ಶಿವೋತ್ಸವದ ಗಣೆ ಗೌರವಕ್ಕೆ ಬುಡಕಟ್ಟು ಸಮುದಾಯದ ಮಹಿಳಾ ಸಾಧಕಿ ಬಿ.ಟಿ.ಲಲಿತಾ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ಫೆಬ್ರವರಿ 21 ಶುಕ್ರವಾರ ಶಿವರಾತ್ರಿಯಲ್ಲಿ ಬುಡಕಟ್ಟು ಸಾಂಸ್ಕೃತಿಕ ವೀರ ಜುಂಜಪ್ಪನ ಮೂಲ ನೆಲೆ ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿ ಜುಂಜಪ್ಪನ ಗುಡ್ಡೆಯಲ್ಲಿ ನಡೆಯುವ ಶಿವೋತ್ಸವದಲ್ಲಿ ಕ್ರಿಯಾವಿಧಿಯುಕ್ತ ಗಣೆ ಗೌರವ ನೀಡಲಾಗುವುದು ಎಂದು ಶಿವೋತ್ಸವದ ಸಂಚಾಲಕರಾದ ಗೋಮಾರದಹಳ್ಳಿ ಮಂಜುನಾಥ್ ತಿಳಿಸಿದ್ದಾರೆ.
ಕತೆ, ಕವಿತೆ, ಕಾದಂಬರಿ ಬರಹಗಳ ಮೂಲಕ ಕನ್ನಡ ಸಾಹಿತ್ಯದ ಗಟ್ಟಿ ಧ್ವನಿಯಾಗಿ ಕೇಳುವ ಬಿ.ಟಿ.ಲಲಿತಾ ನಾಯಕ್, ಮುಖ್ಯವಾಹಿನಿಯಲ್ಲಿ ಕಾಣಸಿಗುವ ಜನಪರ ಹೋರಾಟಗಾರ್ತಿಯೂ ಹೌದು.
ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿ ಕಾಲದಲ್ಲಿ ರಾಜಕೀಯ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದ ಜನತಾ ಪರಿವಾರದ ಮೂಲಕ, ಅವರು ರಾಜಕಾರಣ ಪ್ರವೇಶಿಸಿ ಮಾಜಿ ಸಚಿವರಾಗಿದ್ದಾರೆ.
ಈ ಸಾಧನೆಗಳ ಜೊತೆಗೆ ಲಲಿತಾ ನಾಯಕ್ ಅವರು ಕಾಡಿನ-ಕಾಡಿನಂಚಿನಲ್ಲಿರುವ ಲಂಬಾಣಿ ಸಮುದಾಯದ ‘ನೆಲೆ’ಯಿಂದ ಬಂದ ಮಹಿಳೆ ಎಂಬುದು ಗಮನಾರ್ಹವಾಗಿದೆ.
ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ ವತಿಯಿಂದ ನೀಡುವ ‘ಗಣೆ ಗೌರವ’ದಲ್ಲಿ ಕರಿಕಂಬಳಿ, ಗಣೆ ಜೊತೆಗೆ ಐದು ಸಾವಿರ ರೂಪಾಯಿ ನಗದು ನೀಡಲಾಗುವುದು.
0 ಪ್ರತಿಕ್ರಿಯೆಗಳು