ಸುಜಾತ ಉಮೇಶ್ ಶೆಟ್ಟಿ
ಹಾರಾಡುತ್ತಿತ್ತು
ಹಕ್ಕಿಯಂತೆ ಮನ
ಜೀಕುತ್ತಿತ್ತು
ಹರುಷದ ಬನ
ಎಲ್ಲಿಂದಲೋ ಬಂದು ಬದುಕ ಸಬ್ದವಾಗಿಸಿದೆ
ಸುತ್ತ ಮುತ್ತ ಲೇ ಸುಳಿಯುತ್ತಿರುವೆ
ತಲ್ಲಣಗೊಂಡ ಜೀವಕ್ಕೆ ನಿನ್ನಪ್ಪುಗೆ ಘಾಸಿಯಾಗಿವೆ
ಮುಂಗಾರು ಮಳೆಯಂತೆ, ನನ್ನ ಪಯಣವ ಮುದಗೊಳಿಸಲು ಮೆಲ್ಲನೆ ಹೆಜ್ಜೆ ಇಟ್ಟು ಬಾ…
ಹೊಂಬಿಸಿಲು ಹೊಳೆವಾಗ ಮಿಂಚಿ ಮಾಯವಾಗುವ ಕಾಮನಬಿಲ್ಲಿನಂತೆ ಬಾ…
ಪಥವಿಲ್ಲದೆ ನಾವಿಕನು ಸುಳಿಗೆ ಸಿಲುಕಿ
ದಡ ಸೇರಲು ಹೋರಾಡುತ್ತಿರುವೆ
ಕ್ಷಣ ಪ್ರತಿ ನಿಮಿಷಗಳ ಲೆಕ್ಕದಲ್ಲಿ
ಚಿತ್ತ ವಿಚಿತ್ರ ತಳಮಳದಿ,ಮನ ಮಸಣವಾಗಿವೆ
ನಮ್ಮ ಭೇಟಿಗೆ ಸರಿ ಸಮಯವಲ್ಲ ಈಗ
ಬರಗೆಟ್ಟ ನಿರ್ಲಜ್ಜನಾಗಿ ಮುಟ್ಟದಿರು ಇದೀಗ..
ಬೆತ್ತಲಾಗಿ ಜನಿಸಿದರೂ, ಹೂವ ಹೊದಿಕೆಯಲ್ಲಿ ವಿದಾಯಗೊಳ್ಳುವ ಆಸೆ, ನನಗೀಗ
ಅನಾಥತೆಯ ಸಂಕಟದ ಬೇಗೆಯಲ್ಲಿ
ನನ್ನನ್ನಿಟ್ಟು ನಕ್ಕು ಬಿಡ ಬೇಡ…
ಗಂಗೆಯಪವಿತ್ರ ಸ್ನಾನದ ಆಸೆಯಿಲ್ಲ ನನಗೆ
ತುಳಸಿ ಹನಿಯಾದರೂ ದಕ್ಕಲಿ ನನ್ನ ಪಾಲಿಗೆ..
ಮುಂಜಾವ ಇಬ್ಬನಿಗೆ ಕಾದ ರಶ್ಮಿಯ
ಮಂದಗತಿಯ ಬಿಸುಪಿನಂತಿರಲಿ
ಬಿರುಗಾಳಿ ಬೀಸಿ ಮನೆ ಚೆಂಡಾಡದೆ
ನಿದ್ದೆಯಲ್ಲಿ ಸದ್ದಿಲ್ಲದ ಬಿದ್ದ ಕನಸಿನಂತಿರಲಿ
ಹಿಂದು ಮುಂದಿಲ್ಲದ ಅನಾಮಿಕಾನoತೆ
ಹೊತ್ತೊಯ್ಯದಿರು,
ಅವೇಳೆಯಲ್ಲಿ ಚಿಂತೆಯ ಚಿತೆ ಏರಿಸದಿರು
ಮುಪ್ಪಡರಿ,ಬೆಚ್ಚನೆಯ ಗೂಡಲ್ಲಿರೆ
ನಿನ್ನ ಆಲಿಂಗನದೀ ವಿಲೀನಗೊಳಿಸು
ಹಸಿರ ಉಸಿರ ಮರೆತ ನಿಟ್ಟುಸಿರ ಬದುಕು,
ಸೋಲಿಸು ರಕ್ತ ಬೀಜಾಸುರನ ಸಂತತಿಯ
ಕಮರಿ ಹೋದ ಆಸೆಗಳೆಲ್ಲವ ಪುನಃ ಮೀಟಿ
ಜಗತ್ತಲ್ಲಿ ಮೂಡಿಬರಲಿ ಉಲ್ಲಾಸದ ಬೆಳಕು
(ಸುಜಾತಾ ಉಮೇಶ್ ಶೆಟ್ಟಿ ಅವರು ಕವಯಿತ್ರಿ ,ರಂಗಭೂಮಿಯಲ್ಲೂ ಆಸಕ್ತರು.’ಕಾನನದ ಹೂ’ ಇವರ ಕವನ ಸಂಕಲನ. ಸಂಘ ಸಂಸ್ಥೆಗಳಲ್ಲೂ ಕ್ರಿಯಾಶೀಲರು.)
0 ಪ್ರತಿಕ್ರಿಯೆಗಳು