ನೂತನ ದೋಶೆಟ್ಟಿ ಕವಿತೆ- ಸಂಜೆಯ ನಂತರ..

ಹೆಣ್ಣುಗಳು ಸಂಜೆಯ ನಂತರ ಹೊರಬರಬಾರದೆಂಬ ಆಜ್ಞೆಯ ಹಿನ್ನೆಲೆಯಲ್ಲಿ

ನೂತನ ದೋಶೆಟ್ಟಿ

ಸಂಜೆಯಾಗುತ್ತಿದ್ದಂತೆ
ಗಲ್ಲಿಗಲ್ಲಿಗಳಲ್ಲೂ
ಮಹಾದ್ವಾರಗಳು ಎದ್ದು ನಿಲ್ಲುತ್ತವೆ
ಕಾವಲಿಗಾಗಿ.

ಆರತಿಗೊಬ್ಬ ಮಗಳ ಕಾಲುಗಳಲ್ಲಿ
ಚಿನ್ನದ ಸಂಕೋಲೆಗಳ ಕಟ್ಟಿ
ಕೀರುತಿಗೊಬ್ಬ ಮಗನ ಕೈಯಲ್ಲಿ
ಬೀಗವನ್ನು ಕೊಡುತ್ತವೆ ಈ ಗಲ್ಲಿಗಳು
ಎದ್ದು ನಿಂತ ಮಹಾದ್ವಾರಗಳು ಹೇಳುತ್ತವೆ
ಸಂಕೋಲೆಯ ಕಥೆಗಳ

ಕತ್ತಲಿನಲ್ಲಿ ಭದ್ರವಾಗುತ್ತದೆ ಅದು
ತುಟಿಯ ರಂಗಿನಲ್ಲಿ ರಕ್ತ ಒಸರಿಸುತ್ತದೆ
ದೇಹವನ್ನು ಪೂರ್ತಿ ಮುಚ್ಚುವ
ಕಪ್ಪು ನಿಲುವಂಗಿಯಾಗಿ
ಕಣ್ಣಿಗೊಂದು ಕಿಂಡಿಯಾಗುತ್ತದೆ
ದೇಹದ ಉಬ್ಬು ತಗ್ಗುಗಳಲ್ಲಿ
ಹಸಿದ ನೋಟವಾಗಿ ಕೊಯ್ಯುತ್ತದೆ
ದನಿಯೆತ್ತಿದರೆ
ದೇಹ ಹೊಕ್ಕು ನರಳಿಸುತ್ತದೆ.

ಇಚ್ಛಾರೂಪಿ ಮಾಯಾವಿ
ಈ ಸಂಕೋಲೆ
ಗಂಡೇ ಇರಬೇಕು
ಅದರಲ್ಲೂ ಕ್ರೂರಿಯೇ ಸರಿ.
ಹೆಣ್ಣಲ್ಲವೇ ಅಲ್ಲ
ಅವಳದು ಬಿಡುಗಡೆಯ ಹಾದಿ.

ಎದ್ದು ನಿಂತ ಮಹಾದ್ವಾರಗಳು ವಿಷಾದಿಸುತ್ತವೆ
ಕದಗಳಿರುವುದು ತೆರೆಯಲು
ಬೀದಿಯಲ್ಲಿ ನಿಂತು ಎಂಥ ಕಾವಲು
ಮುಚ್ಚಿದ ಕದಗಳ ಹಿಂದಿನ ನರಳಾಟ ಕೇಳಿಯೂ.

ಅವಳ ಕಾವಲೆಂದರೆ ಅರಿವಿಗೆ ಕಾವಲು
ಹಾಕುವುದಾದರೂ ಸಾಧುವೆ?
ಕತ್ತಲಾಗುವುದು ಇಡಿಯ ಜಗಕೆ
ಅವಳಿಗೊಂದು ಬೇರೆ ಕತ್ತಲ ಜಗವೇ?!
ಬೆಳಕಿನ ಕಿರಣ ಕಸಿದರೆ
ಮಸುಕಾಗುವುದು ಬೆಳಕೇ
ನೆನಪಿರಲಿ ನಿನಗೆ ಸಂಕೋಲೆಯೆ.

‍ಲೇಖಕರು Admin

August 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ನಾಗರಾಜ್ ಹರಪನಹಳ್ಳಿ

    ಕತ್ತಲೊಳಗೆ ಕತ್ತಲಿನ ದನಿಯನ್ನು ಕಡೆದಿಡುವ ಕವಿತೆ..
    ಬೆಳಕಿನ ಕಿರಣ ಕಸಿಯಲು ಸಾಧ್ಯವಿಲ್ಲ ಎಂಬ ಆಶಾವಾದ ಸಹ ಕವಿತೆಯಲ್ಲಿದೆ

    ಪ್ರತಿಕ್ರಿಯೆ
    • ನೂತನ ದೋಶೆಟ್ಟಿ

      ಧನ್ಯವಾದಗಳು ನಾಗರಾಜ್ ಅವರೆ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: