
ಎಸ್ ಪಿ ವಿಜಯಲಕ್ಷ್ಮಿ
ಗಾಳಿಗಲುಗಿದ ಈ ಮಾಮರದೆಲೆಯ ಅಲುಗಲಿ ಕೇಳಿಸಿದ್ದು ನಿನ್ನದೇ ದನಿ
ಮರಮರ ಸದ್ದಿಗೆ ನನ್ನೆದೆ ಬಡಿತ ಏರಿ ಕೇಳ ಬಯಸಿದ್ದು ನಿನ್ನದೇ ದನಿ..
ಸುತ್ತ ಬಯಲಲಿ ಸುಳಿಯುತಿದೆ ಗಾಳಿ ಭರಭರನೆ ಬೀಸಿ
ಹೊತ್ತು ತಂದಿರಬಹುದೆ ಎಲ್ಲೋ ಕುಳಿತು ಹಾಡುತಿರುವ ನಿನ್ನದೇ ದನಿ..
ಅದೋ ನೋಡಲ್ಲಿ ಜಕ್ಕವಕ್ಕಿಗಳ ಮಿಥುನ ಚಿಲಿಪಿಲಿಯಲಿ
ಕಲರವದ ನವಿರು ಬಿಸಿಯುಸಿರು ತಾಗಿ ನೆನಪಾಗಿದ್ದು ಮತ್ತೆ ನಿನ್ನದೇ ದನಿ..

ಮರವ ತಬ್ಬಿರುವ ಲತೆಯ ಮೈತುಂಬ ಕಿಲಕಿಲನೆ ನಗುತಿದೆ ಮಲ್ಲೆ
ಆ ಹೂನಗುವಿನಲೂ ಜೇನರಸ ತೊಟ್ಟಿಕ್ಕಿ ಕಿವಿಯ ತಬ್ಬಿದ್ದು ನಿನ್ನದೇ ದನಿ..
ತಲೆಯೆತ್ತಿ ನೀಲಾಗಸಕೆ ನೋಟ ನೆಟ್ಟಿದ್ದೆ ಮೌನಭಾರದ ಬೇಸರದಲಿ
ಮೆಲ್ಲಯಾನದ ಆ ಬೆಳ್ಮೋಡ ಏನೋ ಗುನುಗುತ್ತಲಿತ್ತು ಅಲ್ಲೂ ನಿನ್ನದೇ ದನಿ..
ಸಾಕು ಸಂಗಾತಿ, ಸಾಕಿನ್ನು, ಬಳಿ ಬಂದು ಪಿಸುಗೊಮ್ಮೆ ನಲ್ಮೆಯಾ ನುಡಿಯೊಂದ
ಮರೆಯಬೇಕಿದೆ ದೂರದಲೆ ನಿಂತು ಕಾಡುತಿರುವ ಆ ನಿನ್ನದೇ ದನಿ..






ಧನ್ಯವಾದಗಳು “ಅವಧಿ” ನನ್ನ ಕವಿತೆಯನ್ನು ಪ್ರಕಟಿಸಿದ್ದಕ್ಕೆ…