ರಾತ್ರಿಯ ಬೊಗಸೆಗಟ್ಟಲೆ ಬೇಜಾರುಗಳನ್ನು ಸಹಿಸಲು ಅಸಾಧ್ಯವೆನ್ನಿಸಿದಾಗ ಹಗುರಾಗಲು ಪದ್ಯ ಬರೆದದ್ದಿದೆ. ಏಕಾಂತದ ತುತ್ತ ತುದಿ ತಲುಪಿದಾಗ ಪಕ್ಕದಲ್ಲೇ ಕುಳಿತು ಭುಜ ಕೊಟ್ಟು ಸಾಂಗತ್ಯ ನೀಡಿದ ಪದ್ಯಗಳಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಪದ್ಯ ಬರೆಯದೇ ಹೋದರೆ ಏನೋ ಆಗಿಬಿಡುತ್ತೀನೆಂಬ ಮಗು ಹೆರುವ ಸಂಕಟವನ್ನು ತುಸು ಅನುಭವಿಸಿದ್ದೇನೆ. ಆ ಕ್ಷಣಕ್ಕೆ ಬರೆದಿಟ್ಟಿದ್ದನ್ನು ರೀರೈಟ್ ಮಾಡಲಾಗದಂಥಾ ಅಸಹಾಯಕತೆ ನನ್ನದು. ಕಥೆಯಾದರೋ ಒಂದಲ್ಲಾ ಐದು ಬಾರಿ ಮತ್ತೆ ಮತ್ತೆ ಓದಿ ತಿದ್ದಬಹುದು, ಕವಿತೆ ಹ್ಯಾಗೆ ತಿದ್ದೋದು? ಗೊತ್ತಿಲ್ಲ
ಪದ್ಯಗಳಿಗೆ ಅರ್ಥಪೂರ್ಣ ಮತ್ತು ಚೆಂದದ ಚಿತ್ರಗಳ ಬರೆದುಕೊಟ್ಟ ಕಲಾವಿದ ಮಿತ್ರ ಮದನ್, ಪುಸ್ತಕಕ್ಕೆ ಬಲು ಸೊಗಸಾದ ಮುಖಪುಟ ವಿನ್ಯಾಸ ಮಾಡಿಕೊಟ್ಟ ಸೌಮ್ಯ ಕಲ್ಯಾಣಕರ್ ಅವರಿಗೂ, ಒಂದೇ ಮಾತಿಗೆ ಪ್ರೀತಿಂದ ಬೆನ್ನುಡಿ ಬರೆದುಕೊಟ್ಟ ಅಕ್ಕನಂಥಾ ಆರತಿ ಎಚ್.ಎನ್, ಇಲ್ಲಿನ ಬಹುತೇಕ ಪದ್ಯಗಳನ್ನು ಅಂತರ್ಜಾಲ ಪತ್ರಿಕೆ ‘ಅವಧಿ’ಯಲ್ಲಿ ಹಾಕಿ ಓದಿಸಿ ಖುಷಿಯನ್ನು ದುಪ್ಪಟ್ಟುಗೊಳಿಸಿದ ಜಿ.ಎನ್.ಮೋಹನ್ ಸರ್ ಮತ್ತು ಕವಿತೆಯ ಪುಸ್ತಕಗಳನ್ನು ಕೊಂಡು ಓದುವವರಿಲ್ಲದ ಕಾಲದಲ್ಲೂ ಪುಸ್ತಕವನ್ನು ಪ್ರಕಟಿಸುವ ಧೈರ್ಯ ತೋರಿದ ಪ್ರೀತಿಯ ರಾಜಣ್ಣ ಎಲ್ಲರಿಗೂ ಬೊಗಸೆ ಪ್ರೀತಿ.
ಸುಮಾರು ಐವತ್ತು ಪದ್ಯಗಳ ಕಟ್ಟು ಈ ‘ಒಂದು ಮುತ್ತಿನಿಂದ ಕೊಲ್ಲಬಹುದು’ ಎರಡು ತಿಂಗಳ ಮುಂಚೆಯೇ ನಿಮ್ಮ ಕೈ ಸೇರಬೇಕಿತ್ತು. ಕೊರೋನಾ ವೈರಸ್ಸು, ಲಾಕ್ ಡೌನ್ ಇತ್ಯಾದಿ ಇತ್ಯಾದಿಗಳಿಂದ ತಡವಾಯ್ತು. ಈ ಪುಸ್ತಕ, ಪ್ರೇಮಿಗಳಿಗೆ, ಪ್ರೀತಿಪಾತ್ರರಿಗೆ ಕೊಡಬಹುದಾದ ಉಡುಗೊರೆಯಂತೂ ಆದೀತು. ಪದ್ಯಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳಿ.
ಪುಸ್ತಕಕ್ಕಾಗಿ ನನ್ನನ್ನಾಗಲಿ ಅಥವಾ ರಾಜೇಂದ್ರ ಪ್ರಸಾದರನ್ನಾಗಲಿ ಸಂಪರ್ಕಿಸಿ.
ರಿಯಾಯಿತಿ ನಂತರದ ಪುಸ್ತಕದ ಬೆಲೆ ಅಂಚೆ ವೆಚ್ಚಗಳೂ ಸೇರಿ 100 ರೂ.ಗಳು.
ಫೋನ್ ನಂಬರ್: 9916009432
-ಪ್ರವರ ಕೊಟ್ಟೂರು
0 ಪ್ರತಿಕ್ರಿಯೆಗಳು