ಷಡಕ್ಷರಿ ತರಬೇನಹಳ್ಳಿ ಶಂಕರಲಿಂಗಪ್ಪ
‘ತಿಥಿ’
ನೋಡಿದ ನಂತರ ಹುಟ್ಟಿದ ಪ್ರಶ್ನೆಗಳು.
1) “ಗಡ್ಡಪ್ಪ ” ಕುರಿ ಕಾಯೋರ್ ಜೊತೆಗೆ ಟೂರ್ ಹೋದ್ನಾ ?
2) ಅವಸರದ ಪ್ರೇಮಿ “ಅಭಿ” ಆ ಮೂಗ್ನತ್ತ್ ಸುಂದ್ರಿ “ಕಾವೇರಿ”ಯ ಕೈ ಹಿಡಿದ್ನಾ ?
3) 2 ಲಕ್ಷ ಸಾಲನ ಆ ಎಣ್ಣೆ ಅಂಗಡಿ ಗಯ್ಯಾಳಿ ವಮ್ಮ ವಸೂಲ್ ಮಾಡಿಕೊಂಡಳಾ ?
4) ಆ ಆಫೀಸಲ್ಲೇ ಎಕ್ಸಸೈಜ್ ಮಾಡೋನ್ ಗಡ್ಡಪ್ಪನ್ ಮಗನ ಡೆತ್ ಸರ್ಟಿಫಿಕೇಟ್ ಬರೆದ್ನಾ ?
5) ಗಡ್ಡಪ್ಪನ್ನ ಅವನ ಮಗ ಸೆಂಚುರಿ ಹೋಡಿಯೋಕೆ ಬಿಡ್ತಾನಾ ?
6) ಸೆಂಚುರಿ ಗೌಡನ್ ಜಮೀನು ಕೊನೆಗೂ ಪಂಚಾಯ್ತಿ ಪಾರೀಕತ್ತಿನ ಪ್ರಕಾರ ಭಾಗ ಆಯ್ತಾ ?
7) ಈ “ತಿಥಿ” ಸರೀನೋ ಅಥವಾ ಆ ಇಂಗ್ಲಿಷ್ ಸಬ್ ಟೈಟಲ್ಲಲ್ಲಿ ತೋರಿಸ್ತಾರಲ್ಲಾ ಆ “ಥಿಥಿ” ಸರೀನೋ ?
ಮತ್ತೆ
ಫೈನಲೀ ವಾಟ್ ಐ ವಾಂಟು ಸೇ ಈಸ್ !!!
ನಮ್ ಹಳ್ಳಿ ಕನ್ನಡ ನಾ ಇಂಗ್ಲೀಷ್ಗೆ ಕನೆಕ್ಟ್ ಮಾಡೋ
ಬೂಪ ಇನ್ನೂ ಹುಟ್ಟಿ ಬರ್ಬೇಕ್.
ಶಶಿಶೇಖರ್. ಎನ್
‘ತಿಥಿ’ಯಲ್ಲಿ ಗಮನಿಸಿದ ಒಂದು ಅಂಶ :
ಮೂರು ತಲೆಮಾರಿಗೂ ವ್ಯವಸಾಯದ ಬಗೆಗೆ ದಿವ್ಯ ನಿರ್ಲಕ್ಷ್ಯ. ನಿರುತ್ಸಾಹ ಮಾತ್ರವಲ್ಲ ತಾತ್ಸಾರ. ಗಡ್ಡಪ್ಪ ಬ್ರಾಂದಿ ಬೀಡಿಯ ಸಖ್ಯದಲ್ಲಿ ವೈರಾಗ್ಯ ಕಾಣುತ್ತಿದ್ದರೆ ಮಗ ತಮ್ಮಣ್ಣ ಬೇಸಾಯ ಮಾಡುವುದು ಮೂರ್ಖತನ ಎಂದುಕೊಂಡಿದ್ದಾನೆ. ಅದಕ್ಕೆ ಜಮೀನನ್ನೇ ಮಾರಲು ಹೊರಟಿದ್ದಾನೆ. ತಮ್ಮಣ್ಣನ ಮಗ ಅಭಿಗೆ ದಿನಾ ನಾಲ್ಕು ಕಾಸು ಕೊಡುವ ಮರಳು ಸಾಗಣೆಗೆ ಹೋಗುವುದರಲ್ಲಿ ಆಸಕ್ತಿ. ಕುತೂಹಲದ ಸಂಗತಿ ಎಂದರೆ ತಮ್ಮಣ್ಣನ ಹೆಂಡತಿ ಕೂಡ ಮಗನನ್ನೇ ವಹಿಸಿಕೊಂಡು ಮಾತಾಡ್ತಾಳೆ, ಅವನಾದರೂ ನಾಲ್ಕು ಕಾಸು ಸಂಪಾದನೆ ಮಾಡ್ತಾನೆ ಅಂತ.
ಇದು ಇಂದಿನ ಮಂಡ್ಯದ ಹಳ್ಳಿಗಳ ವಾಸ್ತವ .
ಪಡ್ಡೆ ಹುಡುಗ ಕೂಡಾ ವ್ಯವಸಾಯದಲ್ಲಿ ಏನೂ ವರ್ಕ್ ಔಟ್ ಆಗುದಿಲ್ಲ ಕಣಣ್ಣ ಎನ್ನುತ್ತಾನೆ. ತಿಥಿ ಚಿತ್ರ ಈ ಒಂದಲ್ಲ ಎರಡಲ್ಲ ಮೂರು ತಲೆಮಾರಿಗೆ ಬೇಸಾಯದ ಬಗೆಗೆ ಇರುವ ನಿರ್ಲಕ್ಷ್ಯ ವನ್ನು ತಣ್ಣಗೆ ಹಿನ್ನೆಲೆಯಲ್ಲಿ ಹೇಳುತ್ತದೆ.
ಲವಲೇಷವೂ ಆಡಂಬರವಿಲ್ಲದ, ನೈಜ ಬೆಳಕಿನಿಂದಲೇ ಸಂಯೋಜನೆಗೊಂಡ, ಸಹಜ ಅಭಿನಯದ ಚಲನಚಿತ್ರ “ತಿಥಿ” ಈ ಚಿತ್ರದಲ್ಲಿ ಅಭಿನಯಿಸಿರುವ ತಮ್ಮೇಗೌಡ, ಚನ್ನೇಗೌಡ, ಅಭಿಷೇಕ್, ಸಿಂಗ್ರಿಗೌಡ, ಪೂಜ ಮತ್ತು ಎಲ್ಲ ಕಲಾವಿದರ ಪಾತ್ರಗಳು ಅದ್ಭುತ, ನನ್ನ ಪ್ರಕಾರ ಪ್ರತಿಯೊಂದು ಹಳ್ಳಿಯಲ್ಲಿಯೂ ನಡೆಯುವ ನಿತ್ಯದ/ಸತ್ಯದ ಸಂಗತಿಗಳೇ ಈ ತಿಥಿ.
ಹಳ್ಳಿ ಜನರ ಮುಗ್ಧತೆ, ಅಜ್ಞಾನ, ಅವಿವೇಕ, ಆಸೆ, ಆತುರ, ತಾತ್ಸಾರ, ಮುಂದಾಲೋಚನೆ ಇಲ್ಲದೆ ಜೀವನವನ್ನ ಬಹು ಹಗುರವಾಗಿ ಸ್ವೀಕರಿಸುವ ಮನಸ್ಥಿತಿ… ಇವುಗಳೇ ಕಥಾವಸ್ತು.
ಇಲ್ಲಿ ಹೆಸರಿಗೆ ಸೆಂಚುರಿಗೌಡನ ತಿಥಿ ಒಂದು ಕಡೆಯಾದರೆ, ತಂದೆ ಇದ್ದು ಇಲ್ಲದಂತಿರುವ ಚನ್ನೇಗೌಡ, ತನ್ನ ಶೀಲವನ್ನೇ ಕಳೆದುಕೊಂಡ ಹರೆಯದ ಹುಡುಗಿ, ಸಾಕಿದ ಕುರಿಗಳನ್ನ ಕಳೆದುಕೊಂಡ ಕುರುಬರು, ಸಾಲಕೊಟ್ಟ ಗಯ್ಯಾಳಿ ಹೆಂಗಸು, ಭೂಮಿ ಪಡೆಯಲು ಕಾದು ಕುಳಿತ ಮರದ ವ್ಯಾಪಾರಿ ಹೀಗೆಯೇ ಎಲ್ಲರ ತಿಥಿ ಒಂದೇ ಬಾರಿಗೆ ನಡೆದಂತ ಅನುಭವ ನೋಡುಗರ ಮನಸ್ಸಿನಲ್ಲಿ ನಿಲ್ಲುತ್ತದೆ.
ಜೀವನದಲ್ಲಿ ಉಳಿವು ಮತ್ತು ಹೋರಾಟದ ಬದುಕಿನಲ್ಲಿ ನಷ್ಟ ನೋವುಗಳನ್ನು ಅನುಭವಿಸುವವರಿಗಿಂತ ಅದನ್ನು ನೋಡುವ ಜನರಿಗೆ ಲಾಭ ಆನಂದ ಖುಷಿ ಅನ್ನುವ ಮಾರ್ಮಿಕತೆ ತಿಥಿಗೆ ಬಂದು ಉಂಡುಹೋದವರಲ್ಲಿ ಕಾಣಸಿಗುತ್ತದೆ.
ಈ ಚಿತ್ರವನ್ನು ಮಂಡ್ಯದ ನೆಲದ ಜನ ಅರ್ಥ ಮಾಡಿಕೊಳ್ಳುವ ರೀತಿಗೂ ಉಳಿದ ಪ್ರದೇಶದ ಜನ ಅರ್ಥ ಮಾಡಿಕೊಳ್ಳುವ ರೀತಿಗೂ ಭಾಳ ವ್ಯತ್ಯಾಸ ಕಂಡು ಬರುತ್ತಿದೆ ಸರ್ . ಚದುರಂಗ – ಬೆಸಗರಹಳ್ಳಿ ರಾಮಣ್ಣ , ಸುಧಾಕರರ ಕತೆಗಳನ್ನು ಓದಿದಷ್ಟೇ ಖುಷಿ ಈ ಸಿನಿಮಾದಿಂದ ನನಗೆ ಸಿಕ್ಕಿತು. ಇದು ಅದ್ಬುತವೇನಲ್ಲದಿದ್ದರೂ ಈ ಕಾಲದ ಒಳ್ಳೆಯ ಸಿನಿಮಾ ಎಂದು ನಾನು ಭಾವಿಸಿದ್ದೇನೆ. ಈ ಸಿನಿಮಾದ ಕಥೆ ತುಂಬಾ ಮುಗ್ದವಾಗಿ ನಿರೂಪಿತವಾಗಿದೆ ಮತ್ತದು ತಿಥಿ ಎನ್ನುವ ಆಚರಣೆಗೆ ಮಾತ್ರ ಬದ್ದವಾಗಿ ತನ್ನ ಚೌಕಟ್ಟನ್ನ ರೂಪಿಸಿಕೊಂಡಿದೆ.
0 ಪ್ರತಿಕ್ರಿಯೆಗಳು