ಪುನೀತ್ ಅಪ್ಪು
ಕೆ.ಎಸ್ ಪುಟ್ಟಣ್ಣಯ್ಯ ನೊಗವನ್ನು ಕೆಳಗಿಳಿಸಿ ನಡೆದೇ ಬಿಟ್ಟರು.
ಹಿಂದೆ ಬದುಕಿನಲ್ಲಿ ಆತ್ಮವಿಶ್ವಾಸ ಕಳೆದು ಕೊಳ್ಳುವ ಸಮಯದಲ್ಲಿ ಮನೆಯ ಪಕ್ಕದಲ್ಲಿರುವ ಹಟ್ಟಿಯಲ್ಲಿ ಕುಳಿತುಕೊಳ್ಳುತ್ತಿದ್ದೆ.
ಒಂದು ಕಾಲದಲ್ಲಿ ಜೋಡೆತ್ತುಗಳು ಮತ್ತು ಪಕ್ಕದ ಭಾಗದಲ್ಲಿ ಕಟ್ಟಿ ಹಾಕಿದ್ದ ದನ ಮತ್ತು ಕರು ಈಗ ಹಟ್ಟಿಯಲ್ಲಿಲ್ಲ. ತನ್ನ ಕೊನೆಯ ದಿನಗಳವರೆಗೂ ಬೇಸಾಯವನ್ನು ತಪಸ್ಸೆಂದು ತಿಳಿದಿದ್ದ ಎಡಪಂಥೀಯ ನಿಷ್ಠುರವಾದಿ ತಂದೆ ಬಳಸುತ್ತಿದ್ದ ನೇಗಿಲು, ನೊಗ ಮತ್ತು ಬಾರುಕೋಲು ಈಗ ಗೆದ್ದಲು ಹಿಡಿದಿದೆ.
ಸವೆದು ಹೋದ ನೇಗಿಲ ಹಿಡಿಯಲ್ಲಿ ಅಪ್ಪನ ಕೈಯ ಅಚ್ಚುಗಳನ್ನು ಹುಡುಕುತ್ತೇನೆ.
ಹಟ್ಟಿ ಬಿಕೋ ಎನ್ನುತ್ತಿದೆ. ಒಮ್ಮೆಲೆ ಬೊಳ್ಳ ಎತ್ತು ಕಾಲನ್ನು ನೆಕ್ಕಿದ ಅನುಭವವಾಗಿ ಮೈಯ್ಯೆಲ್ಲಾ ಕಚಗುಳಿ ಅನುಭವಿಸುತ್ತೇನೆ.
ಎತ್ತುಗಳಿಗೆ ಅಕ್ಕಚ್ಚಿ , ನೀರು ಕುಡಿಯಲು ಇರಿಸಿದ್ದ ದೊಡ್ಡ ಕಲ್ಲಿನ ಕುಳಿಯಲ್ಲಿ ಆಮೆ ಮರಿಗಳನ್ನು ಯಾರಿಗೂ ಗೊತ್ತಿಲ್ಲದಂತೆ ಸಾಕುತ್ತಿದ್ದುದು ನೆನಪಾಗುತ್ತಿದೆ. ಆ ಎತ್ತುಗಳು ಕೂಡಾ ನನ್ನ ರಹಸ್ಯಗಳನ್ನು ಮುಚ್ಚಿಟ್ಟು ನನ್ನ ಆಟಗಳಿಗೆ ಸಹಕರಿಸುತ್ತಿದ್ದುದು ನೆನಪಾಗಿ ಕಣ್ಣು ಮಂಜಾಗುತ್ತದೆ.
ಇವತ್ತು ಹಟ್ಟಿಯಲ್ಲಿ ಎತ್ತುಗಳಿಲ್ಲ, ರೈತನಿಲ್ಲ. ಸ್ಟಾರ್ ಹೊಟೇಲುಗಳಲ್ಲಿ ಊಟ ಮಾಡುವಾಗ ಬೆವರಿನಲ್ಲಿ ತೊಯ್ದು ಹೋದ ಅಪ್ಪನ ಮುಖ ನೆನಪಾಗುತ್ತದೆ.
ಈ ಅನ್ನವನ್ನು ಬೆಳೆಸಿದ ರೈತ ಕೂಡಾ ನನ್ನ ತಂದೆಯಂತೆಯೇ ಒಬ್ಬನಾಗಿರಬಹುದೇ ಎಂಬ ಭಾವ ಮೂಡುತ್ತದೆ. ಇವತ್ತು ಪುಟ್ಟಣ್ಣಯ್ಯನವರನ್ನು ಕಳೆದುಕೊಂಡು ಕರುನಾಡಿನ ಹಟ್ಟಿ ಬಡವಾಗಿದೆ. ಮನಸ್ಸು ಭಾರವಾಗುತ್ತಿದೆ, ಯಥಾ ಪ್ರಕಾರ ಹಟ್ಟಿಯತ್ತ ಸಾಗುತ್ತಿದ್ದೇನೆ.
0 ಪ್ರತಿಕ್ರಿಯೆಗಳು