ಪ್ರೀತಿಯ ವೈದೇಹಿ ಅವರಿಗೆ ನಮಸ್ಕಾರ,
ನೀವು ನನ್ನ ಇಷ್ಟದ, ನನ್ನನ್ನು ಬೆಳೆಸಿದ ಲೇಖಕಿಯಾಗಿದ್ದೀರಿ. ವೈಯಕ್ತಿಕವಾಗಿ ಆತ್ಮೀಯರೂ ಆಗಿದ್ದೀರಿ. ಅದಕ್ಕಾಗಿ ಈ ಪತ್ರ ಬರೆದಿದ್ದೇನೆ.
ನಿಮ್ಮನ್ನು ಈ ಹಿಂದೆ ಮೂಡಬಿದ್ರೆಯ ‘ನುಡಿಸಿರಿ’ ವೇದಿಕೆಯಲ್ಲಿ ನೋಡಿ ಸಂತೋಷಗೊಂಡಿದ್ದೆ. ನಿಮ್ಮ ಹೃದಯದ ನಾಲ್ಕು ಮಾತುಗಳು ಅಲ್ಲಿ ಸೇರಿರುವ ಅಸಂಖ್ಯಾತ ಜನರಲ್ಲಿ ಒಳಿತನ್ನು ಬಿತ್ತಲಿ ಎಂದು ಆಶಿಸಿದ್ದೆ.
ಇದೆ ಸಂದರ್ಭದಲ್ಲಿ ಕಾವ್ಯ ಎನ್ನುವ ಹುಡುಗಿಯ ಸಾವಿಗೆ ಸಂಬಂಧಿಸಿ ಆಳ್ವರನ್ನು ಬೆಂಬಲಿಸಿದ ಸಭೆಯಲ್ಲಿ ನಿನ್ನೆ ನೀವು ಕಾಣಿಸಿಕೊಂಡದ್ದು ನನ್ನನ್ನು ಇನ್ನಿಲ್ಲದಷ್ಟು ಕುಗ್ಗಿಸಿದೆ. ಇದರ ವಿರುದ್ಧ ನನ್ನ ಖಂಡನೆ ವ್ಯಕ್ತ ಪಡಿಸಲೇಬೇಕಾಗಿದೆ.
ಕಾವ್ಯ ಅವರ ಸಾವು ಆತ್ಮಹತ್ಯೆಯೇ ಆಗಿರಬಹುದು, ಕೊಲೆಯೇ ಆಗಿರಬಹುದು, ಅಥವಾ ಆತ್ಮಹತ್ಯೆಗೆ ಯಾರದಾದರೂ ಪ್ರೇರಣೆಯೂ ಅದರ ಹಿಂದೆ ಇರಬಹುದು. ಇಲ್ಲಿ ಆಳ್ವರು ಅಪರಾಧಿ ಎಂದು ಯಾರು ಹೇಳುತ್ತಿಲ್ಲ. ಆದರೆ ಒಂದು ವಿದ್ಯಾ ಸಂಸ್ಥೆ ಕೆಲವು ಕಾರಣಗಳಿಗಾಗಿ ಒಬ್ಬ ತರುಣಿಯ ಸಾವಿನಲ್ಲಿ ಸಂಶಯಾಸ್ಪದವಾಗಿ ನಿಂತಿರುವಾಗ, ಮತ್ತು ಆ ತರುಣಿಯ ತಾಯಿ ನಡು ಬೀದಿಯಲ್ಲಿ ನಿಂತು ನ್ಯಾಯಕ್ಕಾಗಿ ಬಾಯಿ ಬಡಿದು ಕೊಳ್ಳುತ್ತಿರುವಾಗ, ಆ ತಾಯಿಯ ಪರವಾದ ಯಾವ ಸಭೆಯಲ್ಲೂ ಕಾಣಿಸಿಕೊಳ್ಳದ ನೀವು, ಆಳ್ವರ ಅಳಲಿಗೆ ಕಿವಿಯಾಗಿ ಅವರ ಸಭೆಯಲ್ಲಿ ಕಾಣಿಸಿಕೊಂಡದ್ದು ಆಘಾತ ತಂದಿದೆ.
ಒಬ್ಬ ಸ್ತ್ರೀಪರ ಬರಹಗಾರ್ತಿಯಾಗಿ, ಒಬ್ಬ ಲೇಖಕಿಯಾಗಿ ನೀವು ಎಸಗಿದ ಕೃತ್ಯ ಅತ್ಯಂತ ಅಶ್ಲೀಲವಾದುದು. ಕನಿಷ್ಟ ಆ ಸಭೆಯಲ್ಲಿ ಭಾಗವಹಿಸದೇ ಇರುವ ಸ್ವಾತಂತ್ರ್ಯ ನಿಮಗಿತ್ತು.
(ಹೇಗೆ ಕಾವ್ಯ ಪರವಾಗಿ ಧ್ವನಿಯೆತ್ತದೆ ಇರುವ ಸ್ವಾತಂತ್ರ್ಯ ಇತ್ತೋ ಹಾಗೆ). ಆ ಮೂಲಕ ಎಲ್ಲವನ್ನೂ ಕಾನೂನಿಗೆ ವಹಿಸಿ ಬಿಡಬಹುದಿತ್ತು.
ಒಂದು ತರುಣಿಯ ಅಸಹಜ ಸಾವು ಸಂಭವಿಸಿದಾಗ (ಆಕೆಯ ತಾಯಿ ನ್ಯಾಯಕ್ಕಾಗಿ ಮಾಧ್ಯಮಗಳಲ್ಲಿ ಬೊಬ್ಬಿಡುತ್ತಿರುವಾಗ) ಅದನ್ನು ತನಿಖೆಗೆ ಒತ್ತಾಯಿಸೋದು ಸಹಜ ಕ್ರಮ.
ಇಂಥವರನ್ನು ಆರೋಪಿಯನ್ನಾಗಿಸಬೇಡಿ ಎಂದು ಒತ್ತಾಯಿಸಿಸೋದು ಅಸಹಜ ಕ್ರಮ ಮಾತ್ರ ಅಲ್ಲ, ಅನುಮಾನಕ್ಕೆಡೆ ಮಾಡುವ ಕ್ರಮ ಅದು. ತನಿಖೆಯ ದಾರಿ ತಪ್ಪಿಸುವ ಕ್ರಮ ಕೂಡ.
ನಿಮ್ಮನ್ನು ಆ ವೇದಿಕೆಯಲ್ಲಿ ಜನ ಗುರುತಿಸಿರೋದು ಒಬ್ಬ ಲೇಖಕಿಯಾಗಿ. ನೀವು ನಿಮ್ಮ ಅಪಾರ ಓದುಗರನ್ನು ಆ ವೇದಿಕೆಯ ಸೂತಕಕ್ಕೆ ತಳ್ಳಿ ಬಿಟ್ಟಿರಿ. ನಾನಂತೂ ಆ ಸೂತಕವನ್ನು ಈ ಬರಹದ ಮೂಲಕ ತೊಳೆದುಕೊಂಡಿದ್ದೇನೆ. ನೀವು ಅದು ಹೇಗೆ ತೊಳೆದು ಕೊಳ್ಳುತ್ತೀರೋ ನಿಮ್ಮೊಳಗಿನ ಆ ಸೃಜನ ಶೀಲ ಲೇಖಕಿಯೇ ಹೇಳಬೇಕು.
ಬಿ. ಎಂ. ಬಶೀರ್
ಸ್ತ್ರೀಯರದ್ದೂ ಒಂದು ದನಿಯಿದೆ, ಅದನ್ನು ಕೇಳುವುದಕ್ಕೂ ನಮ್ಮ ಲೇಖಕ, ಲೇಖಕಿಯರು ಕಿವಿಗೊಡಬೇಕು, ಎನ್ನುವುದು ಸಮ್ಮತ ಎನಿಸಿದರೆ, ಬಶೀರ್ ಅವರ ಅನಿಸಿಕೆಯನ್ನು ಅನುಮೋದಿಸಬೇಕಾಗುತ್ತದೆ. ಅಂಥವರಲ್ಲಿ ನಾನೂ ಒಬ್ಬನು.
ಚಂದ್ರ ಐತಾಳ
ಲಾಸ್ ಎಂಜಲಿಸ್