ಬಿ ಶ್ರೀನಿವಾಸ ಬರೆದ ನೆನಪುಗಳು..

ಬಿ ಶ್ರೀನಿವಾಸ

1

ಪಾಂಡ್ಸ್ ಪೌಡರಿನ ಪರಿಮಳದ ಆ ಸಂಜೆಗಳ ನೆನಪು

ಏಳನೆಯ ಕ್ಲಾಸಿಗೆ ಬರುವಷ್ಟೊತ್ತಿಗೆ ನಾವು ಓದುತ್ತಿದ್ದ ಶಾಲೆಯ ಋಣ ತೀರಿತ್ತೆಂದು ಕಾಣುತ್ತೆ, ಆ ಶಾಲೆಯನ್ನು ಬಿಟ್ಟು ಹೋಗಲೇಬೇಕಾದ ಪರಿಸ್ಥಿತಿ ಒದಗಿಬಂದಿತು. ನಾನು‌ ಮತ್ತು ನನ್ನಂತಹ ಅನೇಕ ಗೆಳೆಯರಿಗೂ ಸಂತೆ ಮಾರ್ಕೆಟ್ಟಿನ ಆ ಶಾಲೆಯನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆ ಸಂತೆ ಬಯಲಿನಲ್ಲಿ ಆಟವಾಡಲು ಸಾಕಷ್ಟು ಅವಕಾಶವಿತ್ತು. ಕೂಡ್ಲಿಗಿ – ಕೊಟ್ಟೂರು ರಸ್ತೆಯಲ್ಲಿ ಓಡಾಡುವ ಬಸ್ಸುಗಳಿಗೆ ಉಚ್ಚಿಬೆಲ್ಲಿನ ಸಮಯದಲ್ಲಿ ಟಾಟಾ ಹೇಳಬಹುದಿತ್ತು, ಪ್ರತಿಯಾಗಿ ಬಸ್ಸಿನಲ್ಲಿದ್ದವರೂ ಟಾಟಾ ಹೇಳಿದರಂತೂ ಖುಷಿಯಾಗುತ್ತಿತ್ತು. ಇಂತಹ ಸಂಭ್ರಮಗಳಲ್ಲಿ ಕಾಲ ಸರಿದಿದ್ದೇ ಗೊತ್ತಾಗುತ್ತಿರಲಿಲ್ಲ.

ಮೊದಲಿಗೆ ಅಲ್ಲಿ ಶಾಲೆಯಂತೇನೂ ಇರಲಿಲ್ಲ. ಸೊಲ್ಲಮ್ಮ ದೇವಿಯ ಗುಡಿಯಲ್ಲಿ ನಡೆಯುತ್ತಿದ್ದ ಕಾರಣಕ್ಕೋ ಏನೋ ಶಾಲೆಯ ಸ್ವಂತ ಕಟ್ಟಡ  ಗುಡಿಯಿಂದ ಸ್ವಲ್ಪ ದೂರದಲ್ಲಿ ನಿರ್ಮಾಣವಾದರೂ ಸೊಲ್ಲಮ್ಮದೇವಿಯ ಹೆಸರು ಶಾಲೆಯ ಜೊತೆಗೆ ಅಂಟಿಕೊಂಡೇ ಇತ್ತು. ಹೀಗಿರುವಾಗ ಐದನೆಯ ಕ್ಲಾಸಿಂದ ಆರನೆಯ ಕ್ಲಾಸೂ ಮುಗಿದು ಇದೀಗ ಏಳನೆಯ ಕ್ಲಾಸು ಪಬ್ಲಿಕ್ಕೂ… ‌ಎಂದೆಲ್ಲ ಮೇಷ್ಟ್ರುಗಳು ಓಡಾಡಿದರೂ ಏಳನೆ ಕ್ಲಾಸು ಶಾಲೆಗೆ ಮಂಜೂರಾಗಲಿಲ್ಲ. ಸಂತೆ ಮಾರ್ಕೆಟ್ಟಿನ ಹುಂಚಿಮರದ ಕೆಳಗೆ ಕುಂತು ವಿದ್ಯಾರ್ಥಿಗಳೊಂದಿಗೆ ಮಾತಾಡುತ್ತಲೇ ಅತ್ತುಬಿಟ್ಟ ಮೇಷ್ಟ್ರ ಮುಖದ ನೋವಿನ ನೆನಪು ಇನ್ನೂಅಚ್ಚಳಿಯದೆ ಹಾಗೆ ಉಳಿದುಬಿಟ್ಟಿದೆ. ಅವತ್ತು ಚೆನ್ನಪ್ಪ ಮೇಷ್ಟ್ರು ಮುಖವನ್ನು ನೋಡಾಕೂ ಆಗ್ತಿರಲಿಲ್ಲ. ಸಂತೆ ಬಝಾರಿನ ಆ ಗದ್ದಲದಲ್ಲಿಯೂ ಗಾಢಮೌನ ಆವರಿಸಿದಂತಿತ್ತು. ಕೇವಲ ಆರನೆಯ ಕ್ಲಾಸಿನವರೆಗೂ ನಡೆಸಿಕೊಂಡು ಬಂದಿದ್ದ ಸೊಲ್ಲಮ್ಮನ ಗುಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಮ್ಮ ಋಣ ತೀರಿತ್ತು.

ಶಾಲೆಯ ಮುಂದಿನ ರಸ್ತೆ ಬದಿಯಲ್ಲಿ ಕಟುಕರ ಅಂಗಡಿಗಳಲ್ಲಿ ಕುರಿ ಕಡಿದು ಮಾರುವ ಮಾಂಸದಂಗಡಿಗಳಿದ್ದವು. ಮುದುಕಿಯರು ಬಂದು ಕಟುಕರ ಕೃಷ್ಣಪ್ಪನ ಹತ್ತಿರ ಕಾಡಿ ಬೇಡಿ ಮಾಂಸವನ್ನು ಸಿಲವಾರದ ಕೇಟ್ಲಿಯಲ್ಲಿ ಹಾಕಿಕೊಂಡು ಹೋಗುವುದನ್ನು ನೋಡುವುದು ನಿತ್ಯದ ಕಾಯಕವಾಗಿತ್ತು.

ಶುಕ್ರವಾರ ಸಂತೆಯ ದಿನದಂದು ಶಾಲೆಯ ಮುಂದೆ ಅದೆಷ್ಟು ಸಂಭ್ರಮವಿತ್ತೂ ಅಂತೀರಿ… ಬಗೆ ಬಗೆಯ ತರಕಾರಿಗಳು ಹರಡಿ ಕುಂತ ವ್ಯಾಪಾರಿಗಳು, ಗಡಿಗೆ, ಮಡಕೆಗಳು, ರೊಕ್ಕ ಸಂಗ್ರಹಿಸುವ ಕುಡಿಕೆಗಳು ಮನ ಸೆಳೆಯುತ್ತಿದ್ದವು. ಕುಡಿಕೆಗಳೆಂದರೆ ಚಿಲ್ಲರೆ ಕಾಸು ಸಂಗ್ರಹಿಸಿ ಒಮ್ಮೊಮ್ಮೆ ದೂರದ ಹಂಪಿ, ಹೊಸಪೇಟೆಯ ಟೀಬಿ ಡ್ಯಾಮು, ಸೊಂಡೂರಿನ ರಮ್ಯತಾಣಗಳನ್ನು ತೋರಿಸುವ ಮಾಂತ್ರಿಕರಂತೆ ಕಾಣಿಸುತ್ತಿದ್ದವು. ಒಡಲಲ್ಲಿ ಅದು ಹೇಗೆ ಇಷ್ಟೆಲ್ಲ ಬಚ್ಚಿಟ್ಟುಕೊಳ್ಳುತ್ತಿದ್ದವೋ ಏನೋ… ಅವುಗಳನ್ನು ನೋಡುತ್ತಾ ನಿಲ್ಲುತ್ತಿದ್ದ ನಮಗೆ ಹೊಸ ಲೋಕವೊಂದು ಕಾಣಿಸುತ್ತಿತ್ತು. ಅಷ್ಟು ಕಷ್ಟಪಟ್ಟು ಮಣ್ಣು ಹೊತ್ತು, ಮಣ್ಣ ಕಣ್ಣಿಗೊತ್ತಿ  ಕೈ ಮುಗಿದು ಹದ ಮಾಡಿದ ಗಡಿಗೆಗಳು, ಮಡಿಕೆಗಳು, ತರಹೇವಾರಿ ಕನಸಿನ ಕುಡಿಕೆಗಳ ಕೇಳಿ ಸಂತೆಗೆ ಬರುವ ಜನರು  ಸಾಕಷ್ಟಿರುತ್ತಿದ್ದರು. ಆ ದಿನ ನಮ್ಮ ಕ್ಲಾಸ್ಮೇಟ್ ಕೆ. ವೀರಪ್ಪ ಅಲಿಯಾಸ್ ಕುಂಬಾರ ವೀರಪ್ಪನದು ಅಧಿಕೃತ ರಜಾದಿನವಾಗುತ್ತಿತ್ತು. ಸಣ್ಣವಯಸ್ಸಿಗೆ ವ್ಯಾಪಾರ ಶುರು ಹಚ್ಚಿಕೊಂಡ ವೀರಪ್ಪ ನಮ್ಮ ಬಳಗದಲ್ಲಿಯೇ ಪ್ರಬುದ್ಧತೆ ಹೊಂದಿದ್ದ. ಯಾರಾದರೂ ನೆಲದ ಮೇಲೆ ಸಾಲಾಗಿ ಪೇರಿಸಿಟ್ಟ ಮಡಕೆ, ಗಡಿಗೆಗಳನ್ನು ʻಎಷ್ಟಪೋ ಇದು?ʼ ಎಂದು ಕಾಲಿನಲ್ಲಿ ತೋರಿಸಿದರೆ, ಅಷ್ಟೇ ವೇಗವಾಗಿ ʻಕೈಲಿ ಹಿಡಕಂಡು ಕೇಳಪೋʼ ಎಂದು ಮುಲಾಜಿಲ್ಲದೇ ಹೇಳುತ್ತಿದ್ದ.

ಶಾಲೆಯಲಿ ಪಾಠ ನಡೀತಿರಬೇಕಾದರೆ, ಬೇಡುವ ಹುಡುಗರ ದೈನೇಸಿ ಮುಖಗಳು, ಡಾಣಿ ಮಂಡಕ್ಕಿ ಕೊಡಿಸೆಂದು ಪೀಡಿಸುವ ಮಕ್ಕಳು, ಬೇಲ್ದಾರ ಕೆಲಸದಿಂದ ಬಂದ ಕೂಲಿಯಲ್ಲಿ ಸಂತಿ ಮಾಡುವ ಚಿಂತಿಯಲ್ಲಿ ಕುಳಿತವರು, ಇವೆಲ್ಲವನ್ನು ಮರೆಸಲೆಂಬಂತೆ ಘಮ್ಮೆನ್ನುವ ಒಣಮೀನಿನ ವಾಸನೆ ಸೇರಿ ವಿಚಿತ್ರವಾದ ಲೋಕವೊಂದನ್ನು ಸೃಷ್ಟಿಸಿತ್ತು. ಸಂತಿಯಿಲ್ಲದ ದಿನಗಳಲ್ಲಿ ಸಹಪಾಠಿ ಕಮ್ಮಾರ ಹನುಮಂತನನ್ನು ಅವರಪ್ಪ ದೂರದಿಂದಲೇ ಕೂಗುತ್ತಿದ್ದ. ಬೀಜಗಣಿತದ ಕಬ್ಬಿಣಕ್ಕಿಂತ ಕುಲುಮೆಯಲಿ ಕಾದ ಕೆಂಪು ಕೆಂಡಗಣ್ಣಿನ ಕುರ್ಸಿಗಿ, ಕುಡುಗೋಲು, ಕೊಡ್ಲಿಗಳಿಗೆ ಸುತ್ತಿಗೆ ಏಟು ಹಾಕುವುದು ಎಷ್ಟೋ ಮೇಲು ಎಂದುಕೊಂಡ ಕಾರಣ ಅದನ್ನೇ ಕಾಯುತ್ತಿರುವವವನಂತೆ ಕರೆ ಬಂದ ಕ್ಷಣವೇ ಓಡುತ್ತಿದ್ದ. ಇದಕ್ಕೆಲ್ಲ ಪರ್ಮಿಷನ್ ಗಿರ್ಮಿಸನ್ನುಗಳ ಅಗತ್ಯವೇ ಅವನಿಗಿರಲಿಲ್ಲ.

ಇಂತಹದ್ದೊಂದು ಸುಂದರ ಬದುಕಿನ ಆವರಣವನ್ನು ಬಿಟ್ಟು ಏಳನೆಯ ಕ್ಲಾಸಿಗೆ ಪ್ಯಾಟಿ ಬಸಣ್ಣನ ಗುಡಿ ಶಾಲೆಗೆ ಹೋಗುವುದೆಂದರೆ ಬಹಳ ದುಃಖವಾಗುತ್ತಿತ್ತು. ಅಲ್ಲಿದ್ದ ಐದು, ಆರನೇ ಕ್ಲಾಸಿನ ಹುಡುಗರ ಕಣ್ಣಲ್ಲಿ ನಾವು ಉನ್ನತ ವ್ಯಾಸಂಗಕ್ಕೆ ಹೊರಟು ನಿಂತಿರುವ ಮಹಾನ್ ಮೇಧಾವಿಗಳೆಂಬಂತೆ ಕಾಣುತ್ತಿದ್ದೆವು. ನಮ್ಮೆಲ್ಲರ ಟೀಸಿಗಳನ್ನು ಕೊಡುವಾಗ ʻಶಾಲೆಗೇನಾದರೂ ನೆನಪಿಗೆ ಕೊಡ್ರಪಾʼ ಎಂದು ಹೆಡ್ಮಾಸ್ತರು  ಕೇಳಿದಾಗ, ಕುಂಬಾರ ವೀರೇಶ ದೊಡ್ಡದೊಂದು ಮಡಕೆ ಹೊತ್ತು ತಂದು ʻಬ್ಯಾಸಿಗ್ಯಾಗ ತಣಾಗಿರ್ತಾವ ಸರ್ ಇದ್ರಾಗ ಕುಡಿಯಾ ನೀರುʼ ಎಂದಿದ್ದ.

ಹೀಗೆ ಶಾಲೆ ಬಿಟ್ಟುಬಂದ ನಮಗೆ ಪ್ಯಾಟಿ ಬಸಣ್ಣನ ಗುಡಿಯ ಮುಂದಿನ ಶಾಲೆಗೆ ಏಳನೆಯ ಕ್ಲಾಸಿಗೆ ಪ್ರವೇಶವಾಯ್ತು. ನಮ್ಮ ಮನಿಯಿಂದ ಶಾಲೆಗೆ ಹೋಗುವಾಗ ಕಡಿದಾದ ಓಣಿಯ ದಾರಿ ಬದಿಯ ಮನೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಮುದುಕಿಯರು ಮಾತ್ರ ತಲೆಯ ಹೇನು ಹೆಕ್ಕುತ್ತಲೋ, ಜ್ವಾಳ ಹಸನು ಮಾಡುತ್ತಲೊ ಇರುವ ದೃಶ್ಯ ಸಾಮಾನ್ಯವಾದುದಾಗಿತ್ತು. ಹರೆಯದ ಹುಡುಗರು ಬೆಳಗಿನ ಮ್ಯಾಟಿನಿ ಷೋಗೆ ಹೋಗುವ ತಯಾರಿಯಲ್ಲಿರುತ್ತಿದ್ದರು. ಈ ಓಣಿಯ ಮುಂದೆಯೆ ಮಸಣಕ್ಕೂ ಹೋಗುವ ದಾರಿಯಿದ್ದ ಕಾರಣ ಸತ್ತವರ ಹಿಂದೆ ಅಳುತ್ತಾ ಸಾಗುವ ಜನಗಳ ನೋಡಿದಾಗಲೆಲ್ಲ ಸಂಕಟವಾಗುತ್ತಿತ್ತು. ಆಗ ಒಂದು ಸ್ವಲ್ಪಹೊತ್ತು ಪಾಠ ಮಾಡುತ್ತಿದ್ದ ರಾಮದಾಸ್ ನಾಯ್ಕ್ ಮೇಷ್ಟ್ರು, ಮರಬದ ಈರಣ್ಣ ಹೆಡ್ಮೇಷ್ಟ್ರು, ವೆಂಕಮ್ಮ ಟೀಚರ್ರೂ… ಹೊರಗೆ ಬಂದು ನಿಂತು ʻಮೊನ್ನಿನ್ನ ಮಾತಾಡಿಸಿ ಹೋಗ್ಯನ… ನೋಡ್ರಿ ಸರ್ ಇವತ್ತಾಗಲೇ ಇಲ್ಲʼ ಸಂಭಾಷಣೆಗಳು ತೀರಾ ಕಾಮನ್ ಎನ್ನುವಂತೆ ಆಗಿಬಿಟ್ಟಿದ್ದವು. ಸೊಲ್ಲಮ್ಮನ ಗುಡಿ ಶಾಲೆಯ ಬಣ್ಣದ ಚಿತ್ರಗಳನ್ನು ಇಲ್ಲಿ ಕಾಣುವುದು ಕಷ್ಟವಾಗಿತ್ತು. 

ಕುಲುಮೆಯ ಕೆಂಡ, ಎತ್ತುಗಳ ಮಲಗಿಸಿ ಲಾಳ ಹಾಕುವ ಲಾಲ್ಸಾಬು, ಕಟುಕರ ಕೃಷ್ಣಪ್ಪನ ತಾಯಿ ಹೃದಯದ ಮಾತುಗಳು, ಕುಂಬಾರನ ಆ ನೋಟ, ಡಾಣಿ ಮಂಡಕ್ಕಿ ಮಾರುವವನ ಸಂಕಟ, ಮನೆ ಕಟ್ಟುವ ಬೇಲ್ದಾರನ ನಿಟ್ಟುಸಿರು… ಇವುಗಳಾವುವೂ ಇಲ್ಲದ ಹೊಸದೊಂದು ಲೋಕಕ್ಕೆ ಕಾಲಿರಿಸಿದಂತಾಗಿತ್ತು. ಎಲ್ಲಿ ನೋಡಿದರೂ ಹಣೆಗೆ ಇಬತ್ತಿ ಕಟ್ಟು ಬಡಕೊಂಡು ಕುಂತ ಹುಡುಗರೆ ತುಂಬಿದ ಶಾಲೆಗೆ ನಾವು ಅಪರಿಚಿತರಾಗಿ ಹೋಗಿದ್ದೆವು. ನಾವು ಶಾಲೆಯಿಂದ ಮನೆಗೆ ಸಾಗುತ್ತಿದ್ದ ದಾರಿಯಿತ್ತಲ್ಲ, ಮುಂಜಾನೆ ಶಾಲೆಗೆ ಹೋಗುವಾಗ ಹೊದ್ದು ಮಲಗಿರುತ್ತಿತ್ತಲ್ಲ ಅದೇ ಓಣಿ, ನಾವು ಶಾಲೆ ಮುಗಿಸಿಕೊಂಡು ಮನೆಗೆ ವಾಪಸಾಗುವಾಗ ಚಟುವಟಿಕೆಯಿಂದ ಕೂಡಿರುತ್ತಿತ್ತು. ಅದುವರೆಗೂ ಅದೆಲ್ಲಿ ಅಡಗಿರುತ್ತಿದ್ದರೋ ಏನೋ ಸಂಜೆ ರಂಗೇರುತ್ತಿದ್ದಂತೆ ಓಣಿಯೂ ರಂಗೇರುತ್ತಿತ್ತು. ಅಂಥಾ ಸುಂದರ ನಗುವಿನ ಅಲೆಗಳ ಜೊತೆಗೆ ಸ್ಪರ್ಧೆಗೆ ಬಿದ್ದಂತೆ ಪಾಂಡ್ಸ್ ಪೌಡರಿನ ಪರಿಮಳ ಬೇರೆಯದೇ ಲೋಕವೊಂದನ್ನು ಸೃಷ್ಟಿಸುತ್ತಿತ್ತು. ಹಗಲೆಲ್ಲಾ ಪವರ್ಕಟ್‌ ಆಗಿ ನಿಂತ ಕಾರ್ಖಾನೆಗಳಂತೆ ತೋರುತ್ತಿದ್ದ ಓಣಿ ಒಮ್ಮೆಲೇ ಕರೆಂಟು ಬಂತೆಂದು ಚಾಲೂಗೊಂಡ ಕಾರ್ಖಾನೆಗಳಂತೆ ಕಾಣುತ್ತಿದ್ದವು.

ಆ ವಿಕ್ಷಿಪ್ತತೆಯ ಗರ್ಭಧರಿಸಿದ ಓಣಿಗೆ ನಾನಾತರಹದ ಹೆಸರುಗಳು ಇದ್ದವು. ಬುಡಬುಡಿಕೀ ಕಾಲುವಿ ಎಂದೂ ಕರೆಯಲಾಗುತ್ತಿತ್ತು. ಅಲ್ಲಿದ್ದ ಸಂಜೆಯ ಹೆಂಗಸರ ಆ ನಗು ಮತ್ತು ಕೆಂಪು ಕವಳದ ಪ್ರಭಾವದಿಂದಲೋ ಇಡೀ ಸಂಜೆ ಕೆಂಪು ಬಣ್ಣಕೆ ತಿರುಗಿದಂತೆ ಕಾಣುತ್ತಿತ್ತು.

ಇದಾಗಿ ಎಷ್ಟೋ ವರುಷಗಳ ನಂತರ ಸಂಬಂಧಿಕರೊಬ್ಬರು ನಿಧನರಾಗಿದ್ದ ಕಾರಣ ಆ ಕಿರಿದಾದ ದಾರಿಯಲ್ಲಿ ಸಾಗಿಬಂದೆ. ʻದಾರಿ ಎಷ್ಟೊಂದು ಕಿರಿದಾಗಿದೆಯಲ್ಲ?ʼ ಗೆಳೆಯನನ್ನು ಕೇಳಿದೆ. ಮಸಣ ಕೂಡ ಊರಿಗೆ ಬಂದಿರುವ ಹಾಗೆ ಕಂಡಿತು. ಇಲ್ಲ ಇಲ್ಲ ಊರೇ ಮಸಣದ ಕಡೆಗೆ ನಡೆದಿರುವಂತೆ ತೋರಿತು. ಆ ಕೇರಿಯ ಹಿಂದಿನ ಲವಲವಿಕೆಯ ಜಾಗದಲ್ಲೀಗ ಮಸಣದ ಹಾದಿಯಲ್ಲಿ ಕಾಯುತ್ತ ನಿಂತವರಂತೆ ಮುದುಕ ಮುದುಕಿಯರಿದ್ದರು. ಮೈತುಂಬಾ ಚರ್ಮರೋಗ ಹಚ್ಚಿಕೊಂಡ ಒಂದು ಕಾಲದ ಚೆಲುವೆಯರು ನರಳುತ್ತಿದ್ದರು.

ಮತ್ತದೇ ಬಾಲ್ಯದ ಧ್ಯಾನ!

ದಾರಿಯುದ್ದಕೂ ಬಿದ್ದ ಮಂಡಕ್ಕಿ, ವೀಳ್ಯದೆಲೆಗಳನ್ನು ಆರಿಸುತಿರುವ ಹುಡುಗರು ಕಣ್ಣಿಗೆ ಬಿದ್ದರು, ಕೆಟ್ಟೆನಿಸಿತು.
ಒಂದರೆಕ್ಷಣ ಹೊತ್ತು ಬಾಲ್ಯಕೆ ಹೊರಟುಹೋದೆ.

ಪಾಂಡ್ಸ್ ಪೌಡರಿನ ಪರಿಮಳ ಸುತ್ತಲೂ ಪಸರಿಸಿತು.

ಸಂಜೆಗಳು ರಂಗೇರಿದವು ಅವಳ

ಕವಳ ಕೆಂಪಿನ ತುಟಿಗಳ ಹಾಗೆ.

2

ಒಂದ್ರುಪಾಯಿ ರೊಟ್ಟಿ ಹೋಟೆಲ್ಲೂ… ಹೂವಿನ ಹಡಗಲಿಯೆಂಬ ಪರಿಮಳದ ಊರೂ…

ಅದೇನೋ ಏನೋ. ತೊಂಭತ್ತರ ದಶಕವೆಂದರೆ ಅದೆಂಥದೋ ಸ್ಪೀಡು. ಒಂದ್ಕಡೆ ಮಂಡಲ್ ವರದಿ ಜಾರಿಗಾಗಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದ್ಕಡೀಗೆ ಕಮಂಡಲ ಹಿಡಿದು ಹೊರಟ ರಥಯಾತ್ರೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಅಂಬೆಗಾಲು ಪ್ರವೇಶವು ಹುಟ್ಟುಹಾಕುತ್ತಿದ್ದ ಚರ್ಚೆಗಳು ಹೂವಿನಹಡಗಲಿಯೆಂಬ ಮಲ್ಲಿಗೆಯ ಪರಿಮಳದಷ್ಟೇ ಬೇಗ ಪಸರಿಸಿಬಿಟ್ಟಿತು.

ಬಿ.ಎಸ್ಸಿ. ಓದುತ್ತಿದ್ದ ನನಗೆ, ʻಪ್ರಿಯ ಸ್ನೇಹಿತರೆ…ʼ ಎಂದು ವಿದ್ಯಾರ್ಥಿಗಳನ್ನು ಸಂಬೋಧಿಸಿ ಪಾಠ ಶುರುಮಾಡುತ್ತಿದ್ದ ಮಹೇಶ್ವರಪ್ಪ ಎಂಬ ಸಮಾಜಶಾಸ್ತ್ರದ ಮೇಷ್ಟ್ರ ಪಾಠ ಬಹಳ ಅಪ್ಯಾಯಮಾನವಾಗಿ ಕೇಳಿಸುತ್ತಿತ್ತು. ಹಾಗಾಗಿ ನೀರಸವೆನಿಸಿದ ಶಾಸ್ತ್ರಿ ಲೆಕ್ಚರರ ಗಣಿತಶಾಸ್ತ್ರದ ಕ್ಲಾಸಿಗೆ ಚಕ್ಕರ್ ಹಾಕಿ ಕಿಕ್ಕಿರಿದು ನೆರೆದಿರುತ್ತಿದ್ದ ಇಂತಹ ಕ್ಲಾಸುಗಳೇ ಚೇತೋಹಾರಿಯಾಗಿ ಕಾಣಿಸುತ್ತಿದ್ದವು.

ಬಹಳ ಮುಖ್ಯವಾಗಿ, ಗೌರ್ಮೆಂಟ್ ಲೈಬ್ರೆರಿಯ ಕಟ್ಟೆ ಮೇಲೆ ನಡೆಯುತ್ತಿದ್ದ ಚರ್ಚೆಗಳು ಎಲ್ಲಿಂದೆಲ್ಲಿಗೋ ಕರೆದೊಯ್ಯುತ್ತಿದ್ದವು. ಓದು, ಬರೆಹ, ನಾಟಕ, ಚಳುವಳಿಗಳು ಕುರಿತು ಈ ಚರ್ಚೆಗಳಿಗೆ ಇಂಥದ್ದೇ ಸೀಮಿತ ಸಮಯವೆಂದು ಇರಲಿಲ್ಲ. ಸೋವಿಯೆತ್ ರಷ್ಯಾದ ಮಾಸ್ಕೋದಲ್ಲಿನ ವಿದ್ಯಮಾನಗಳನ್ನು ಇಲ್ಲೇ ನಮ್ಮೂರ ಪಕ್ಕದ ಮಾಗಳದಲ್ಲೇ ನಡೆಯುತ್ತಿರುವ ಹಾಗೆ ಮಂಡಿಸುವ ಅಪ್ರತಿಮ ಮಾತುಗಾರರು ಇದ್ದರು. ದೇವರ ಚರ್ಚೆ, ರಾಜಕಾರಣಿಗಳ ರಂಗುರಂಗಿನ ಕಥೆಗಳು, ವಸ್ತುನಿಷ್ಠ ಟೀಕೆಗಳು… ಎಲ್ಲವೂ ಸೇರಿ, ಹೂವಿನ ಹಡಗಲಿ ಎಂಬ ಊರು ಓಪನ್ ಯುನಿವರ್ಸಿಟಿ ಆಗಿಹೋಗಿತ್ತು.

ಹೂವಿನ ಹಡಗಲಿಯ ಗೌರ್ನಮೆಂಟ್ ಆಸ್ಪತ್ರೆಯ ಎದುರಿಗೆ ಅದೊಂದು ದಿನ ಜನವೋ ಜನ. ಕರಿ-ಕಪ್ಪು, ಬಿಳಿಗಡ್ಡಗಳ, ಮಾಸಿದ ಅಂಗಿ ಪಂಚೆಗಳ ಜನ. ಅಲ್ಲೊಬ್ಬ, ಇಲ್ಲೊಬ್ಬರಂತೆ ಸುಧಾರಿಸಿದ ಬಟ್ಟೆ ಧರಿಸಿದ ಕೆಲವು ಜನರೂ ಇದ್ದರು. ಎಲ್ಲರ ಹೆಗಲ ಮೇಲೂ ಹಸಿರು ಟವೆಲ್ಲುಗಳಿದ್ದವು. ಮಣ್ಣು ಮೆತ್ತಿದ ಬರಿಕಾಲಲಿ ಬಂದ ರೈತರೇ ಹೆಚ್ಚಾಗಿರುವಂತೆ ಕಾಣಿಸುತ್ತಿತ್ತು. ಬಡ ರೈತ ಮುಖಂಡ ಗೂಡುಸಾಬ್ ಹೊಸ ಸಾಹಸಕ್ಕೆ ಕೈ ಹಾಕಿದ್ದರು.

ಕೈಯ್ಯಲ್ಲಿ ಗಣೇಶ ಬೀಡಿ ಹೊಗೆ ಬಿಡುತ್ತಲೇ, ದೇಶ ವಿದೇಶಗಳ  ಆಗುಹೋಗುಗಳ ಬಗ್ಗೆ ಮಾತನಾಡಬಲ್ಲವನಂತೆ ತೋರುತ್ತಿದ್ದ ಗೂಡೂಸಾಬರ ದೊಗಲೆ ಪೈಜಾಮದೊಳಗೆ ಅದೆಷ್ಟು ಬೀಡಿ ಕಟ್ಟುಗಳಿದ್ದವೋ? ಬಂದವರಿಗೆಲ್ಲ ಮಾತಾಡಿಸಿ ಕೇಳಿದವರಿಗೆಲ್ಲ ಬೀಡಿ ಕೊಟ್ಟು ತನ್ನ ಬಾಯಿನ ಬೀಡಿಯಿಂದಲೇ ಅವರ ಬೀಡಿಗೂ ಬೆಂಕಿ ಹಚ್ಚಿ, ಪುಸಪುಸನೆ ಹೊಗೆ ಬಿಟ್ಟರೆ ಅಲ್ಲಿಗೆ ಒಂದು ಧಮ್ ಮಾತಿಗೆ ವೇದಿಕೆ ಸಿದ್ಧವಾಯಿತೆಂದೇ ತಿಳಿಯಬೇಕು.

ಅಸಲಿಗೆ, ಈ ಗೂಡುಸಾಬರಿಗೆ ಇರಲೊಂದು ಗೂಡು, ಐದೆಕರೆಯಷ್ಟು ಬೆದ್ಲು ಹೊಲ ಬಿಟ್ಟರೆ ಮತ್ತೇನೂ ಇರಲಿಲ್ಲ. ಅದೇನೋ ಏನೋ. ರೈತಸಂಘದ ನಂಜುಂಡಸ್ವಾಮಿಯವರ ಮಾತಿಗೆ ಶರಣಾಗಿ ಕ್ರಾಂತಿಯ ಕನಸು ಕಂಡು, ನನಸಾಗಿಸಲು ಹರಸಾಹಸ ಪಡುತ್ತಿರುವವನಂತೆ ಕಾಣಿಸುತಿದ್ದ.

ಇಂಥ ಗೂಡುಸಾಬರಿಗೆ ಸ್ವಾಮ್ ಸ್ವಾಮವಾರದ ದಿನ ಹಡಗಲಿಗೆ ಬಂದು ಬ್ಯಾಸಾಯದ ಕುಳ, ಕೂರಿಗಿ, ಸಾಮಾನು, ಬಿತ್ತನೆ ಬೀಜ, ಗೊಬ್ಬರ ಎಂದೆಲ್ಲಾ ಓಡಾಡುವ ಹಸಿದ ರೈತರಿಗೆ ಒಂದ್ರುಪಾಯಿಯಲ್ಲಿ ಊಟ ಕೊಡಬೇಕೆಂದು ಯಾವಾಗ ನಿರ್ಧರಿಸಿದರೋ ಏನೋ? ತಾನೇ ಸ್ವಂತ ಬೆಳೆದ ಜ್ವಾಳವನ್ನೆಲ್ಲ ಚೀಲಗಟ್ಟಳೆ ಗಿರಣಿಗೆ ಹಾಕಿಸಿ ಹಿಟ್ಟು ಮಾಡಿಸಿದ. ಮನೆಯ ಹೆಣ್ಣುಮಕ್ಕಳನ್ನು ರೊಟ್ಟಿ ಬಡಿಯಲು ಹಚ್ಚಿ, ಹಳ್ಳಿಗಳಿಂದ ಹಾಲು ತರಿಸಿ, ಹೆಪ್ಪಾಕಿ ಮೊಸರು ಮಾಡಿದ.

ಹುಚ್ಚಣ್ಣಶೆಟ್ಟರ ಅಂಗಡಿಯಿಂದ ಗುರೆಳ್ಳು ತಂದು ಸುರಿದು ಚಟ್ನಿಪುಡಿ ಮಾಡಿಸಿದ. ಹೆಸರುಕಾಳು, ಮಡಕೆಕಾಳುಗಳನ್ನೂ ಸ್ಟಾಕ್ ಮಾಡಿಟ್ಟುಕೊಂಡಿದ್ದ.

ಹೀಗೆ ಎಲ್ಲ ತಯಾರಿಯಾದ  ನಂತರದ ಒಂದು ದಿನ ಹೀಗೆ, “ರೈತರಿಗಾಗಿ ಒಂದ್ರುಪಾಯಿಗೊಂದೂಟದ ಹೋಟೆಲ್” ಎಂದು ಹಸಿರು ಇಂಕಿನಲ್ಲಿ ಬರೆದ ಅಕ್ಷರಗಳು ರಾರಾಜಿಸತೊಡಗಿದವು.

ದಿನವೂ ಮಧ್ಯಾಹ್ನವಷ್ಟೇ ನಡೆಯುತ್ತಿದ್ದ ಹೋಟೆಲಿನಲ್ಲಿ, ಎರಡು ರೊಟ್ಟಿ, ಒಂದು ಕಪ್ ಗಟ್ಟಿ ಮೊಸರು, ಒಂದು ಕಾಳುಪಲ್ಯ ಇಷ್ಟೆಲ್ಲದಕ್ಕೂ ಕೇವಲ ಒಂದು ರೂಪಾಯಿ ನಾಣ್ಯ ಪಡೆಯುತ್ತಿದ್ದ ಗೂಡುಸಾಬರಿಗೆ ಆ ಹೋಟೆಲನ್ನು ಬಹುದಿನಗಳ ಕಾಲ ನಡೆಸಲಾಗಲಿಲ್ಲ. ಸುತ್ತಮುತ್ತ ಊರುಗಳ ಸಣ್ಣ ಪತ್ರಿಕೆಗಳಂತೆಯೇ ದಿನ ಬಿಟ್ಟು ದಿನ, ವಾರ ಬಿಟ್ಟು ವಾರ, ಕೊನೆಗೊಂದು ದಿನ ಗೂಡೂಸಾಬರು ಏದುಸಿರು ಬಿಡುವಂತಾಗಿ, ಮುಚ್ಚಿಹೋಯಿತು. ಹಾಗೆ ಮುಚ್ಚಿದ ಒಂದೆರೆಡು ದಿನಕ್ಕೆ ಯಾರೋ ತಟ್ಟಿ ಹೋಟೆಲಿನ ಗಳ ಕೂಡ ಬಿಡದಂತೆ ಎತ್ತಿಕೊಂಡು ಹೋಗಿದ್ದರು.

ಅದೇ ರೋಡಿನಿಂದ ಕಾಲೇಜಿಗೆ ಹೋಗುತ್ತಿದ್ದ ನಾನು, ಆ ಜಾಗದ ಕಡೆ ಒಮ್ಮೆಯಾದರೂ ಕಣ್ಣುಹಾಯಿಸಿ ಮುಂದೆ ಹೋಗುತ್ತಿದ್ದೆ. ಆಗ, ರೊಟ್ಟಿ ಬಡಿಯುವ ಸದ್ದು, ಗುರೆಳ್ಳನ್ನು ಉರಿಯುವ ಘಮಘಮದ ವಾಸನೆಯ ಪರಿಮಳವೂ ಗಾಳಿಯಲ್ಲಿ ತೇಲಿ ಬರುತ್ತಿತ್ತು.

ಈ ಹೊತ್ತಿನ “ಪ್ರಸಾದ”, “ಭೋಜನ” ಹಾಗೂ “ದಾಸೋಹ”ಗಳೆಂಬ ಶಬ್ಧಗಳ ಮುಂದೆ ಗೂಡೂಸಾಬರ ಶೇವ್ ಮಾಡದ ಮುಖ, ಅರ್ಧ ಸೇದಿ ಇನ್ನೂ ಹೊಗೆಯಾಡುತ್ತಿರುವ ಗಣೇಶ ಬೀಡಿಯಿಂದಲೇ ಮತ್ತೊಬ್ಬ ರೈತ ಬೀಡಿ ಹಚ್ಚಿಕೊಳ್ಳುತ್ತಿರುವ ಚಿತ್ರ ಕಣ್ಮುಂದೆ ಬರುತ್ತಿದೆ.

ಬಡ ರೈತರಿಗಾಗಿಯೇ ಇರುವ ಕಾರಣಕ್ಕೋ, ನನ್ನ ಕೀಳರಿಮೆಯ ಕಾರಣಕ್ಕೋ, ಒಮ್ಮೆಯಾದರೂ ಒಂದ್ರುಪಾಯಿ ರೊಟ್ಟಿ ಹೋಟೆಲಿಗೆ ಹೋಗಿ ಉಣ್ಣಬೇಕೆಂಬ ನನ್ನ ಆಸೆ ಕನಸಾಗಿಯೇ ಉಳಿದು ಬಿಟ್ಟಿತು.

“ಏನೋ ಮಾಡಾಕೋದೆ ಸಾ… ಕ್ಷಮ್ಸಿ ಬುಡಿ ಸಾ… ನಡಸಾಕಾಗಲಿಲ್ಲ” ಎಂದು ಅಸಹಾಯಕನಂತೆ ನಿಂತ ಕಪ್ಪು ಬಿಳಿ ಕುರುಚಲು ಗಡ್ಡದ ಗೂಡುಸಾಬರನ್ನೊಮ್ಮೆ ಗಟ್ಟಿಯಾಗಿ ತಬ್ಬಿಕೊಳ್ಳುವ ಆಸೆ ಕೊನೆಗೂ ಆಸೆಯಾಗಿಯೇ ಉಳಿದುಬಿಟ್ಟಿತು.

ನಾನೊಂದು ದಿನ  ಬರುವೆ, ನನ್ನ ದುಡಿಮೆಯ ಕಾಸಿನಲ್ಲಿ ನಿಮಗೊಂದಿಷ್ಟು ರೊಕ್ಕ ಕೊಡುವೆ… ಹೋಟೆಲು ನಡೆಸೋಣ… ಎಂದು ಆ ಹೊತ್ತು ನನ್ನ ಮನಸ್ಸು ಹೇಳುತ್ತಿತ್ತು.

ಈಗ ಮತ್ತೆ ಗಟ್ಟಿಯಾಗಿ ಕೂಗಬೇಕೆನಿಸುತ್ತಿದೆ.                     

‍ಲೇಖಕರು avadhi

May 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: