ಇವರೆಲ್ಲರೂ ಸಂಶಯವೇ ಇಲ್ಲ ಕನ್ನಡವನ್ನು ಕಟ್ಟಿದವರು. ನಮ್ಮ ನಿಮ್ಮಂತಲ್ಲ. ಅದಕ್ಕಿಂತಲೂ ಒಂದು ಕೈ ಹೆಚ್ಚು ಎನ್ನುವ ಹಾಗೆ. ಕನ್ನಡದ ದನಿ ಕೇಳದ ಊರಲಿದ್ದು ಕನ್ನಡ ಕಟ್ಟಿದವರು.. ಕನ್ನಡ ಮಾತ್ರವೇ ನೆಪವಾಗಿ ಜೊತೆಯಾಗಿ ಉಳಿದವರು.
ಕನ್ನಡಕ್ಕೆ ಕಥೆ, ಕವಿತೆ, ಪ್ರಬಂಧ, ಜಾನಪದ, ಸಂಶೋಧನೆಯನ್ನು ಮೊಗೆದು ಕೊಟ್ಟವರು. ‘ಗಾನ್ ವಿಥ್ ದಿ ವಿಂಡ್’ ಸೊಗಡು ಕೊಟ್ಟ ಶ್ಯಾಮಲಾ ಮಾಧವ, ‘ಪಾಚಿಗಟ್ಟಿದ ಪಾಗಾರ’ ದ ಮಿತ್ರಾ ವೆಂಕಟ್ರಾಜ, ಜಾನಪದವನ್ನೇ ಉಂಡು ಬೆಳೆದ ಸುನೀತಾ ಶೆಟ್ಟಿ, ಸಂಶೋಧನೆಯ ಮುಖ್ಯ ಹೆಸರು ಗಿರಿಜಾ ಶಾಸ್ತ್ರಿ, ಪತ್ರಿಕೋದ್ಯಮವನ್ನೂ ಹತ್ತಿರದಿಂದ ಕಂಡ ತುಳಸಿ ವೇಣುಗೋಪಾಲ್ ಇವರೆಲ್ಲಾ ಸೇರಿದಂತೆ ಮುಂಬೈನ ಸೃಜನಾ ಬಳಗ ದಿಢೀರನೆ ಎದ್ದು ಹೊರಟೇಬಿಟ್ಟಿತು.
ಕಾರಣವಿದೆ- ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ; ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ. ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ: ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ …ಎಂದು ಇನ್ನಿಲ್ಲದಂತೆ ಮಲೆನಾಡಿನ ಪ್ರೀತಿ ಉಕ್ಕಿಸಿದ ಆ ಕುವೆಂಪು ಅವರು ನಡೆದಾಡಿದ ನೆಲ ನೋಡಲಿಕ್ಕೆ..
ಹೇಗೂ ಗೆಳತಿ ಎಲ್ ಸಿ ಸುಮಿತ್ರಾ ಅಲ್ಲೇ ಬಗಲಲ್ಲಿದ್ದಾರೆ. ಕುಪ್ಪಳಿ ಸುತ್ತಿಸಲು ಕುವೆಂಪು ಪ್ರೀತಿಯ ಕೆ ಸಿ ಶಿವಾರೆಡ್ಡಿ ಇದ್ದಾರೆ. ನವಿಲುಕಲ್ಲು ನೆತ್ತಿ ಇದೆ. ಸೂರ್ಯಾಸ್ತ ಸೂರ್ಯೋದಯಗಳಿವೆ. ಕಾಜಾಣ ಕೋಗಿಲೆ ಇದೆ ಎಂದವರೇ ಹೊರಟೇಬಿಟ್ಟರು.
ಮಕ್ಕಳಲ್ಲಿ ಮಕ್ಕಳಾಗಿ ಹೋದ, ಗೆಳತಿಯರನ್ನು ಕಂಡು ಸಂಭ್ರಮಿಸಿದ, ಮಲೆನಾಡನ್ನು ಕಣ್ತುಂಬಿಕೊಂಡ ಆ ಕನ್ನಡತಿಯರ ಅಪೂರ್ವ ಚಿತ್ರಗಳು ಇಲ್ಲಿದೆ
ಫೋಟೋಗಳು- ಶ್ಯಾಮಲಾ ಮಾಧವ ಅವರ ಸಂಗ್ರಹದಿಂದ
ನಾನೂ ಬಂದೆ….! ೮.೩೦ ವಿರಾರ್ ಫಾಸ್ಟ್ ತಪ್ಪಿಹೋಯ್ತು. ಒಂದ್ನಿಮಿಷ!
Thank you, Avadhi!
ನಿಜಕ್ಕೂ ಭಾವ ಸಂಪನ್ನರಾಗಿ ನಲಿದಾಡಿದ ಧನ್ಯತೆಯ ಕ್ಷಣಗಳವು.
ದೇಹ ಮುಂಬೈ ಸೇರಿದರೂ, ಚಿನ್ಮನವೆಲ್ಲ ಅಲ್ಲೇ ಇದೆ.
— ಶ್ಯಾಮಲಾ ಮಾಧವ
“ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು……”ರಾಷ್ಟ್ರಕವಿ ಕುವೆಂಪು ಕವಿವಾಣಿಯನ್ನು ಅಕ್ಷರಶಃ ಪಾಲಿಸುವವರು ಅನಿವಾಸೀ ಕನ್ನಡಿಗರು-ಎಂಬುದಕ್ಕೆ ಸ್ಪಷ್ಟ ನಿದರ್ಶನ ಈ ಮುಂಬೈ ಕನ್ನಡತಿಯರು. ಎಲ್ಲಕ್ಕೂ ಮಿಗಿಲಾಗಿ ನನಗೆ ಮೆಚ್ಚಿಕೆಯಾದದ್ದು ಅವರಲ್ಲಿರುವ ಒಗ್ಗಟ್ಟು. ಕನ್ನಡ ನೆಲದಲ್ಲಿರುವವರಿಗೆ ಕನ್ನಡವೆಂದರೆ ಗೌಣ. ತಾತ್ಸಾರ, ಬಳ್ಳಾರಿಯ ಯಾವುದೇ ಸರ್ಕಾರಿ ಕಚೇರಿಗೆ ಹೋಗಿ. ನಾವೇನಾದರೂ ತಪ್ಪಿ ಹೈದ್ರಾಬಾದೋ ಅಥವಾ ಇನ್ನಾವುದೋ ಆಂಧ್ರಪ್ರಭುತ್ವದ ಕಚೇರಿಗೆ ಬಂದಿದ್ದೇವೆಯೋ ಎಂಬ ಭ್ರಮೆಗೊಳಗಾಗುತ್ತೇವೆ. ಅಷ್ಟರಮಟ್ಟಿಗೆ ಇಲ್ಲಿನ ಕಚೇರಿಗಳಲ್ಲಿ ನಮ್ಮ ಕಿವಿಗೆ ಬೀಳುವ ಮಾತು-ತೆಲುಗಿನವು. ಅದರಲ್ಲೂ ಓಪಿಡಿ (ಓ!-ಪೀಡೆ!)ಎಂದೇ ಹೆಸರಾಗಿರುವ ವೈದ್ಯಕೀಯ ಮಹಾವಿದ್ಯಾಲಯ (ವಿಮ್ಸ್) ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯಾಧಿಕಾರಿ, ಕ್ಷಯ ಆರೋಗ್ಯಧಾಮಗಳಲ್ಲಿ ನಿಮ್ಮ ಕಿವಿಗೆ ಬೀಳುವುದು ಬರೀ ತೆಲುಗು ಮಾತ್ರ. ಜಿಲ್ಲಾಧಿಕಾರಿಗಳ ಕಚೇರಿಯಾಗಲೀ ಇನ್ನಿತರೇ ಯಾವುದೇ ಕಚೇರಿಗಳಲ್ಲಿ, ಅಪ್ಪಟ ಕನ್ನಡದ್ದೇ ಆದ ಮೈಸೂರು ಬ್ಯಾಂಕ್ ಒಳಗೊಂಡು ಯಾವುದೇ ಬ್ಯಾಂಕ್ ಗಳಲ್ಲಿ ನಿಮಗೇನಾದರೂ ಕನ್ನಡ ಕಿವಿಗೆ ಬಿದ್ದರೇ ನೀವೇ ಧನ್ಯರು. ಅದೇಕೆ ಅದೆಷ್ಟೋ ಸಲ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋಗುತ್ತಿರುತ್ತೇನೆ. ಅಲ್ಲಿಯೂ ತೆಲುಗಿನ ಚಿಲಿಪಿಲಿ. ಎರಡು ವರ್ಷಗಳ ಹಿಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಬಹುಶಃ ಇಲ್ಲಿ ಅಪ್ಪಟ ಅಚ್ಚ ಕನ್ನಡವನ್ನೇ ಕೇಳುವ ಸೌಭಾಗ್ಯ ನನ್ನದಾಗುವುದೆಂಬ ಆತ್ಮವಿಶ್ವಾಸದಿಂದ ಪ್ರಸಾರಾಂಗಕ್ಕೆ ಕಾಲಿಟ್ಟೆ. ಕಿಲಕಿಲ ಲಲನೆಯ ತೆಲುಗಿನ ಕಲರವ ನನಗೆ ಸುಲಲಿತ ಸ್ವಾಗತ ನೀಡಿತು. ಹಾಯ್! ನನ್ನ ಕನ್ನಡ ಜನ್ಮವೇ ಎಂದು ನಿಟ್ಟುಸಿರು ಬಿಟ್ಟೆ.
-“ಇವರೆಲ್ಲರೂ ಸಂಶಯವೇ ಇಲ್ಲ ಕನ್ನಡವನ್ನು ಕಟ್ಟಿದವರು. ನಮ್ಮ ನಿಮ್ಮಂತಲ್ಲ. ಅದಕ್ಕಿಂತಲೂ ಒಂದು ಕೈ ಹೆಚ್ಚು ಎನ್ನುವ ಹಾಗೆ. ಕನ್ನಡದ ದನಿ ಕೇಳದ ಊರಲಿದ್ದು ಕನ್ನಡ ಕಟ್ಟಿದವರು.. ಕನ್ನಡ ಮಾತ್ರವೇ ನೆಪವಾಗಿ ಜೊತೆಯಾಗಿ ಉಳಿದವರು.”-ಅವಧಿಯ ಈ ಮೊದಲ ಸಾಲು ಓದಿಯೇ ಒಂದು ಕೊಡ ಹಾಲು ಕುಡಿದಷ್ಟು ಸಂತೋಷವಾಯ್ತು. ಮುಂಬೈ, ದಿಲ್ಲಿ, ಅಮೇರಿಕಾ, ಇಂಗ್ಲಂಡ್ ಗಳಲ್ಲಿರುವ ಅನಿವಾಸಿ ಕನ್ನಡಿಗರ ಕನ್ನಡ ಪ್ರೀತಿ ಕನ್ನಡ ನೆಲನಿವಾಸಿಗಳಿಗೆಂದು ಬರುವುದೋ?. ಹಂಪಿ, ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗವು ರಸಋಷಿ ಕುವೆಂಪುರವರ ಸಮಗ್ರ ಕೃತಿ ಸಂಪುಟ ಗಳನ್ನು ಪ್ರಕಟಿಸಲು ಸಾಧ್ಯವಾದದ್ದು ಅಮೇರಿಕಾ “ಅಕ್ಕ”ನ ಧನಸಹಾಯದಿಂದ ಎಂಬುದು ಅಭಿನಂದನೀಯ.
ಮುಂಬೈ ಕನ್ನಡ ಭಗಿನಿಯರಿಗೆ ಕೈಮುಗಿದು ಅಭಿನಂದಿಸುತ್ತ, ಅಭಿವಂದಿಸುತ್ತ-“ಕನಸಲೂ ಕನ್ನಡ”- ಎಂಬ ನನ್ನ ನೀಳ್ಗವನದ ಆಯ್ದ ಪಂಕ್ತಿಗಳನ್ನು ಉಲ್ಲೇಖಿಸುತ್ತೇನೆ.
ಬೇಕು ಕನ್ನಡ ನೆಲ-ಜಲಾಶ್ರಯ
ನೆರೆಯ ರಾಜ್ಯದ ಮಂದಿಗೆ/
ಪ್ರೀತಿ-ಗೌರವ ತೋರ ಬೇಡವೆ
ಅನ್ನ ನೀಡಿದ ಭಾಷೆಗೆ//
ಹಿಂದಿ-ಉರ್ದು-ಮರಾಠಿ-ಇಂಗ್ಲೀಷ್
ಮಧ್ಯೆ ಉಡುಗಿದೆ ಕನ್ನಡ/
ಇತ್ತ ಎನ್ನಡ ಅತ್ತ ಎಕ್ಕಡ
ನಡುವೆ ಎಲ್ಲಿದೆ ಕನ್ನಡ//
ಎಂದು ಕೇಳುವ ಬಂಧು-ಬಾಂಧವ
ನಡುಗೆ ನಿಮ್ಮೆದೆ ತತ್ತರ/
ವ್ಯಾಘ್ರ-ಕೇಸರಿಯಂತೆ ಘರ್ಜಿಸಿ
-ಕೇಳಿ- ಕೊಡುವೆವು ಉತ್ತರ//
ಹಿಂದಿ-ಉರ್ದು-ಮರಾಠಿ-ಇಂಗ್ಲೀಷ್
ಮಧ್ಯೆ ಕೆಚ್ಚೆದೆ ಕನ್ನಡ/
ಇತ್ತ ಎನ್ನಡ ಅತ್ತ ಎಕ್ಕಡ
ನಡುವೆ ಗಂಡೆದೆ ಕನ್ನಡ//
ಅನ್ಯರೊಳೇತಕೆ ನಿಮ್ಮೊಳೆಲ್ಲಿದೆ
ಮಾತೃ ಭಾಷಾ ಪ್ರೇಮವು/
ಹೆಮ್ಮೆ ಸತ್ತಿದೆ ನಿಮ್ಮ ಮುತ್ತಿದೆ
ಇಂಗ್ಲಿಷಿನ ವ್ಯಾಮೋಹವು//
ಚೆನ್ನಾಗಿದೆ ಪದ್ಯದ ಧಾಟಿ ಮತ್ತು ಲಯ. ಆದರೆ 8-9 ಸಾಲುಗಳ ಅರ್ಥ ಗೊಂದಲವೆನಿಸಿತು. ಮತ್ತೆ ಸರಿಪಡಿಸಬಹುದೆ?
ಕನ್ನಡಕ್ಕಾಗಿ ಮುಂಬೈಯ ಕೊಡುಗೆ ಆಪಾರ . ಸದಾ ತುಡಿಯುತ್ತಿರುವ ಮನಸ್ಸು . ತಾಯ್ನುಡಿಗಾಗಿ ಮಿಡಿಯುವ ಹೃದಯಗಳು ಇಲ್ಲಿ . ಮುಂಬೈ ಮಹಿಳೆಯರ ಹುಮ್ಮಸು ನೋಡಿ .. ಈ ಚಿತ್ರಗಳೇ ಎಲ್ಲಾ ಹೇಳಿ ಬಿಡುತ್ತವೆ .
– ಅಶೋಕ್ ಕುಮಾರ್ ವಳದೂರು (ಅಕುವ)