ಎಲ್.ಸಿ.ನಾಗರಾಜ್
‘ ಇದುವರೆಗೆ ನೋಡ್ತಾ ಇದೀನಿ ನಿನ್ನ , ನೀನ್ಯಾಕೆ ದೇವಸ್ಥಾನಗಳಿಗೆ ಹೋಗುವುದಿಲ್ಲ , ನಿನಗೆ ನಂಬಿಕೆ , ವಿಶ್ವಾಸಗಳೇ ಇಲ್ವಾ , are you an atheist ?’
ಇಲ್ಲ , ನಾನು ನಿರೀಶ್ವರವಾದವನ್ನ ನಂಬಿದವನಲ್ಲ ‘
ಅದೊಂದು ಕುರುಚಲು ಕಾಡಿನಂಥ ಪ್ರದೇಶ , ಅಲ್ಲಿ ಕೆಲವು ಆದಿವಾಸಿ ಪಂಗಡಗಳು ಸಣ್ಣ ಭೂ ಹಿಡುವಳಿಗಳಲ್ಲಿ ಬೇಸಾಯ ಮಾಡುತ್ತಿದ್ದರು . ಹತ್ತಿರದ ಹಳ್ಳಿಯ ಪಂಚಾಯತಿ ಸದಸ್ಯನ ಮನೆಯ ಮುಂದೆ ಮೋಟಾರ್ ಸೈಕಲ್ ನಿಲ್ಲಿಸಿ , ಎರಡು ಗುಡ್ಡಗಳ ನಡುವೆ ಮನುಷ್ಯರು , ದನಕರುಗಳು ನಡೆದು ಮೂಡಿದ ಹಾದಿಯಲ್ಲಿ ನಡೆಯುತ್ತ ಇದ್ವಿ
ಕಾಡು ಮತ್ತು ಮನುಷ್ಯನ ಬೇಸಾಯ ಹಿಡುವಳಿಗಳ ಸಂಗಮ ಪ್ರದೇಶವನ್ನ ಪರಿಸರ ಶಾಸ್ತ್ರಜ್ಞರು ecotones ಅಂತಾ ಕರೆಯುತ್ತಾರೆ. ಅಲ್ಲಿ ಆ ಪ್ರದೇಶದ ಮೂಲನಿವಾಸಿ ಜನ ಕೂಡಿದ್ದರು , ಮುತ್ತುಗದ ಮರ ಹೂಶಲಾಕೆಗಳು ಬೆಂಕಿಯ ಜ್ವಾಲೆಯಂತೆ ನಿಗಿ ನಿಗಿ ಹೊಳೆಯುತ್ತಿದ್ದವು , ಅಲ್ಲಿ ಹೊಂಗೆಯ ಮರದ ಸೊಪ್ಪನ್ನ ಹೊದಿಸಿ ಛಾವಣಿ ನಿರ್ಮಿಸಿದ ಒಂದು ಮೂರಡಿ ಎತ್ತರದ ದೇಗುಲ ಕಂಡಿತು , ಅದರ ಸುತ್ತಲೂ ಜನ , ಮೂರು ಕಲ್ಲುಗಳನ್ನಿಟ್ಟು ಮಾಡಿದ ಒಲೆಯ ಮೇಲೆ ಗಂಡಸರು ಅಡುಗೆ ಮಾಡುತ್ತಿದ್ದಾರೆ .
ಗುಡ್ಡದಲ್ಲಿ ಒಂದು ಬಂಡೆಯ ಸರುವಿನಲ್ಲಿ ಮಹಿಳೆಯರು ಕುಂತಿದ್ದರು , ಬಂಡೆಗಳ ನಡುವೆ ಸಿಗಹಾಕಿದ್ದ ಒಂದು ಬಿದಿರಿನ ಕೊಳವೆಗೆ ಬಾಯಾನಿಸಿ ಹತ್ತಾರು ಬಿಂದಿಗೆಗಳು ,ನೀರಿಗಾಗಿ ಸ್ಪರ್ಧೆಯಿಲ್ಲದ ಸಾವಧಾನ ; ತುಂಬುವುದಕ್ಕಾಗಿ ಕಾಯುತ್ತ ಮಾತನಾಡುತ್ತಿದ್ದರು.
‘ ಈಗ ದೇವಸ್ಥಾನದ ಕಡೆಗೇ ಅಲ್ವಾ ನಾವು ಹೋಗ್ತಿರೋದು, ಅದು ಇದೊಂದೇ ದಿನ ಇರುವ ದೇವಸ್ಥಾನ , ನಾಳೆಯ ವೇಳೆಗೆ ಬಾಡಿ ಉದುರುತ್ತದೆ ; ಬಯಲಲ್ಲಿ ಇಟ್ಟಾಡುತ್ತಿದ್ದ ಕಲ್ಲುಗಳು ಮನುಷ್ಯನ ಕೈಯ ನೀರಿನಿಂದ ಪವಿತ್ರಗೊಂಡು ಇದೊಂದು ದಿನದ ಮಟ್ಟಿಗೆ ದೇವರಾಗಿ , ಮತ್ತೆ ನಾಳೆಯಿಂದ ಬಯಲಾಗಿ , ಬಯಲಲ್ಲಿ ಇಟ್ಟಾಡುತ್ತವೆ
‘ ನೀನ್ಯಾಕೆ ಚರ್ಚಿಗೆ ಹೋಗುವುದಿಲ್ಲ ? ‘
‘ಡಿ.ಹೆಚ್ . ಲಾರೆನ್ಸನ ‘ Apocalypse ಓದಿದ್ದರೆ , ನಾನ್ಯಾಕೆ ಚರ್ಚಿಗೆ ಹೋಗುವುದಿಲ್ಲ ಎಂಬ ನಿನ್ನ ಪ್ರಶ್ನೆಗೆ ಉತ್ತರ ಸಿಗುತ್ತದೆ , ಬೈಬಲ್ಲಿನಲ್ಲಿ ಈಗಾಗಲೇ ಇರುವ ಕಾವ್ಯಮಯ ಸ್ತೋತ್ರಗಳು ನನ್ನ ಭಾಷೆಯ ಲಯಗಳ ತುಳಿಯುವುದನ್ನ ನಾನೊಲ್ಲೆ
ನನ್ನದೂ ಅದೇ ಕತೆ , ಒಂದು ಸಲ ನಿರೀಶ್ವರವಾದವನ್ನ ಸ್ವೀಕರಿಸಿಬಿಟ್ಟರೆ ಒಂದು ಪಕ್ಷಿಯ ಕೂಗಿನಲ್ಲಿರುವ ಕಾಳಿನ ಹಂಬಲ ಕೇಳದಂತಾಗಿಬಿಡುತ್ತದೆ ; ಸಣ್ಣ ಬೀಜದೊಳಗೆ ವಟವೃಕ್ಷದಂತೆ ಅಡಗಿರುವ ಮರವೊಂದರ ಕನಸು ಕಾಣೆಯಾಗಿಬಿಡುತ್ತದೆ
‘ ಈ ದೇವತೆಯ ಹೆಸರೇನು ? ‘
‘ ಮನುಷ್ಯರು ಒಂದು ಎಂಥದೋ ಹೆಸರನ್ನ ಇಟ್ಟಿರುತ್ತಾರೆ , ಅದು ಮುಖ್ಯವೋ ಅಮುಖ್ಯವೋ ನಾನು ಕಾಣೆ
‘ ಯಾವುದು ಮುಖ್ಯ ‘
‘ ಹತ್ತಾರು ಕುಟುಂಬಗಳು ಒಂದು ಕಡೆ ಬೆಟ್ಟದಿಂದ ನೀರು ಒಸರುವ ಕಡೆ ಒಲೆಯಿಟ್ಟು ಅಡುಗೆ ಮಾಡುವುದು , ಜೊತೆಯಾಗಿ ಊಟ ಮಾಡುವುದು ತಮ್ಮ ಸಮುದಾಯಕ್ಕೆ ಒಂದು ಭಾವನಾತ್ಮಕ ರಕ್ಷಣೆಯನ್ನ ಸೃಷ್ಟಿ ಮಾಡಿಕೊಳ್ಳುವುದು ‘
‘ಭಾವನಾತ್ಮಕ ರಕ್ಷಣೆ ದೇವರಿಗೆ ಸರಿ ಸಮಾನವಾದುದ , ಅದು ಅಮಲಿನ ಪದಾರ್ಥ ಅಲ್ವಾ ಹಾಗಾದರೆ ? ‘
‘ ಅಮಲು ತರುವ , ಅಮಲು ತರಿಸಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ದೇವರುಗಳು ನನಗೆ ಅನ್ಯದೇವರುಗಳು ‘
ಹಾಗಾದರೆ ” ದೇವರು , ಧರ್ಮಗಳು ಅಮಲು ಪದಾರ್ಥ” ಅಂತಾ ಕಾರ್ಲ್ ಮಾರ್ಕ್ಸ್ ಹೇಳಿರುವುದು ?’
‘ ಕಾರ್ಲ್ ಮಾರ್ಕ್ಸ್ ಹಾಗೆ ಹೇಳಿಲ್ಲ !’
‘ what , ಏನಂದೆ ನೀನು ? ‘
‘ ಒಬ್ಬ ತತ್ವಜ್ಞಾನಿ ಹಾಗೆ ಹೇಳಿರಲಿಕ್ಕೆ ಸಾಧ್ಯವಿಲ್ಲ ಎಂದೆ ‘
“ಧರ್ಮ ಅಫೀಮು ” . ಅಂತಾ ಮಾರ್ಕ್ಸ್ ಹೇಳಿದಾನೆ , ಹೇಳಿದಾನೆ , ಹೇಳಿದ್ದಾನೆ !’
‘ ಧರ್ಮ ಅಫೀಮು …. ಅಂತಾ ಹೇಳಿದಾನೆ ಹೌದು , ಆದರೆ … ‘
‘ ಆದರೆ ?’
‘ ಆದರೆ , ಧರ್ಮ ಅಫೀಮು ಆದ ನಂತರ ಅಲ್ಲಿ ಪೂರ್ಣ ವಿರಾಮವಿಲ್ಲ , ಅಲ್ಪ ವಿರಾಮ ಇದೆ
‘ ಅಲ್ಪ ವಿರಮಿಸಿಕೊಂಡ ನಂತರ ? ‘
‘ ಅಲ್ಪವಿರಾಮದ ನಂತರ ವಾಕ್ಯ ಮುಂದುವರೆಯುತ್ತದೆ ‘
‘ ಧರ್ಮ ಅಫೀಮು , ಅದು ಭರವಸೆಯಿಲ್ಲದವನ ಕಟ್ಟಕಡೆಯ ಭರವಸೆ, ಹತಾಷನಾದವನು ಬಯಸುವ ಆಸರೆ , ಅದನ್ನ ಕಿತ್ತು ನೀನು ಗಾಯಗೊಳಿಸುವುದಾದರೆ , ಆ ಮಣ್ಣಿಗೆ ಆದ ಗಾಯದಲ್ಲಿ ನೀನು ಧರ್ಮವು ಕೊಟ್ಟಷ್ಟೇ ಭರವಸೆಯನ್ನ ಕಟ್ಟಿಕೊಡುವ ಜೀವವೃಕ್ಷದ ಕನಸನ್ನ ಕಟ್ಟಿಕೊಡಬೇಕು ‘
‘ ಹೇಯ್ , ಅದು ಇಂಗ್ಲೀಷಿನಲ್ಲಿ ಇನ್ನೂ ಚನ್ನಾಗಿದೆ ‘
‘ Religion is the opium of the masses , its the hope of the hopeless world , its the distress of the distressed ; if you want to replace its like making wounds , if you want to replace it, you need to replace it with same hope that religion has given him ‘
‘ ಯಾವುದೋ ಅದು , ಅಷ್ಟೇ ಭರವಸೆಯನ್ನ ಕಟ್ಟಿಕೊಡುವದು ? !’
‘ ಈ ಬೆಟ್ಟ , ಬೆಟ್ಟದಿಂದ ಜಿನುಗುವ ನೀರು , ಬಿದಿರು ಕೊಳವೆಗೆ ಬಾಯಾನಿಸಿ ಕುಂತಿರುವ ಬಿಂದಿಗೆಗಳು ‘
[ ಮಾತೃದೇವತೆಗಳ ಬಗ್ಗೆ ಅಧ್ಯಯನ ಮಾಡಿರುವ ಪಶ್ಚಿಮದ ಲೇಖಕಿಯೊಬ್ಬಳ Original Goddesses ಓದಿದ ನಂತರ ಮಾಡಿಕೊಂಡಿದ್ದ ಟಿಪ್ಪಣಿ ]
ದೇವಸ್ಥಾನಗಳು ಅಸಮಾನತೆಯ ಕೇಂದ್ರಗಳು, ದೇವಸ್ಥಾನಗಳು ದ್ವೇಷಸಾಧನೆಗಾಗಿ ವಿಷವುಣಿಸಿ ಕೊಲ್ಲುವ ವಧಾಸ್ಥಾನಗಳು, ದೇವಸ್ಥಾನಗಳು ಕೋಮುವಾದಿಗಳ ರಾಜಕೀಯ ಕೇಂದ್ರಗಳು, ದೇವಸ್ಥಾನಗಳು ಹುಸಿಜಾತ್ಯಾತೀತರು ಬೆಳೆಸುವ ಮೌಢ್ಯಕೇಂದ್ರಗಳು, ದೇವಸ್ಥಾನಗಳು ತಮ್ಮನ್ನು ಒಂದು ಧರ್ಮಕ್ಕೆ, ಜಾತಿಗೆ ಸೇರಿದವರೆಂದು ಬಿಂಬಿಸಿಕೊಳ್ಳಲು ಇರುವ ನಾಟಕ ಗೃಹಗಳು..
ಅದಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದಿಲ್ಲ.