ರಾಜೀವ ನಾರಾಯಣ ನಾಯಕ
ಅವನೇನು ಅಷ್ಟು ಕೆಟ್ಟವನಾಗಿರಲಿಲ್ಲ ಅವಳಂತೂ
ಪರಿಶುದ್ಧ ಅಪರಂಜಿ ಆದರೂ ಪ್ರೀತಿ ಮುರಿದುಬಿತ್ತು!
ತೆರೆ ನೊರೆ ಕಾಡು ಕಣಿವೆ ಬೆಟ್ಟ ಬೆಳದಿಂಗಳು
ಸಾವಿರದ ಸಾಕ್ಷಿಗಳೂ ಪ್ರೇಮಕ್ಕೆ ಬರೀ ಓಳು!
ಸ್ಕೂಟಿ ಸವಾರಿಯಲ್ಲಿ ಬಳುಕಿದ ರೇಶಿಮೆ ಕೂದಲು
ಕಂಪಿಸುವ ತುಟಿಗೆ ಸವರಿದ ಉಪ್ಪುಪ್ಪು ಕೊರಳು
ಬೆಸೆದ ಜೀವಕೋಶಗಳಲ್ಲಿ ಜಿನುಗಿದ ಹಾರ್ಮೋನು!
ಕಚಗುಳಿಯೇ ಕಳೆದಿರಲು ಸ್ಪರ್ಷ ಸುಖದ ಹಂಗೇನು?
ಗೋಕುಲ ನಿರ್ಗಮನವಿದೆ ವಿರಹದ ರಾಧೆಯರಿಲ್ಲ
ಗೋರಿಗಳಿವೆ ಪ್ರೇಮದತ್ತರಿನ ಅನಾರ್ಕಲಿಯರಿಲ್ಲ
ಹುಣ್ಣಿಮೆ ವ್ಯರ್ಥವಾಗಿದೆ ತಾಜ್ಗೆ ಸಹ ಜಾನ್ ಇಲ್ಲ
ಕಾಲದುಂಗುರ ಕೊರಳಲ್ಲಿದೆ ಅಭಿಜ್ಞಾನ ದುಷ್ಯಂತರಿಲ್ಲ
ಮೇಡ್ ಫಾರ್ ಈಚ್ ಅದರ್, ಲವ್ ಫಾರೆವರ್
ಪರಿತ್ಯಕ್ತ ಭಾವಗೂಡಲ್ಲುಳಿದ ಪದಗಳು ಮಾತ್ರ
ಒಲವಿನ ಹಕ್ಕಿ ಹಾರಿಹೋಗುತಿದೆ ನೋಡಿದಿರಾ?
ಬಹುಶ: ಏಸುಪ್ರೀತಿ ಬುದ್ಧಪ್ರೇಮ ಮಾತ್ರ ಅಮರ!
0 ಪ್ರತಿಕ್ರಿಯೆಗಳು