ಶ್ರೀನಿವಾಸ ಡಿ ಶೆಟ್ಟಿ
ಹೆಚ್ಚು ಕಡಿಮೆ ಗೊತ್ತಿದ್ದ ಮೇಲೆ
ಅಂಕಿ ಸಂಖ್ಯೆಗಳ ಪರಿಚಯ ಬೇಕೆ?
ಎತ್ತರ ಗಿಡ್ಡ ಹೇಳುವ ನೀನು
ಅಳತೆಗೋಲಿನ ಗೊಡವೆ ಏಕೆ?
ಭಾರ ಹಗುರ ತಿಳಿದಿಹ ನೀನು
ತೂಕದ ಕಲ್ಪನೆ ನಿನ್ನದಲ್ವೇನು?
ಉದ್ದ ಅಗಲ ಕಣ್ಣಲ್ಲೇ ಇನ್ನು
ಎತ್ತರಕ್ಕೆ ಶ್ರಮಪಡಬೇಕೇನು?

ಹತ್ತಿರ ದೂರ ಗೊತ್ತಾದ ಮೇಲೆ
‘ಕಾಯ’ದ ಚಲನೆ ತಿಳಿಯಲೇಬೇಕು
ಹೆದರಿಕೆಪಡಿಸುವ ಇರುಳು-ನೆರಳು
ಸೂರ್ಯನ ಬೆಳಕಿಗೆ ಅಳುಕಲೇಬೇಕು
ಒಂದು ಎರಡು ಸಂಖ್ಯೆಗಳಷ್ಟೆ
ಅದಕ್ಕೂ ಮಿಗಿಲು ಕಲಿಕೆಯು ಉಂಟು
ಪಾಠದಿ ಲೆಕ್ಕವು ಸಂಕೇತವಷ್ಟೆ
ಬದುಕಿನ ಪಾಠವು ಬಿಡಿಸದ ಗಂಟು
ಬದುಕಬಲ್ಲದು ಸಕಲ ಜೀವಿಯು
ಪ್ರಕೃತಿ ಗುರುವಿನ ಪದತಲದಲ್ಲಿ
ಬದುಕಿಗೆ ಅರ್ಥವ ತಿಳಿಯಲು ನಿನಗೆ
ಗುರುವಿನ ಅರಿವು ಹಸಿರಾಗಿರಲಿ.






0 Comments