ಪಂಜು ಗಂಗೂಲಿ
ಇತ್ತೀಚೆಗೆ ಓದಿದ ಒಂದು ಕುತೂಹಲದ, ಆದರೆ ಈ ಸಮಯದಲ್ಲಿ ತೀರಾ ಅಗತ್ಯದ ವಿಷಯದ ಬಗೆಗಿನ ಪುಸ್ತಕ. ಅದೇ, ಹಿಂದೂ ಮುಸ್ಲಿಮರ ನಡುವಿನ ಬಾಂಧವ್ಯದ ವಿಚಾರ. ಪುಸ್ತಕ ಕೇವಲ ೮೪ ಪುಟಗಳದ್ದು. ಇಷ್ಟೂ ಪುಟಗಳಲ್ಲಿರುವುದು ಹಿಂದೂ-ಮುಸ್ಲಿಮರ ನಡುವಿನ ಬಾಂಧವ್ಯದ ಜೀವಂತ ಪ್ರಸಂಗಗಳು.
ಈ ಹಿಂದೂ-ಮುಸ್ಲಿಂ ಬಾಂಧವ್ಯ ಕೇವಲ ಇಂದು ನಿನ್ನೆಯದಲ್ಲ, ಇದಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಇದು ದೇಶದ ಗಡಿ, ಪ್ರಾಣದ ಹಂಗನ್ನೂ ಮೀರಿದ್ದು ಎಂಬುದನ್ನು ಪುಸ್ತಕದ ಪರ್ತಿಯೊಂದು ಪುಟವೂ ಹೇಳುತ್ತದೆ.
ಕಾಕತಳೀಯ ಎಂಬಂತೆ, ನಾನು ಆಂದೋಲನ ಪತ್ರಿಕೆಯ ‘ಈ ಜೀವ ಈ ಜೀವನ’ ಅಂಕಣದಲ್ಲಿ ಬರೆದ ಕೆಲವು ಪ್ರಸಂಗಗಳೂ ಈ ಪುಸ್ತಕದಲ್ಲಿದೆ. ಈ ಪ್ರಸಂಗಗಳ ಸಂಗ್ರಹಕ್ಕೆ ಲೇಖಕರು ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ. ಇಂದಿನ ದಿನಗಳ ಕೋಮುದ್ವೇಷದ ಬಗ್ಗೆ ಆತಂಕಿತ ಮನಸ್ಸುಗಳು ಓದಬೇಕಾದ ಪುಸ್ತಕ. ಲೇಖಕ ಎನ್ ಕೆ ಮೋಹನ್ ರಾಂ ಲಂಕೇಶ್ ಪತ್ರಿಕೆ ಮೂಲದವರು.
ಮುಂಗಾರು ಹಾಗೂ ಲಂಕೇಶ್ ಪತ್ರಿಕೆ ಮೂಲದಿಂದ ಬಂದ ಲೇಖಕರು, ಪತ್ರಕರ್ತರೆಲ್ಲ, ಕೆಲವೇ ಕೆಲವು ಉದಾಹರಣೆಗಳನ್ನು ಹೊರತಾಗಿಸಿ, ತಮ್ಮ ಮೂಲ ಸೆಲೆಗಳನ್ನು ಮರೆಯದೆ ವೃತ್ತಿಧರ್ಮವನ್ನು ಎತ್ತಿ ಹಿಡಿದೇ ನಡೆಯುತ್ತಿರುವುದು ಅಪ್ಯಾಯಮಾನದ ಸಂಗತಿ.
ಪುಸ್ತಕವನ್ನು ಓದಿದ ನಂತರ ಒಂದು ಪ್ರಶ್ನೆ (ಅದು ಹಿಂದೂ-ಮುಸ್ಲಿಮ್ ಬಾಂಧವ್ಯಕ್ಕೆ ಸಂಬಂಧಿಸಿದ್ದಲ್ಲ, ಈ ಪುಸ್ತಕಕ್ಕೂ ಸಂಬಂಧಿಸಿದಲ್ಲ)- ಈ ಕಕೇಶಿಯನ್ ಡಿಎನ್ ಎ ಮೂಲದವರು ಧರ್ಮ ದೇವರ ವಿಚಾರವಾಗಿ ಹೊಡೆದಾಟ, ಬಡಿದಾಟ, ಕೊಲ್ಲುವುದು, ಕೊಂದುಕೊಳ್ಳುವುದನ್ನೇ ತಮ್ಮ ಮುಖ್ಯ ದಿನಚರಿಯನ್ನಾಗಿಸಿಕೊಂಡು ಅದೆಂತಹ ರಕ್ತಸಿಕ್ತ ಬದುಕನ್ನು ನಡೆಸಿದ್ದರು ಮತ್ತು ಈಗಲೂ ನಡೆಸುತ್ತಿದ್ದಾರೆ ಎಂಬ ಬಗ್ಗೆ!
0 ಪ್ರತಿಕ್ರಿಯೆಗಳು