ರಂಗ ಕುಸುಮ ಪ್ರಕಾಶನವು ಪ್ರತಿ ವರ್ಷದಂತೆ ಈ ಸಲವು ತನ್ನ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಪ್ರತಿಸಲದಂತೆ ಕರ್ನಾಟಕದ ವಿವಿಧ ಭಾಗದ ರಂಗಭೂಮಿ ಸಾಹಿತ್ಯ ಹಾಗೂ ಲಲಿತಕಲಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕರ್ನಾಟಕ ಕಲಾನಿಧಿ ಪ್ರಶಸ್ತಿ, ರಂಗ ಕುಸುಮ ಕಲಾನಿಧಿ ಪ್ರಶಸ್ತಿ, ರಂಗಕಾವ್ಯ ಸಾಹಿತ್ಯ ಸಿರಿ ಪ್ರಶಸ್ತಿ ಹಾಗೂ ಹಿರಿಯರಿಗೆ ಗೌರವ ಸನ್ಮಾನ ನೀಡಿ ಅಭಿನಂದಿಸುತ್ತಿದೆ.
ಈ ಬಾರಿಯ ಕರ್ನಾಟಕ ಕಲಾನಿಧಿ ಪ್ರಶಸ್ತಿಗೆ ಭಾಜನರಾದ ನಾಲ್ಕು ಜನ ಸಾಧಕರಲ್ಲಿ ಶ್ರೀ ಪುರುಷೋತ್ತಮ ತಲವಾಟ ಅವರೂ ಒಬ್ಬರು.
ಆಧುನಿಕ ರಂಗಭೂಮಿ ವಲಯದಲ್ಲಿ ಮುಂಚೂಣಿಯಲ್ಲಿರುವ ಪ್ರಚಲಿತ ಹೆಸರು. ರಂಗಭೂಮಿಯಲ್ಲಿ ರಂಗು ರಂಗಾಗಿ ಪ್ರೇಕ್ಷಕರ ಮನಸೆಳೆಯುವಂತ ಪ್ರದರ್ಶನಗಳಿಗೆ ನೇಪಥ್ಯದಲ್ಲಿ ಕೆಲಸ ಮಾಡುವ ಕಾಣದ ಕೈಗಳೇ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಮನ್ನಣೆ ದೊರೆಯುವುದಿಲ್ಲ.
ಪ್ರಸಾದನ, ಬೆಳಕು, ವಸ್ತ್ರ ವಿನ್ಯಾಸ, ನಿರ್ದೇಶನ, ರಂಗ ಸಜ್ಜಿಕೆ ನಿರ್ಮಾಣ ಹಾಗೂ ಪರಿಕರ ತಯಾರಿಕೆಯಂಥ ಕುಶಲ ಕಲೆಯು ಜನ ಸಾಮಾನ್ಯ ಗಮನ ಸೆಳೆಯದಿರುವುದು ಮತ್ತು ಅಲ್ಲಿಯ ಕಲಾವಿದರಿಗೆ ಗೌರವ ದೊರೆಯದಿರುವುದು ವಿಪರ್ಯಾಸ.
ಅಂತಹ ನೇಪಥ್ಯ ಕ್ಷೇತ್ರದಲ್ಲಿ ಸಾವಿರಾರು ರಂಗ ಪ್ರದರ್ಶನಗಳಿಗೆ ಬೆಳಕು ನೀಡಿದ, ಬಣ್ಣ ಹಚ್ಚಿದ, ಬಟ್ಟೆ ತೊಡಿಸಿದ ಹೆಗ್ಗಳಿಕೆ ಶ್ರೀ ಪುರುಷೋತ್ತಮ ತಲವಾಟ ಅವರದು. ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರದವರಾದ ಇವರು ಜನಿಸಿದ್ದು 1949ರಲ್ಲಿ. ಫೈನ್ ಆರ್ಟ್ಸ್ ನಲ್ಲಿ ಪದವೀಧರರಾಗಿ ಕರ್ನಾಟಕದ ಮೂಲೆ ಮೂಲೆಯಲ್ಲಿನ ರಂಗ ತಂಡಗಳ ರಂಗ ಪ್ರದರ್ಶನಗಳಿಗೆ ಬೇಕಾದ ಪರಿಕರ ತಯಾಸಿ, ಬೆಳಕು ನೀಡಿ, ವಸ್ತ್ರ ವಿನ್ಯಾಸ ಮಾಡಿ ಸಲಹೆ ಸೂಚನೆಗಳನ್ನು ನೀಡಿ ಪ್ರದರ್ಶನಗಳನ್ನು ಯಶಸ್ವಿಗೊಳಿಸಿದ್ದಾರೆ.
ರಂಗಭೂಮಿಯಲ್ಲಿ ಈವಮ್ ಇಂದ್ರಜಿತ್, ಹುತ್ತವ ಬಡಿದರೆ, ಸಾಯೋ ಆಟ, ಗೃಹಸ್ತಾಶ್ರಮ, ಗರ್ಭಗುಡಿ ಸ್ವರ್ಣಮೂರ್ತಿ, ಮಹಾರಾತ್ರಿ ನಾಟಕ ನಿರ್ದೇಶಿಸಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸಿ ರಂಗಭೂಮಿಯ ವಿವಿಧ ಆಯಾಮಗಳ ಅನುಭವ ಹೊಂದಿದ್ದಾರೆ.
ಕಿರುತೆರೆ ಮತ್ತು ಸಿನಿಮಾದಲ್ಲೂ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಿಗೆ ಕಲಾಸೇವೆ (ಸೆಟ್ ಡಿಸೈನ್) ಮಾಡಿದ್ದಾರೆ. ನಟ, ನಿರ್ದೇಶಕ ರಂಗ ನೇಪಥ್ಯ ಕಲಾಕಾರ ಹಾಗೂ ರಂಗ ವಿನ್ಯಾಸಕಾರರಾಗಿ ಕಳೆದ 40 ವರ್ಷಗಳಿಂದ ರಂಗಭೂಮಿ ಸೇವೆ ಮಾಡುತ್ತಿರುವ ಶ್ರೀಯುತ ಪುರುಷೋತ್ತಮ ತಲವಾಟ ಅವರಿಗೆ
1999ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ
2017ರಲ್ಲಿ ಮೇಕಪ್ ನಾಣಿ ಪ್ರಶಸ್ತಿ
2018ರಲ್ಲಿ ಚಮನ್ ಲಾಲ್ ಮೆಮೋರಿಯಲ್ ರಾಷ್ಟ್ರೀಯ ಪ್ರಶಸ್ತಿ
ಆನ ರಮೇಶ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಜೊತೆಗೆ ನಾಡಿನ ಅನೇಕ ಸಂಘ ಸಂಸ್ಥೆಗಳಿಂದಲೂ ಗೌರವ ಸನ್ಮಾನ ಪಡೆದಿದ್ದಾರೆ. ಇವರ ಈ ಅನುಪಮ ರಂಗ ಸೇವೆಯನ್ನು ಪರಿಗಣಿಸಿ ರಂಗ ಕುಸುಮ ಪ್ರಕಾಶನವು ಡಿಸೆಂಬರ್ 20, 2020ರಂದು ತಾನು ಆಚರಿಸಿಕೊಳ್ಳುತ್ತಿರುವ ಸಾಹಿತ್ಯ ಸಂಗಮ ರಂಗ ಸಂಭ್ರಮ ಸಮಾರಂಭದಲ್ಲಿ ರಂಗ ಜಂಗಮ ಶ್ರೀ ಪುರುಷೋತ್ತಮ ತಲವಾಟ ಅವರಿಗೆ ಕರ್ನಾಟಕ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
ಈ ಗೌರವ ಸನ್ಮಾನವು ಇಲ್ಲಿಯವರೆಗಿನ ಅವರ ಸಾಧನೆಯನ್ನು ನೂರ್ಮಡಿಗೊಳಿಸಿ ಮತ್ತಷ್ಟೂ ರಂಗ ಸೇವೆಯನ್ನು ಮಾಡಲು ಚೈತನ್ಯ ಶಕ್ತಿ ನೀಡಲಿ ಮತ್ತು ಪ್ರಶಸ್ತಿ ಪುರಸ್ಕಾರಗಳು ದೊರೆಯುವಂತಾಗಲಿ ಎಂದು ಪ್ರಕಾಶನವು ಆಶಿಸುತ್ತದೆ.
0 ಪ್ರತಿಕ್ರಿಯೆಗಳು