ಮಂಜುನಾಥ ಮುರಲಾಪುರ
ಬಸವಳಿದ ಬಂಧುಗಳು ನಾವು ಬೊಗಸೆ ನೀರಿಗಾಗಿ
ಹಸಿದ ಹೋಟ್ಟಗೆ ಅಳಿದುಳಿದ ಅನ್ನಕ್ಕಾಗಿ
ಸಾವಿರಾರು ಕನಸಿನ ಸೂರಿಗಾಗಿ
ನಿಶ್ಚಂತೆಯ ನಿರುಮ್ಮಳದ ನಿದ್ದೆಗಾಗಿ
ಧಣಿಯ ಕಣ್ಣಿಗೆ ಕಾಣದಂತೆ ಮೈಮುಚ್ಚಿ
ದುಡಿದ ಬಿಡಿಗಾಸಿಗೆ ಕೈಚಾಚಿ
ಹೊಟ್ಟೆಯಲ್ಲೇ ಉಳಿದ ರಟ್ಟಗೆ ಬಾರದ ಸಿಟ್ಟಿಗೆ ಅವಡುಗಚ್ಚಿ
ದೂರುತಿರುವ ವ್ಯವಸ್ಥೆಯ ಎದುರು ಕಣ್ಮುಚ್ಚಿ
ಅ ಆ ಅಕ್ಷರದ ಅರಿವಿಗೆ
ಬೀದಿಯಲ್ಲಿ ಸಿಗುವ ದೇವರಿಗೆ
ಬಯಸಿರುವ ಒಳಗೊಳ್ಳುವಿಕೆಗೆ
ಬೇಕಾಗಿರುವ ಒಂದಾಗುವಿಕೆಗೆ
ಧಿಕ್ಕರಿಸಿ ನಿಲ್ಲುವ ಬಲವಿಲ್ಲದಿದ್ದರು
ಸ್ವಾಭಿಮಾನದ ಛಲದಿಂದ ನಾವು ಹೋರಾಡುತ್ತೇವೆ
ಬದುಕಿಗಾಗಿ, ನಮ್ಮವರ ಭವಿಷ್ಯತ್ತಿಗಾಗಿ
ನಾವು ನಾವೇ ಎಂಬ ಅಸ್ತಿತ್ವಕ್ಕಾಗಿ
ನೀವು ನಮ್ಮವರು ಎಂಬ ಸಮತೆಯ ಭಾವಕ್ಕಾಗಿ
ನಮ್ಮ ಮಹನೀಯರು ಬಿಟ್ಚುಹೋದ ಆದರ್ಶಕ್ಕಾಗಿ
ನಾವು ಹೋರಾಡುತ್ತೇವೆ…
0 ಪ್ರತಿಕ್ರಿಯೆಗಳು