ಕೇಸರಿ ಹರವೂ ನಿರ್ದೇಶಿಸಿದ ಪುಟ್ಟಣ್ಣಯ್ಯನವರ ಈ ಸಾಕ್ಷ್ಯಚಿತ್ರ ಬಹಳಷ್ಟನ್ನು ಮುಂದಿಡುತ್ತದೆ.
ಅದರ ಜೊತೆಗೆ ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕ ಅವರು ಈ ಸಾಕ್ಷ್ಯಚಿತ್ರ ನೋಡಿ ಹಂಚಿಕೊಂಡ ಅನಿಸಿಕೆಯೂ ಇಲ್ಲಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಆರಂಭಿಸಿದ ಶ್ರೀ ಕೆ. ಎಸ್. ಪುಟ್ಟಣ್ಣಯ್ಯ ಇಂದು ದೇಶದ ಕೃಷಿ ಸಂಸ್ಕೃತಿ ಮತ್ತು ರೈತ ಚಳುವಳಿಯ ಅತಿಮುಖ್ಯ ದನಿಗಳಲ್ಲಿ ಒಬ್ಬರು. ಅವರ ಹೋರಾಟಗಳು ಮತ್ತು ನಿಲುವುಗಳ ಮೂಲಕ ಅವರ ವ್ಯಕ್ತಿತ್ವವನ್ನು ಅರಿಯುವ ಒಂದು ಆಪ್ತ ಪ್ರಯತ್ನ ಈ ಕಥೇತರ ಸಾಕ್ಷ್ಯಚಿತ್ರ.
-ಕೇಸರಿ ಹರವೂ
ಸರ್, ಎರಡು ಬಾರಿ ನೋಡಿದೆ ಈ ಸಾಕ್ಷ್ಯಚಿತ್ರವನ್ನು.
ಪುಟ್ಟಣ್ಣಯ್ಯನವರ ನೆಪದಲ್ಲಿ ಇಡೀ ರೈತಸಂಘದ ಚಳವಳಿಯ ಸಮಗ್ರ ಚಿತ್ರಣವನ್ನೇ ಅತ್ಯಂತ ಸ್ಥೂಲವಾಗಿ ಕಟ್ಟಿಕೊಟ್ಟಿದ್ದೀರಿ. ಒಟ್ಟಾರೆ ಬಹಳ ನೀಟ್ ಪ್ರೆಸೆಂಟೇಷನ್! ನಿಮ್ಮ ಪ್ರೊಫೆಶನಲಿಸಂನ ಅಚ್ಚು ಬಹಳ ಸ್ಫುಟವಾಗಿ ನಿರೂಪಿತವಾದಂತಿತ್ತು.
ನಾವು ಬಸವಣ್ಣನ ಕಾಲದ ಶರಣ ಚಳವಳಿಯ ಕತೆಗಳನ್ನೆಲ್ಲ ಕಣ್ಣುಬಾಯಿ ಬಿಟ್ಟು ಕೇಳ್ತೀವಿ. ಅದಕ್ಕೆ ಯಾವುದರಲ್ಲೂ ಕಮ್ಮಿಯಿಲ್ಲದ ಹಾಗೆ ಬಸವಣ್ಣನ ಆಶಯಗಳ ಮುಂದುವರಿದ ಭಾಗವಾಗಿ ಕಾಣ್ತಾ ಇದೆ ನನಗೆ ಈರೈತ ಚಳವಳಿ. ಈ ಚಿತ್ರ ನೋಡ್ತಿದ್ದರೆ ಪಕ್ಕನೆ ಆ ಕಾಲದ ಸಮಾಜ ಸುಧಾರಣೆಯ ಬೀಜಗಳು ಇಲ್ಲೆಲ್ಲೋ ಕಾದು ಮರುಹುಟ್ಟು ಪಡೆದಿವೆ ಅನ್ನಿಸ್ತು ನನಗೆ.
ಆ ಕಾಲದ ಮತ್ತು ಈ ಕಾಲದ ಸವಾಲುಗಳ ರೂಪ ಬೇರೆ ಬೇರೆ ಇರಬಹುದು. ಆದರೆ ಎಲ್ಲದರ ಮೂಲ ಕನಲಿಕೆ ಒಂದೇ! ಇದು ಜಾಗತೀಕರಣದ ವಿಷಗಾಳಿ ಸೋರಿಕೆಯಾದ ಅತೀವ ದುರಾಸೆಯ ಕೊಳ್ಳುಬಾಕ ಸಂಸ್ಕೃತಿಯ ತೃತೀಯ ಜಗತ್ತಿನ ಅಮಾನವೀಯ ಅಟ್ಟಹಾಸದೆದುರು ಸೆಣಸಬೇಕಾದ ನೆಲಬೇರುಗಳ ಬದುಕಿನ ಪ್ರಶ್ನೆ.
ಜಾತೀಯವಾಗಿ- ಆರ್ಥಿಕವಾಗಿ ಅಸಮತುಲಿತ ಸಮಾಜವೊಂದರ ವಿಕಲರೂಪ ಕಣ್ಣೆದುರಿಗಿ.ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಅಲ್ಲಲ್ಲಿ ನೆನಪಿಸುತ್ತಾ ಎಚ್ಚರಿಸುತ್ತಾ ನಡೆದಿದ್ದೀರಿ. ನಮಗೆ ದಕ್ಷಿಣ ಕನ್ನಡದೋರಿಗೆ ಪಕ್ಕನೆ ಈ ಪುಟ್ಟಣ್ಣಯ್ಯ ಹೊರನೋಟದಲ್ಲೊಬ್ಬ ಫ್ಯೂಡಲ್ ಥರ ಕಾಣಿಸೋದು ಸಕಜವೇ!
ಅದು ದೊಡ್ಡ ಸಮುದಾಯವೊಂದನ್ನು ಮುನ್ನಡೆಸಬೇಕಾದ ದೊಡ್ಡ ನಾಯಕನೊಬ್ಬನಿಗಿರಬೇಕಾದ ಹೆಚ್ಚುವರಿ ಮೀಸಲು ಗುಣ! ಅದರಲ್ಲೂ ಮಂಡ್ಯ ಶೈಲಿಯ ಆ ಗೆಸ್ಚರ್ ಇದೆಯಲ್ಲ, ಅದು ವಿಶಿಷ್ಟವಾದದ್ದು. ಹಲವಾರು ರೈತ ನಾಯಕರನ್ನು ಮಾತಾಡಿಸಿ ಎಲ್ಲೂ ಏಕವ್ಯಕ್ತಿ ಸ್ತುತಿಯಾಗದ ಹಾಗೆ ಎಚ್ಚರ ವಹಿಸಿದ್ದೀರಿ. ವೆಲ್ ಪ್ಲಾನ್ಟ್ ಸ್ಕ್ರಿಪ್ಟ್!
ಜೊತೆಗೆ ಬರೀ ಹೊಗಳಿಕೆಯಾಗದೆ ಪುಟ್ಟಣ್ಣಯ್ಯನವರ ಮಿತಿಗಳನ್ನು ದೇವನೂರು ಮಹಾದೇವ ಅಂಥವರು ಗುರುತಿಸಿದ್ದು ನಿಮ್ಮ ಉದ್ದೇಶದ ಬಗ್ಗೆ ಅನುಮಾನ ಬಾರದಂತೆ ತಡೆದಿದೆ. ಎಂದಿನ ಸಿದ್ಧಮಾದರಿಯ ಹಾಗೆ ಉದ್ದಕ್ಕೂ ಹಿನ್ನೆಲೆ ನರೇಶನ್ ಇಲ್ಲದಿರುವುದು ನಿಮ್ಮ ಉದ್ದೇಶಪೂರ್ವಕ ತಂತ್ರ ಅಂದುಕೊಂಡಿದ್ದೇನೆ.
*ಅಂದಹಾಗೆ, ಪುಟ್ಟಣ್ಣಯ್ಯನವರು ಶಾಸಕರಾದ ಮೇಲೆ ವಿಧಾನಸಭೆಯಲ್ಲಿ ಅನೇಕ ಬಾರಿ ಬಹಳ ಅದ್ಭುತವಾಗಿ ಮಾತಾಡಿದ್ದು ನೆನಪಿದೆ ನನಗೆ. ಅದೊಂದು ಬಹುಮುಖ್ಯ ರಾಜಕೀಯ ದಾಖಲೆ. ಅದನ್ನಿಲ್ಲಿ ತೋರಿಸಬಹುದಿತ್ತೇನೋ ಅನ್ಸಿತ್ತು ನನಗೆ.
*ಇನ್ನು ರೈತಸಂಘದ ಸದ್ಯದ ಚದುರಿಹೋದ ಪರಿಸ್ಥಿತಿಯ ಬಗ್ಗೆ ತಾವು ಗಮನ ಹರಿಸದಿದ್ದುದರ ಹಿನ್ನೆಲೆ ಯಾಕೋ ಉದ್ದೇಶಪೂರ್ವಕ ಅನ್ನಿಸುತ್ತಿದೆ. ಪುಟ್ಟಣ್ಣಯ್ಯನವರ ವರ್ಚಸ್ಸಿಗೆ ಅದರಿಂದ ಕುಂದಾಗುವ ಪ್ರಮೇಯ ಬಾರದೆಂದೇ ನನ್ನ ಅನಿಸಿಕೆ. ಗೊತ್ತಿಲ್ಲ ಸರ್, ಈ ಕಾಂಟೆಕ್ಸ್ಟ್ ಇಲ್ಲಿನ ಸನ್ನಿವೇಶಕ್ಕೆ ಎಷ್ಟು ರಿಲವೆಂಟು ಅಂತ. ಚಿಂತಿಸಬೇಕು ನಾನೂ.
ಒಂದಂತೂ ನಿಜ. ಇದು ಕಾಲದ ಅಗತ್ಯ. ಹೆಚ್ಚು ಉತ್ಪ್ರೇಕ್ಷೆಯಿಲ್ಲದ ಈ ಪ್ರಯತ್ನ ಕೂಡ ಚಳವಳಿಯ ಭಾಗವೇ ಅಂದುಕೊಂಡಿದ್ದೇನೆ.
0 ಪ್ರತಿಕ್ರಿಯೆಗಳು