ಸಾ. ದಯಾ
ನೀನಂದು ನುಡಿಸಿದ್ದ ಕೊಳಲ ಹೆಜ್ಜೆ ಹೆಜ್ಜೆಗಳು ಗಲ್ಲಿಗಲ್ಲಿಗಳಲ್ಲಿ ನಿನ್ನ ಕೊಳಲ ನಾದಕ್ಕೆ
ಎದೆ ಎದೆಯೊಳಗೂ ಅರಳಿದ ಪ್ರೀತಿ
ಈ ಮಣ್ಣ ನೋವು ನಲಿವು;
ಹೇಗೆ ಉಡುಗಿ ಹೋಯಿತು ತೊಟ್ಟ ಉಸಿರು.
ಎಲ್ಲಿ ಮರೆಯಾಯಿತು ನಿನ್ನ ಕೊಳಲು
ಗಲ್ಲಿಗಲ್ಲಿಗಳಲ್ಲಿ ಹೆಜ್ಜೆ ಊರಿ ಕುಣಿದಂತ ಕೊಳಲು
ಸಾಗರದ ಅಲೆಗಳಲ್ಲಿ ಪ್ರೀತಿಯ ಸಿಂಚನವನ್ನಿತ್ತ ಕೊಳಲು
ಗುಡ್ಡ ಬೆಟ್ಟಗಳ ಸವರಿ ಹೆಜ್ಜೇನು ಸುರಿದ ಕೊಳಲು
ಯಾವ ಕಾರಣಕೆ, ಹೇಗೆ ಲುಪ್ತವಾಯಿತು ಕೊಳಲು.
ಎದೆಯ ತಣಿಸಿದ ನಾದ
ರಾಧೆಯ ಒಲವಿನಲಿ ಮಿಂದ
ಗೋಪಿಕೆಯರ ಉಲಿದ
ಕೊಳಲ ಮೀಟಿದ ನಿನ್ನ ಕೈ ಬೆರಳು ಎಲ್ಲಿ?
ಯೋಗ ನಿದ್ರೆಯಿಂದೆದ್ದು ಬಾ ಯೋಗಿ
ಇಳಿದು ಬಿಡು ಜಗ ಜಟ್ಟಿಗಳ ಈ ಜಗಕೆ
ಅಖಾಡದಲಿ ಕೆಸರು ತುಂಬಿಹುದು
ಎದೆಯಿಂದ ಎದೆಗೆ ಹರಿವ ಪ್ರೇಮ ಸುಧೆಯ
ಮತ್ತೆ ನುಡಿಸಿಬಿಡು ಲಯಬದ್ಧ ಸಾಲುಗಳ.
ಕೊಳಲೊಂದು ರೂಪಕವಾದದು ಸಾಕು
ಜೀವ ಜೀವಗಳಲಿ ರಸಬಿಂದು ಸುರಿಸು
ನಿನ್ನ ಕೈ ಬೆರಳ ಕುಣಿಸು.
ಸಾ.ದಯಾ ಅವರು ಮುಂಬಯಿಯ ಹಿರಿಯ ಕವಿ. ಸಂಕ್ರಮಣ ಕಾವ್ಯ ಸ್ಪರ್ಧೆ ಯಲ್ಲಿ ಬಹುಮಾನಿತರು. ಜಾತ್ರೆಯ ಮರುದಿನ; , ಮಳೆ ಹನಿ ಮುತ್ತು; ,ಪಾಟಕ್; ,ಪೊಸ ಬೊಲ್ಪು; ಒಸರ್; ಉಬರ್; ಗುರುಗುಂಜಿ ಕೃತಿಗಳು.
ಸುಮಾರು ೨೦ಕ್ಕಿಂತಲೂ ಹೆಚ್ಚು ಕನ್ನಡ-ತುಳು ನಾಟಕ, ರೂಪಕ, ನೆರಳು ನಾಟಕಗಳ ರಚನೆ, ನಿರ್ದೇಶನ.
ಸರ್..ಕವಿತೆ ಚೆಂದ ಇದೆ
ಪರಿಚಿತವೆನಿಸುವ ಹುಡುಕಾಟದ ಅಭಿವ್ಯಕ್ತಿ… ಕೊನೆಯ “ಕೊಳಲೊಂದು ರೂಪಕವಾದದು ಸಾಕು” ಎಂಬಲ್ಲಿ ಝಗ್ಗನೆ ದೀಪ ಹೊತ್ತಿದಂತಾಯಿತು. ಅಭಿನಂದನೆ, ದಯಾ.