರ ಗಣ್ಯರ ಒಂದಷ್ಟು ಭಾಷಣ..ಇದೂ ಕೂಡಾ ಎಲ್ಲಾ ಭಾಷಣಗಳಂತೆ ಅಲ್ಲಾ ಒಂದು ರೀತಿಯಲ್ಲಿ ಎಲ್ಲರೊಂದಿಗೆ ಸಂವಾದದಂತೆ..
ಈ ವೇಳೆ ಕೇಳಿ ಬಂದದ್ದು ಜಗತ್ತಿನ ದೊಡ್ಡ ಆರ್ಟ್ ಗ್ಯಾಲರಿಗಳ ವಿಷಯ, ಜಾಗತಿಕ ರಂಗಭೂಮಿಯ ಸಾಧ್ಯಸಾಧ್ಯತೆಗಳು, ಕನ್ನಡ, ಮರಾಠಿ ರಂಗ ಚಟುವಟಿಕೆಗಳು, ಲಂಕೇಶ್, ಕಾರ್ನಾಡ್, ಜಿ.ಬಿ.ಜೋಷಿ, ಕಂಬಾರ ಇತ್ಯಾದಿಗಳ ನಡುವೆ ಡೊನಾಲ್ಡ್ ಟ್ರಂಪ್ ಮೋದಿ ಎಂದಿನಂತೆ ಹಿಜಾಬ್..ಅದ್ರೆ ಹರಿದಿದ್ದು ಪ್ರೀತಿಯ ಹೊಳೆ ಬಿತ್ತಿದ್ದು ಹೊಸತನದ ಬೀಜ…ಇದು ಮೊಳೆತು ಗಿಡವಾಗಿ, ಮರವಾಗಿ ಹೆಮ್ಮರವಾಗಿ ಬೆಳೆಯಲಿ ಎಂಬ ಸಣ್ಣ ಆಸೆ ನನ್ನದು..
ಯಾಕೆಂದ್ರೆ ಬೀ ಕಲ್ಚರ್ ಅದೇ ಜೇನಿನ ಸಂಸ್ಕ್ರತಿ…ಜೇನು ಅಂದರೆ ಜೀವನ..ಬದುಕು ಎನೆಲ್ಲಾ ಹೇಳಿ ಎಲ್ಲವೂ ಜೇನಿನಿಂದಲೇ..ಈ ಜಗತ್ತಿನಲ್ಲಿ ಜೇನು ಇರಲಿಲ್ಲ ಅಂದ್ರೆ ನಾವು ನೀವ್ಯಾರೂ ಇರುತ್ತಲೇ ಇರಲಿಲ್ಲ. ಈ ಜೇನು ಮಧುವಿಗಾಗಿ ಹೂವಿನಿಂದ ಹೂವಿಗೆ ಹಾರುತ್ತಾ ತನಗರಿವಿಲ್ಲದಂತೆ ಪರಾಗ ಸ್ಪರ್ಷ ಕ್ರಿಯೆಯಲ್ಲಿ ತೊಡಗಿ ಫಲ ಕೊಡುವಂತೆ ಮಾಡುತ್ತದೆ.. ಈ ಜೇನೆ ಇಲ್ಲವಾದರೆ ಬೆಳೆ ಎಲ್ಲಿ ಬದುಕೆಲ್ಲಿ…?
ಇತ್ತೀಚೆಗೆ ಕಾಡು ನಶಿಸಿ ಕಾಂಕ್ರೀಟ್ ಕಾಡಾದರೂ ಈ ಜೇನು ಮಧುವಿಗಾಗಿ ಹೂವನ್ನರಸುವ ಕೆಲಸ ನಿಲ್ಲಿಸಿಲ್ಲ ಹೀಗೆ ಸಂಗ್ರಹಿಸಿದ ಮಧುವನ್ನು ಕಾಂಕ್ರಿಟ್ ಕಾಡಿನ ಗೋಡೆಗಳ ಮೇಲೆ ಹುಟ್ಟು ಕಟ್ಟಿ ಜೋಪಾನ ಮಾಡುತ್ತಿದೆ.. ಇತ್ತೀಚಿಗೆ ಇಂತಹ ಹುಟ್ಟು ಹಾಗೂ ಜೇನನ್ನು ರಾಸಾಯನಿಕ ಮಿಶ್ರಿತ ಬೆಂಕಿಯಿಟ್ಟು ಸುಡಲಾಗುತ್ತಿದೆ.. ಇದರಿಂದಾಗುವ ಭವಿಷ್ಯದ ಅಪಾಯ ಅದನ್ನು ಮಾಡುವವರಿಗೆ ಗೊತ್ತಿಲ್ಲ.. ಇದು ಕೂಡಾ ನಮ್ಮ ಸುತ್ತ ಮುತ್ತ ಈಗ ನಡೆಯುತ್ತಿರುವ ಕೆಲವು ವಿದ್ಯಮಾನಗಳಂತೆ…
ಹೀಗಾಗಿ ಗೆಳೆಯ ದಿಲಾವರ್ ಮತ್ತು ವಿಷ್ಣು ನಮ್ಮ ಮುಂದಿರುವ ಅಪಾಯಗಳ ಬಗ್ಗೆ ಎಚ್ಚರಿಸುತ್ತಲೇ ಜೇನು ಸಂಸ್ಕ್ರತಿಯನ್ನು ಪಸರಿಸುವ ಮಹದುದ್ದೇಶದೊಂದಿಗೆ ಮುನ್ನಡೆಯುತ್ತಿದ್ದಾರೆ ಅವರ ‘ಬೀ ಕಲ್ಚರ್’ ಗೆ ಸಿಗಲಿ ಯಶಸ್ಸು..ಬೆಳೆದು ಹೆಮ್ಮರವಾಗಲಿ ಬದುಕುವ ಸಂಸ್ಕ್ರತಿ….
0 ಪ್ರತಿಕ್ರಿಯೆಗಳು