‘ನೆನಪಿನ ಸುರುಳಿ ತೆರೆದಾಗ’ ಎಚ್ ಎಸ್ ದೊರೆಸ್ವಾಮಿ ಅವರ ನೆನಪುಗಳ ಗುಚ್ಛ.
‘ಲಂಕೇಶ್ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ. ೧೯೯೦ರಲ್ಲಿ ಹೊರಬಂದ ಈ ಕೃತಿ ಬಹುಷಃ ದೊರೆಸ್ವಾಮಿಯವರ ಬದುಕಿನ ಬಗ್ಗೆ ಇರುವ ಏಕೈಕ ಅಧಿಕೃತ ಕೃತಿ.
೧೨೫ ರೂ ಬೆಲೆಯ ಈ ಕೃತಿಯನ್ನು ಕೊಳ್ಳಲು ಸಂಪರ್ಕ ಸಂಖ್ಯೆ 080 26676427
ಈ ಕೃತಿಗೆ ದೊರೆಸ್ವಾಮಿ ಅವರು ಬರೆದ ಲೇಖಕನ ಮಾತು ಇಲ್ಲಿದೆ-
ನಾನು ದಿನಚರಿ ಬರೆಯುವ ಜಾಯಮಾನದವನಲ್ಲ; ಎಂದೂ ಆ ಪ್ರಯತ್ನ ಮಾಡಿಲ್ಲ. ನಡೆದ ಕೆಲವು ಸಂಗತಿಗಳು ನನ್ನ ಮನಸ್ಸಿನಲ್ಲಿ ಘನಿಷ್ಟವಾಗಿ ಉಳಿದುಹೋದವು. ಅವುಗಳನ್ನು ಪ್ರಸಂಗ ಬಂದಾಗ ಓದುಗರ ಮುಂದಿಡುವ ಇಚ್ಚೆಯೂ ನನಗಿತ್ತು. ನನ್ನ ಕವಿಮಿತ್ರ ನಿಸಾರ್ ಅಹಮದ್ ಅವರು ನನ್ನ ನೆನಪುಗಳನ್ನು ದಾಖಲಿಸಲು ಈ ಮೊದಲೆ ಸಲಹೆ ಮಾಡಿದ್ದರು. ಈ ಹೊತ್ತಗೆಯಲ್ಲಿ ಬಂದಿರುವ ಪ್ರಸಂಗಗಳನ್ನೂ, ಮಾತುಕತೆಗಳನ್ನೂ ಹೇಳುವಾಗ ಅವು ನಡೆದ ದಿನ, ತಿಂಗಳು, ವರ್ಷಗಳನ್ನು ನಮೂದಿಸುವ ಗೋಜಿಗೆ ನಾನು ಹೋಗಿಲ್ಲ. ಆದರೂ ಅವನ್ನೆಲ್ಲ ಬಹುಮಟ್ಟಿಗೆ ಒಂದು ಕ್ರಮದಲ್ಲಿ ನಿರೂಪಿಸಿದ್ದೇನೆಂದು ಹೇಳಬಲ್ಲೆ. ಈ ನನ್ನ ನೆನಪಿನ ಸುರುಳಿ ಬಹಳ ಮೌಲಿಕವಾದದ್ದು ಎಂಬ ಭ್ರಾಂತಿ ನನಗಿಲ್ಲ. ಅವು ಓದಿಸಿಕೊಂಡು ಹೋಗುತ್ತವೆ ಎಂಬ ಭರವಸೆಯನ್ನು ಮಾತ್ರ ನೀಡಬಲ್ಲೆ. ಇದು ಗಟ್ಟಿ ಸಾಹಿತ್ಯವಲ್ಲ, ಪೆಪ್ಟರ್ ಮಿಂಟ್ ಚೀಪಿದಷ್ಟೇ ತೃಪ್ತಿ ಕೊಡಬಲ್ಲದು ಎಂಬ ಅರಿವು ನನಗುಂಟು.
ಈ ಪುಸ್ತಕಕ್ಕೆ ಮೌಲಿಕವಾದ ಮುನ್ನುಡಿ ಬರೆದುಕೊಟ್ಟು ಹರಸಿದ ನನ್ನ ಆತ್ಮೀಯ ಮಿತ್ರರಾದ ಇ.ಆರ್. ಸೇತೂರಾಂ ಅವರಿಗೆ ನನ್ನ ನೆನಕೆಗಳು. ಪುಸ್ತಕ ಅಚ್ಚಾಗುವ ಮೊದಲು, ಪುಟಗಳ ಮೇಲೆ ಕಣ್ಣಾಡಿಸಿ, ಪದದೋಷಗಳನ್ನು ತಿದ್ದಿದ, ನನ್ನ ಬಹುಕಾಲದ ಗೆಳೆಯರೂ, ಪ್ರಭಾ ಮುದ್ರಣಾಲಯದ ಒಡೆಯರೂ ಆದ ಶ್ರೀ ಕೃಷ್ಣಾಚಾರ್ಯರಿಗೂ ನನ್ನ ಅನಂತ ವಂದನೆಗಳು.
ಎಚ್.ಎಸ್. ದೊರೆಸ್ವಾಮಿ
ಒಳ್ಳೆಯ ಪುಸ್ತಕ ಸಲಹೆ ಮಾಡಿರುವಿರಿ. ಕೊಂಡು ಓದುವೆ
ಒಳ್ಳೆಯ ಪುಸ್ತಕ ಸಲಹೆ ಮಾಡಿರುವಿರಿ.. ಕೊಂಡು ಓದುವೆ..