ನಿಖಿಲ್ ಕೋಲ್ಪೆ
ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ನಾನು ಮೊದಲು ನೋಡಿದ್ದು ಮಾತನಾಡಿಸಿದ್ದು 17 ವರ್ಷಗಳ ಹಿಂದೆ ಮೈಸೂರಿನ ಕಲಾಭವನದಲ್ಲಿ ನಡೆದಿದ್ದ ಸಭೆಯೊಂದರಲ್ಲಿ
ರೈತರ ಸಮಸ್ಯೆಗಳು, ಚಳವಳಿಯ ಬಿಕ್ಕಟ್ಟುಗಳ ಕುರಿತು ಅವರ ಅನುಭವ ತುಂಬಿದ್ದ ನಿರರ್ಗಳ ಮಾತುಗಳನ್ನು ಕೇಳಿ ಬೆರಗಾಗಿದ್ದೆ!
ನಂಜುಂಡಸ್ವಾಮಿ ಮತ್ತು ಪುಟ್ಟಣ್ಣಯ್ಯ ಬಣಗಳು ಒಂದಾಗಬೇಕು ಎಂಬುದು ಎಲ್ಲರ ಆಸೆಯಾಗಿತ್ತು. ಭಾ಼ಷಣದ ನಂತರ ಪ್ರಶ್ನೆಗಳಿದ್ದರೆ ಚೀಟಿ ಕಳಿಸಿ ಎಂದರು! ನಾನು ‘ಎರಡೂ ಬಣಗಳ ಒಗ್ಗಟ್ಟಿಗೆ ನೀವು ಯಾಕೆ ಪ್ರಯತ್ನಿಸಬಾರದು?’ ಎಂದು ಕೇಳಿದ್ದೆ.
ಅದಕ್ಕೆ ಉತ್ತರಿಸಿದ ಅವರು, ‘ನನ್ನ ಮನಸ್ಸಿನಲ್ಲಿ ಇರುವುದೂ ಅದೇ. ಅವರು ಒಪ್ಪಬೇಕಲ್ಲ! ನನ್ನ ಹತ್ತಿರ ಹಣ ಇಲ್ಲ. ಈ ಚೀಟಿ ಕಳಿಸಿದವರು ಕಾರಿನ ಬಾಡಿಗೆ ಕೊಡುವುದಾದರೆ, ಈಗಲೇ ಹೋಗೋಣ. ನಾನೂ ಹೇಳುತ್ತೇನೆ. ನೀವೂ ಹೇಳಿನೋಡಿ!’ ಎಂದು ತುಸು ವ್ಯಂಗ್ಯವಾಗಿ ಹೇಳಿದರು! ನಾನು ಪೆಚ್ಚಾದೆ!
ಆಗ ತಾನೇ ಜನವಾಹಿನಿ ಬಿಟ್ಟಿದ್ದ ನನ್ನಲ್ಲಿ ಚಿಲ್ಲರೆ ಬಿಟ್ಟರೆ ಬೇರೇನೂ ಇರಲಿಲ್ಲ! ಇದ್ದಿದ್ದರೆ, ಒಂದು ಕೈ ನೋಡುತ್ತಿದ್ದೆನೋ ಏನೋ!
ನಡುವಿನ ವಿರಾಮದಲ್ಲಿ ಅವರನ್ನು ಕೆಲವರು ಮುತ್ತಿಕೊಂಡರು. ಅದು ಜಾಗತೀಕರಣದ ಆರಂಭ ಕಾಲ. ಅವರು ವಿದೇಶಿ ಬಂಡವಾಳ, ನಮ್ಮ ಮಾರುಕಟ್ಟೆ ವಿದೇಶೀಯರ ಪಾಲಾಗುತ್ತಿರುವುದು ಇತ್ಯಾದಿ ಮಾತನಾಡಿದರು.
ಸಭೆಯಲ್ಲಿ ಅವರ ವ್ಯಂಗ್ಯದಿಂದ ಚುಚ್ಚಿದಂತಾಗಿದ್ದ ನಾನೂ ವ್ಯಂಗ್ಯವಾಗಿ ‘ಈ ಹೊತ್ತಿಗೆ ಕೂಡಾ ವಿದೇಶಿ ಬಂಡವಾಳ ನಿಮ್ಮ ಹೃದಯಕ್ಕೆ ಹತ್ತಿರವಾಗಿದೆ’ ಎಂದೆ! ಅವರು ಅವಕ್ಕಾಗಿ ಗಡುಸಿನಿಂದಲೇ ‘ಏನು?’ ಎಂದು ಗದರಿದರು! ನಾನು ‘ನಿಮ್ಮ ಜೇಬಿನಲ್ಲಿರುವ Raynolds ಪೆನ್ನು ಫ್ರೆಂಚ್ collaborationದ್ದು’ ಅಂದೆ!
ಅವರು ಪೆನ್ನನ್ನು ಹೊರತೆಗೆದು ನಸುನಗುತ್ತಾ ‘ಹೌದಲ್ಲ?’ ಎಂದವರೇ, ನನ್ನ ಏನು ಎತ್ತ ವಿಚಾರಿಸಿದರು. ಪರಿಚಯವಾಯಿತು.
ಈಗ ಅವರ ನಿಧನದ ಹೊತ್ತಿನಲ್ಲಿ ಅವರ ವಿಚಾರಗಳ ಪ್ರಖರತೆ, ಅನುಭವ, ಅಳ ಇತ್ಯಾದಿಗಳ ಬಗ್ಗೆ ಯೋಚಿಸುತ್ತಾ ಕುಳಿತಿದ್ದೇನೆ! ದುಃಖವಾಗುತ್ತಿದೆ.
0 ಪ್ರತಿಕ್ರಿಯೆಗಳು